ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಪ್ರಕರಣ
ಬೆಂಗಳೂರು, ಜೂ. 16 : ಕರ್ನಾಟಕದಲ್ಲಿ ಪ್ರತಿವರ್ಷ 45 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿದ್ದು, ಅವುಗಳಲ್ಲಿ 8 ಸಾವಿರದಷ್ಟು ಪ್ರಕರಣಗಳು ಸ್ತನ ಕ್ಯಾನ್ಸರಿಗೆ ಸಂಬಂಧಿಸಿರುತ್ತದೆ. ಇದು ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಲಿರುವುದು ನಿಜಕ್ಕೂ ಆಘಾತಕಾರಿ ಸಂಗತಿ.
ಕ್ಯಾನ್ಸರ್ ಚಿಕಿತ್ಸೆ ನೀಡುತ್ತಿರುವ ಸರಕಾರಿ ಆಸ್ಪತ್ರೆ ಕಿದ್ವಾಯಿ ಸಂಸ್ಥೆಯಲ್ಲೇ ಪ್ರತಿವರ್ಷ ದಾಖಲಾಗುವ 22 ಸಾವಿರ ಕ್ಯಾನ್ಸರ್ ಪ್ರಕರಣಗಳಲ್ಲಿ 850 ಸ್ತನ ಕ್ಯಾನ್ಸರ್ ಆಗುರುತ್ತವೆ ಎಂದು ಸಂಸ್ಥೆ ಹೇಳಿದೆ. ಕ್ಯಾನ್ಸರ್ ರೋಗ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಕಿದ್ವಾಯಿ ಸೋಮವಾರ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಇಷ್ಟೊಂದು ಪ್ರಕರಣಗಳು ದಾಖಲಾಗಲು ಕಾರಣವೇನು ಗೊತ್ತಾ? ಬದಲಾಗುತ್ತಿರುವ ಜೀವನಶೈಲಿ. ತಡವಾಗಿ ಮದುವೆಯಾಗುವುದು, ಮಕ್ಕಳು ಬೇಡ ಅನ್ನುವುದು, ಸ್ತನ್ಯಪಾನ ಮಾಡಿಸದಿರುವುದು, ಕುಡಿತ ಸಿಗರೇಟಿಗೆ ದಾಸರಾಗುವುದು, ನಗರೀಕರಣ, ಅತಿಯಾಗಿ ಗರ್ಭನಿರೋಧಕ ಮಾತ್ರೆ ನುಂಗುವುದು ಕ್ಯಾನ್ಸರ್ ರೋಗ ಉಲ್ಬಣವಾಗಲು ಕಾರಣ ಎಂದು ಹೇಳುತ್ತಾರೆ ವೈದ್ಯರು.
ಅತಿಯಾದ ನಗರೀಕರಣಕ್ಕೆ ಒಡ್ಡಿಕೊಂಡಿರುವ ಬೆಂಗಳೂರು ಸ್ತನ ಕ್ಯಾನ್ಸರ್ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಪಾಪ್ಯುಲೇಷನ್ ಬೇಸ್ಡ್ ಕ್ಯಾನ್ಸರ್ ರಿಜಿಸ್ಟ್ರಿ 2013ರಲ್ಲಿ ನಡೆಸಿದ ಅಧ್ಯಯನದಲ್ಲಿ ಈ ಆತಂಕಕಾರಿ ಸಂಗತಿ ಬಯಲಾಗಿದೆ. [ಬೆಂಗಳೂರು, ಭಾರತದ ನೂತನ ಸ್ತನ ಕ್ಯಾನ್ಸರ್ ರಾಜಧಾನಿ!]
ಅಮೆರಿಕದ ಫಿಲಡೆಲ್ಫಿಯಾದಲ್ಲಿ ಕ್ಯಾನ್ಸರ್ ಚಿಕಿತ್ಸಾ ತಜ್ಞೆಯಾಗಿರುವ ಶರ್ಮಿಳಾ ಐತಾಳ್ ಅವರು ಕ್ಯಾನ್ಸರ್ ರೋಗ ಹಬ್ಬುತ್ತಿರುವ ಮತ್ತು ಅದರ ಚಿಕಿತ್ಸಾ ವಿಧಾನದ ಕುರಿತು ವಿಸ್ತೃತವಾಗಿ ಮಾತನಾಡಿದರು. ಭಾರತಕ್ಕಿಂತ ಅಮೆರಿಕದಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯ ಡಾ. ಎಂ. ವಿಜಯಕುಮಾರ್ ಅವರು, ಸ್ತನ ಕ್ಯಾನ್ಸರ್ ಆಗುವುದನ್ನು ತಡೆಗಟ್ಟಲು ಸಾಧ್ಯವಿಲ್ಲ. ಆದರೆ, ಆಗಾಗ ತಪಾಸಣೆ ಮಾಡಿಸುವುದರಿಂದ ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತವಾದ ಚಿಕಿತ್ಸೆ ಕೊಡಿಸಬಹುದು ಎಂದು ಅಭಿಪ್ರಾಯಪಟ್ಟರು.