ದೇಶ, ಹಿಂದೂ ಧರ್ಮ ಉಳಿದರೆ ಬ್ರಾಹ್ಮಣ ಉಳಿಯುತ್ತಾನೆ: ಪೇಜಾವರ ಶ್ರೀ
ಬೆಂಗಳೂರು, ಏಪ್ರಿಲ್ 25: ''ಈ ದೇಶ ಉಳಿದರೆ ಹಿಂದೂ ಸಮಾಜ ಉಳಿದೀತು, ಹಿಂದೂ ಸಮಾಜ ಉಳಿದರೆ ಬ್ರಾಹ್ಮಣ ಉಳಿಯುತ್ತಾನೆ. ಈ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಮಾಧ್ವ ಬ್ರಾಹ್ಮಣ ಮಹಾಸಭಾ ಮುಂದಡಿ ಇರಿಸಬೇಕು" ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಕರೆ ನೀಡಿದರು.
ಇಂದು (ಗುರುವಾರ) ಚಾಲನೆ ಸಿಕ್ಕಿರುವ ಅಖಿಲ ಕರ್ನಾಟಕ ಮಾಧ್ವ ಮಹಾಸಭಾವು ಸಮಾಜದ ಎಲ್ಲ ಜಾತಿ- ಜನಾಂಗಗಳಿಗೆ ಸಹಾಯ ಮಾಡುವ ಮೂಲಕ ದೇಶದ ಏಳಿಗೆಗೆ ಶ್ರಮಿಸಲಿ ಎಂದರು. ಚಾಮರಾಜಪೇಟೆಯಲ್ಲಿರುವ ಕೋಟೆ ಹೈಸ್ಕೂಲ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಾಧ್ವ ಮಹಾಸಭಾಗೆ ಚಾಲನೆ ನೀಡಿ, ಅವರು ಮಾತನಾಡಿದರು.
ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಅಸ್ತಿತ್ವ ಯಾರಿಗೂ ಮಾರಕವಲ್ಲ. ಇದು ಪೂರಕ ಬೆಳವಣಿಗೆ. ಇಂತಹ ಇನ್ನಷ್ಟು ಸಂಘಟನೆಗಳು ಬಂದರೂ ಅವು ಸಮಾಜಕ್ಕೆ ಅಗತ್ಯವಿದೆ. ಎಲ್ಲರೂ ಒಟ್ಟಿಗೆ ಮುನ್ನಡೆಯುವುದರಿಂದ ಸಮಾಜಕ್ಕೆ ಒಳಿತಾಗಲಿದೆ ಎಂದ ಶ್ರೀಗಳು, ಇಡೀ ಮಾಧ್ವ ಸಮುದಾಯವೇ ಒಂದು ಕುಟುಂಬದಂತೆ ಇರಬೇಕು. ಇಡೀ ಬ್ರಾಹ್ಮಣ ಸಮುದಾಯ ಒಂದೇ ಕುಟುಂಬದಂತೆ ಇರಬೇಕು. ಆ ಮೂಲಕ ಕಲ್ಯಾಣ ಸಮಾಜದ ನಿರ್ಮಾಣ ಸಾಧ್ಯವಾಗಬೇಕು ಎಂದರು.
ಹಿಂದೂ ಧರ್ಮ ಉಳಿದರೆ ಮಾತ್ರ ಬ್ರಾಹ್ಮಣ ಉಳಿಯಬಹುದು
ಭಾರತ, ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ಉಳಿದರೆ ಮಾತ್ರ ಬ್ರಾಹ್ಮಣ ಉಳಿಯಲು ಸಾಧ್ಯ ಎಂದ ವ್ಯಾಸರಾಜ ಮಠದ ಶ್ರೀ ವಿದ್ಯಾಧೀಶ ಸ್ವಾಮಿಗಳು, ನಮ್ಮ ದೇಶದಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತದೆ. ಆ ಶಾಲೆಗಳನ್ನು ಹಿಂದೂಗಳೇ ಆರಂಭಿಸುತ್ತಾರೆ. ಆದರೆ ಕೇಂಬ್ರಿಡ್ಜ್ ಸೇರಿದಂತೆ ಇತರೆ ವಿದೇಶಿ ಹೆಸರುಗಳನ್ನು ಶಾಲೆಗಳಿಗೆ ಇರಿಸುತ್ತಾರೆ. ಇದೇಕೆ ಇಂತಹ ವಿದೇಶಿ ವ್ಯಾಮೋಹ? ನಮ್ಮ ಸನಾತನ ಧರ್ಮ, ಸಂಸ್ಕೃತಿ, ಪರಂಪರೆ ಬಗ್ಗೆ ಪ್ರಾಥಮಿಕ ಶಿಕ್ಷಣದಿಂದಲೇ ಹೇಳಿಕೊಡುವ ಕೆಲಸ ಆಗಬೇಕಿದೆ. ಇನ್ನು ಎಲ್ಲ ಕೆಲಸಗಳು ನಡೆಯುತ್ತಿವೆ. ಹೀಗಿದ್ದಾಗ ಮಾಧ್ವ ಮಹಾಸಭಾ ಎಂಬ ಸಂಸ್ಥೆ ಅಗತ್ಯವಿತ್ತೆ ಎಂಬ ಪ್ರಶ್ನೆಗೆ ಅವಕಾಶವೇ ಇಲ್ಲ, ಮಾಡುವುದು ಇನ್ನೂ ಬೇಕಾದಷ್ಟಿದೆ, ಇಂತಹ ಇನ್ನಷ್ಟು ಸಂಘಟನೆಗಳು ಬಂದರೂ ಮಾಡುವಷ್ಟು ಕೆಲಸಗಳಿವೆ ಎಂದರು.
ಬ್ರಾಹ್ಮಣರಲ್ಲಿ ಮಾಧ್ವರ ಸಂಖ್ಯೆ ಕಡಿಮೆಯಿದೆ
ಬ್ರಾಹ್ಮಣ ಸಮುದಾಯ ಅದರಲ್ಲೂ ಮಾಧ್ವ ಸಮುದಾಯ ಅಲ್ಪಸಂಖ್ಯಾತರಿದ್ದಂತೆ. ಇದೇ ಅಲ್ಲದೆ, ಇತರೆ ಸಮುದಾಯದವರು ರಾಜಕೀಯ ಸೇರಿದಂತೆ ವಿವಿಧ ಸ್ವಾರ್ಥ ಲಾಭಕ್ಕಾಗಿ ಬ್ರಾಹ್ಮಣ ಸಮುದಾಯದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದನ್ನು ಕಾಣುತ್ತಿದ್ದೇವೆ ಎಂದ ಅವರು, ಅದಕ್ಕೆ ಇತ್ತೀಚಿನ ಘಟನೆಯೊಂದನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ಒಂದು ದೇಶ ಸುಭಿಕ್ಷವಾಗಿರಲು ಎಲ್ಲ ಸಮುದಾಯಗಳು ಅಗತ್ಯ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ವ್ಯಾಸರಾಜ ಮಠದ ಪೀಠಾಧಿಪತಿಗಳು ಅಭಿಪ್ರಾಯ ಪಟ್ಟರು.
ನಿತ್ಯ ಕರ್ತವ್ಯ-ಕರ್ಮಗಳನ್ನು ಮಾಡಬೇಕು
ಬ್ರಾಹ್ಮಣ್ಯ ಉಳಿಯದಿದ್ದರೆ, ಹಿಂದುತ್ವ ಉಳಿಯದಿದ್ದರೆ ಬ್ರಾಹ್ಮಣ ಮಹಾಸಭಾದ ಕಾರ್ಯಗಳು ವ್ಯರ್ಥವಾದೀತು ಎಂದು ಹೇಳಿದ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರು, ಅಖಿಲ ಕರ್ನಾಟಕ ಮಹಾಸಭಾ ಮತ್ತು ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಈ ಚಿಂತನೆಗಳ ಹಿನ್ನೆಲೆಯಲ್ಲಿ ತಮ್ಮ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು. ಬ್ರಾಹ್ಮಣರು ತಮ್ಮ ನಿತ್ಯ ಕರ್ತವ್ಯ- ಕರ್ಮಗಳನ್ನು ಮಾಡಬೇಕು. ಅದಕ್ಕೆ ನಮ್ಮಲ್ಲಿ ಅಂತರ್ ಸತ್ವ ಇರಬೇಕು. ಇದರಿಂದ ಮಂತ್ರದ ಬಲ ಲಭಿಸಲಿದೆ ಎಂದು ಪ್ರತಿಪಾದಿಸಿದ ಉತ್ತರಾದಿಮಠದ ಶ್ರೀಗಳು, ಇಂದು ಹಿಂದುತ್ವದ ಉಳಿವಿಗಾಗಿ ಹೋರಾಟ ಮಾಡುವವರು ಹಲವರಿದ್ದಾರೆ. ಅವರೆಲ್ಲರೂ ಅಭಿನಂದನೀಯರೇ- ಅಭಿನಂದನಾರ್ಹರೇ. ಇದರ ಜತೆಗೆ ಹಿಂದುತ್ವ ನಮ್ಮಲ್ಲಿದೆಯೇ ಎಂಬುದನ್ನೂ ಅರಿತುಕೊಳ್ಳಬೇಕು ಎಂದು ಹೇಳಿದರು.
ಅಪಾರ ಸಂಖ್ಯೆಯಲ್ಲಿ ಜನರು ಭಾಗಿ
ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ್, ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್, ಬಿಜೆಪಿ ಮುಖಂಡ ಸುಬ್ಬನರಸಿಂಹ (ಸುಬ್ಬಣ್ಣ), ಎ.ಕೆ.ಬಿ.ಎಂ.ಎಸ್. ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮೀಕಾಂತ್, ಮಾಧ್ವಮಹಾಸಭಾದ ಅಧ್ಯಕ್ಷ ಡಾ.ಕೆ. ರಾಮಕೃಷ್ಣ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು. ಯಶಸ್ವಿಯಾಗಿ ಕಾರ್ಯಕ್ರಮ ನೆರವೇರಿತು.