ಉತ್ತರ, ದಕ್ಷಿಣ ಸಂಘರ್ಷ ಕುರಿತ ಪುಸ್ತಕ ಬಿಡುಗಡೆ
ಬೆಂಗಳೂರು, ಮೇ. 29 : ಉತ್ತರ ಭಾರತದವರು ದಕ್ಷಿಣ ಭಾರತದವರನ್ನು ಮದ್ರಾಸಿಗಳೆಂದು ಕಡೆಗಣಿಸುವುದು, ದಕ್ಷಿಣ ಭಾರತದ ಜನತೆ ಹಿಂದಿ ಭಾಷೆಯನ್ನು ನಮ್ಮ ಮೇಲೆ ಏಕೆ ಹೇರುತ್ತೀರೆಂದು ಉತ್ತರದವರನ್ನು ದೂರುವುದು ಹಲವು ದಶಕಗಳಿಂದ ನಡೆದುಕೊಂಡೇ ಬಂದಿದೆ. ಇಂಥ ಹಲವಾರು ಸಂಘರ್ಷಗಳು ಭಾರತವನ್ನು ಉತ್ತರ ಮತ್ತು ದಕ್ಷಿಣ ಎಂದು ಎರಡು ತುಕುಡಿಗಳನ್ನಾಗಿ ಮಾಡಿದೆ.
ಇದು ಭಾಷೆ, ಸಂಸ್ಕೃತಿ, ಪರಂಪರೆ, ಜನಜೀವನಕ್ಕೆ ಮಾತ್ರ ಸೀಮಿತವಾಗಿಲ್ಲ. ಶಿಕ್ಷಣ, ಪ್ರಾದೇಶಿಕ ರಾಜಕೀಯ, ಆರ್ಥಿಕ ಅಭಿವೃದ್ಧಿ, ಆಡಳಿತ, ಮಹಿಳಾ ಸಬಲೀಕರಣ, ಉದ್ಯಮ.. ಹೀಗೆ ಹಲವಾರು ಸಂಗತಿಗಳು ಉತ್ತರ ಮತ್ತು ದಕ್ಷಿಣ ಭಾರತವನ್ನು ತುಲನಾತ್ಮಕವಾಗಿ ನೋಡುವಂತೆ ಮಾಡಿವೆ.
ಉತ್ತರ ಮತ್ತು ದಕ್ಷಿಣ ಭಾರತದ ತೌಲನಿಕ ಅಧ್ಯಯನವನ್ನು ಒಳಗೊಂಡ, ಸ್ಯಾಮ್ಯುಯೆಲ್ ಪಾಲ್ ಮತ್ತು ಕಲಾ ಸೀತಾರಾಂ ಶ್ರೀಧರ್ ಜಂಟಿಯಾಗಿ ಬರೆದಿರುವ 'The Paradox of India's North-South Divide' ಆಂಗ್ಲ ಪುಸ್ತಕವೊಂದು ಜೂನ್ 2, ಮಂಗಳವಾರದಂದು, ಎಚ್ಎಎಲ್ ಏರ್ಪೋರ್ಟ್ ರಸ್ತೆಯಲ್ಲಿರುವ ಬೆಂಗಳೂರಿನ ರಾಯಲ್ ಆರ್ಕಿಡ್ ಹೋಟೆಲಿನಲ್ಲಿ ಸಂಜೆ 6.30ಕ್ಕೆ ಬಿಡುಗಡೆಯಾಗುತ್ತಿದೆ.
ಪಬ್ಲಿಕ್ ಅಫೇರ್ಸ್ ಸೆಂಟರ್ ಪ್ರಕಟಿಸುತ್ತಿರುವ ಈ ಪುಸ್ತಕ ತಮಿಳುನಾಡು ಮತ್ತು ಉತ್ತರಪ್ರದೇಶವನ್ನು ತುಲನಾತ್ಮಕ ಅಧ್ಯಯನಕ್ಕೆ ಪರಿಗಣಿಸಿದೆ. 50ರ ದಶಕದಲ್ಲಿ ಉತ್ತರ ಭಾರತ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಆರ್ಥಿಕವಾಗಿ ಮುಂದಿತ್ತು. ಆದರೆ, 80ರ ದಶಕದ ನಂತರ ಎಲ್ಲ ಹಿಂದೆಮುಂದೆ ಆಗಿದ್ದು, ದಕ್ಷಿಣ ಭಾರತ ಧಾಪುಗಾಲು ಹಾಕಿದೆ. ಈ ಎಲ್ಲ ಸಂಗತಿ ಕುರಿತಂತೆ ಪುಸ್ತಕ ಬಿಡುಗಡೆಯಲ್ಲಿ ಆಸಕ್ತಿಕರ ಚರ್ಚೆ ಕೂಡ ನಡೆಯಲಿದೆ.
ಪಬ್ಲಿಕ್ ಅಫೇರ್ಸ್ ಸೆಂಟರ್ ನ ಚೇರ್ಮನ್ ಆಗಿರುವ ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಿದ್ದಾರೆ. ಇಸ್ರೋದ ಮಾಜಿ ಅಧ್ಯಕ್ಷ, ಯೋಜನಾ ಆಯೋಗದ ಮಾಜಿ ಸದಸ್ಯ ಮತ್ತು ಮಾಜಿ ಸಂಸದ ಡಾ. ಕೆ. ಕಸ್ತೂರಿರಂಗನ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಪ್ರೊ. ಎಸ್ಎಲ್ ರಾವ್ ಅವರು ಪುಸ್ತಕ ಕುರಿತು ಮಾತನಾಡಲಿದ್ದಾರೆ. ನಂತರ ಪುಸ್ತಕಾಸಕ್ತರು, ಅತಿಥಿಗಳೊಂದಿಗೆ ಚರ್ಚೆ ನಡೆಯಲಿದೆ. ಕೊನೆಗೆ ಡಾ. ಕಲಾ ಸೀತಾರಾಂ ಶ್ರೀಧರ್ ಅವರು ವಂದನಾರ್ಪಣೆ ಮಾಡಲಿದ್ದಾರೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಕಾಂತಿ - +91 80 2783 9918/19/20, ಈಮೇಲ್ - [email protected].