ಬ್ರಾಹ್ಮಣರನ್ನು ಹಿಯಾಳಿಸಿದ ಜಾರಕಿಹೊಳಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರು, ಏಪ್ರಿಲ್ 20: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಸಚಿವರಾಗಿರುವ ಸತೀಶ್ ಜಾರಕಿಹೊಳಿ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ದೇಶದ ಸೇನೆಯಲ್ಲಿ ದೇಶಪಾಂಡೆ, ಕುಲಕರ್ಣಿ, ಜೋಷಿ ಸೇರಿದಂತೆ ಬ್ರಾಹ್ಮಣರು ಜೀವ ಬಿಟ್ಟ ಇತಿಹಾಸವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ಮತ್ತು ಒಂದು ಸಮಾಜದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದು ಚುನಾವಣಾ ಆಯೋಗ ವಿಧಿಸಿರುವ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ದೂರಿನಲ್ಲಿ ಮಹಾಸಭಾ ಹೇಳಿದೆ. ಮಹಾಸಭಾದ ಅಧ್ಯಕ್ಷ ಕೆ.ಎನ್. ವೇಂಕಟನಾರಾಯಣ್, ಯಾವುದೇ ಜಾತಿಯ ವಿರುದ್ಧ ಜನಪ್ರತಿನಿಧಿಗಳು ಮಾತನಾಡುವುದನ್ನು ಮಹಾಸಭಾ ಖಂಡಿಸುತ್ತದೆ ಮತ್ತು ಇಂತಹ ಹೇಳಿಕೆ ನೀಡಿರುವ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬ್ರಾಹ್ಮಣರನ್ನು ಕೆಣಕಿದ ಜಾರಕಿಹೊಳಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಆದರೆ ಇತಿಹಾಸವನ್ನೇ ತಿಳಿಯದ ಜಾರಕಿಹೊಳಿ ಒಂದು ಸಮುದಾಯದ ಜನರ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಮಹಾಸಭಾ ದೂರಿದೆ.
ಸತೀಶ್ ಜಾರಕಿಹೊಳಿ ಹೇಳಿಕೆ
ಏಪ್ರಿಲ್ 16 ರಂದು ಬೆಳಗಾವಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸತೀಶ್ ಜಾರಕೊಹೊಳಿ ಅವರು, "ದೇಶದ ಸೇನೆಯಲ್ಲಿ ದಲಿತರು, ಹಿಂದುಳಿದವರು, ಮುಸ್ಲಿಮರು ಹೆಚ್ಚಾಗಿ ಪ್ರಾಣತ್ಯಾಗ ಮಾಡಿದ್ದಾರೆಯೇ ಹೊರತು ದೇಶಪಾಂಡೆ, ಕುಲಕರ್ಣಿ, ಜೋಶಿ ಸೇರಿದಂತೆ ಬ್ರಾಹ್ಮಣರು ಸೇನೆಗಾಗಿ ಜೀವ ಬಿಟ್ಟ ಇತಿಹಾಸವಿಲ್ಲ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಹರಿಪ್ರಸಾದ್ ಗೆ ಬೆಂಬಲ ವದಂತಿ: ಸ್ಪಷ್ಟನೆ ನೀಡಿದ ಬ್ರಾಹ್ಮಣ ಮಹಾಸಭಾ
ದೂರು ನೀಡಿದ ನಿಯೋಗ
ಈ ಸಂಬಂಧ ಶುಕ್ರವಾರ ಮಹಾಸಭಾದ ಉಪಾಧ್ಯಕ್ಷ ಶಂಕರನಾರಾಯಣ್ ಮತ್ತು ಪ್ರಧಾನ ಕಾರ್ಯದರ್ಶಿ ರಾಂ ಪ್ರಸಾದ್ ನೇತೃತ್ವದಲ್ಲಿ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿದ್ದ ನಿಯೋಗವು ಈ ಮನವಿಯನ್ನು ಆಯುಕ್ತರಿಗೆ ಸಲ್ಲಿಸಿತು. ಈ ಸಂದರ್ಭದಲ್ಲಿ ಎಸ್.ಎನ್. ನರಸಿಂಹಮೂರ್ತಿ, ಕನ್ನಡ ತಿಂಡಿ ಕೇಂದ್ರದ ರಾಮಚಂದ್ರ ಸೇರಿದಂತೆ ಮಹಾಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸೇನೆಯಲ್ಲಿ ಸಕ್ರಿಯರಾಗಿರುವ ಬ್ರಾಹ್ಮಣರು ಸಾಕಷ್ಟಿದ್ದಾರೆ
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಂಕರ್ ನಾರಾಯಣ್, ಸಚಿವ ಸತೀಶ್ ಜಾರಕಿಹೊಳಿ ಆಡಿರುವ ಮಾತುಗಳಿಂದ ಸಮುದಾಯಕ್ಕೆ ತೀವ್ರ ನೋವಾಗಿದೆ. ಸಚಿವರ ಹೇಳಿಕೆ ಸತ್ಯಕ್ಕೆ ದೂರವಾದುದು, ಬ್ರಾಹ್ಮಣ ಸಮುದಾಯದವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಸಾಕಷ್ಟು ಉದಾಹರಣೆಗಳಿವೆ ಅಂತೆಯೇ ಸೇನೆಯಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ, ಇದನ್ನು ಸಚಿವರು ಅರಿಯಬೇಕು ಎಂದು ಆಗ್ರಹಪಡಿಸಿದರು.
ಬಿಕೆ ಹರಿಪ್ರಸಾದ್ ವಿವಾದ
ಮೂರ್ನಾಲ್ಕು ದಿನಗಳ ಹಿಂದಷ್ಟೇ, ಬ್ರಾಹ್ಮಣರು ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾರೆ ಎಂಬ ಹೇಳಿಕೆ ನೀಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಅವರ ನಡೆಯನ್ನು ಮಹಾಸಭಾ ಖಂಡಿಸಿತ್ತು. ಜೊತೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರೂ, ಕಾಂಗ್ರೆಸ್ ಗೆ ಬ್ರಾಹ್ಮಣರ ಬೆಂಬಲವಿದೆ ಎಂದಿದ್ದರು. ಈ ಎಲ್ಲಾ ಬೆಳವಣಿಗೆಯನ್ನು ಮಹಾಸಭಾ ಸಾರಾಸಗಟಾಗಿ ಖಂಡಿಸಿದ್ದು, ಚುನಾವಣೆಗಾಗಿ ಬ್ರಾಹ್ಮಣ ಸಮುದಾಯದ ಹೆಸರನ್ನು ಬಳಸಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದೆ.