ಇ- ಮೇಲ್ ಮೂಲಕ ಬಾಂಬ್ ಬೆದರಿಕೆ: ಬೆಂಗಳೂರಿನ 6 ಶಾಲೆಗಳಲ್ಲಿ ತೀವ್ರ ಶೋಧ
ಬೆಂಗಳೂರು, ಏ. 08: ರಾಜಧಾನಿಯ ಆರು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕ ಇ ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ಅರು ಶಾಲೆಗಳಲ್ಲಿ ತಪಾಸಣೆ ನಡೆಸಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳು ಅತಂಕಕ್ಕೆ ಒಳಗಾಗಿದ್ದಾರೆ.
11 ಗಂಟೆಗೆ ಬೆದರಿಕೆ ಇ ಮೇಲ್ : [email protected] ಎಂಬ ಇ ಮೇಲ್ ನಿಂದ ಬೆದರಿಕೆ ಪತ್ರವನ್ನು ರವಾನಿಸಲಾಗಿದೆ. ಹನ್ನೊಂದು ಗಂಟೆಗೆ ಬೆದರಿಕೆ ಇ ಮೇಲ್ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರಿನ ಆರು ಶಾಲೆಗಳಿಗೆ ಬಾಂಬ್ ಪತ್ತೆ ದಳದೊಂದಿಗೆ ಪೊಲೀಸರು ತೆರಳಿ ತಪಾಸಣೆ ನಡೆಸಿದರು. ಶಾಲೆಗಳಿಗೆ ಬಾಂಬ್ ಇಡಲಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಆರು ಶಾಲೆಗಳ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿ ಶಾಲೆಗಳಿಂದ ಹೊರ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
Breaking: ಬೆಂಗಳೂರಿನ ನಾಲ್ಕು ಶಾಲೆಗಳಿಗೆ ಬಾಂಬ್ ಇಟ್ಟಿದ್ದೇವೆ: ಜೋಕ್ ಅಲ್ಲ!
A Very power full bomb has been planted in your school, attention is not a joke. this is not a joke, a very powerfull bomb has been planted in your school, immediatly call the police and sappers hundreds of lives may suffer, including yours , do not deleay. now every thing is only in your hands ! ಎಂದು ಬೆದರಿಕೆ ಇಮೇಲ್ ನಲ್ಲಿ ಬರೆಯಲಾಗಿದೆ.
ಅಂದರೆ, ತುಂಬಾ ಪವರ್ ಪುಲ್ ಬಾಂಬ್ ನಿಮ್ಮ ಶಾಲೆಯಲ್ಲಿ ಇಡಲಾಗಿದೆ. ಇದು ಜೋಕ್ ಅಲ್ಲ, ಗಂಭೀರವಾಗಿ ಪರಿಗಣಿಸಿ. ತುಂಬಾ ಶಕ್ತಿ ಶಾಲಿ ಬಾಂಬ್ ನ್ನು ನಿಮ್ಮ ಶಾಲೆಗಳಲ್ಲಿ ಇಡಲಾಗಿದೆ. ಕೂಡಲೇ ಪೊಲೀಸರಿಗೆ ತಿಳಿಸಿ, ನೂರಾರು ಜನರ ಜೀವ ಹೋಗಲಿದೆ. ತಡ ಮಾಡಬೇಡಿ. ಈಗ ಎಲ್ಲವೂ ನಿಮ್ಮ ಕೈಯಲ್ಲಿದೆ ಎಂದು ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಇಮೇಲ್ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರಿನ ಆರು ಶಾಲೆಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆರು ಖಾಸಗಿ ಶಾಲೆಗಳಿಗೆ ಬೆದರಿಕೆ:
ಮಹದೇವಪುರದ ಗೋಪಾಲನ್ ಇಂಟರ್ ನ್ಯಾಷನಲ್ ಶಾಲೆ, ಗೋವಿಂದಪುರದಲ್ಲಿರುವ ಇಂಡಿಯನ್ ಪಬ್ಲಿಕ್ ಶಾಲೆ, ಹೆಬ್ಬಗೋಡಿಯಲ್ಲಿರುವ ಎಬ್ನೈಸರ್ ಇಂಟರ್ ನ್ಯಾಷನಲ್ ಸ್ಕೂಲ್, ವರ್ತೂರು ಬಳಿ ಇರುವ ಡೆಲ್ಲಿ ಪಬ್ಲಿಕ್ ಶಾಲೆ, ಹೆಣ್ಣೂರು ಬಳಿಯಿರುವ ವಿನ್ಸೆಂಟ್ ಪಲ್ಲೋಟಿ ಶಾಲೆ ಹಾಗೂ ಮತ್ತೊಂದು ಖಾಸಗಿ ಶಾಲೆ ಬೆದರಿಕೆಗೆ ಒಳಗಾಗಿವೆ. ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇಮೇಲ್ ಬಂದಿರುವ ವಿಚಾರವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.
ಹುಸಿ ಬಾಂಬ್ ಕರೆ?
ಶಾಲೆಗಳಿಗೆ ಬೆದರಿಕೆ ಇ ಮೇಲ್ ಬಂದ ಕೂಡಲೇ ಸ್ಥಳೀಯ ಪೊಲೀಸರು ಆರು ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ಸತತ ಮೂರು ಗಂಟೆ ಶೋಧ ನಡೆಸಿದರೂ ಯಾವುದೇ ಬಾಂಬ್ ಪತ್ತೆಯಾಗಲಿಲ್ಲ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಸುಬ್ರಮಣೇಶ್ವರರಾವ್, 'ಇದೊಂದು ಹುಸಿ ಬಾಂಬ್ ಕರೆ. ಯಾರೂ ಸಹ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ. ಎಲ್ಲಾ ಶಾಲೆಗಳ ಆಡಳಿತ ಮಂಡಳಿಗಳ ಜತೆ ನಾವು ಸಂಪರ್ಕದಲ್ಲಿದ್ದೇವೆ. ಶೋಧ ಮಾಡುವ ಸಲುವಾಗಿ ಪೊಲೀಸರು ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಇದರಿಂದ ಭಯ ಭೀತರಾಗುವುದು ಬೇಡ' ಎಂದು ಕಿವಿಮಾತು ಹೇಳಿದ್ದಾರೆ.
ಬಹುತೇಕ ಶಾಲೆಗಳಲ್ಲಿ ಪರೀಕ್ಷೆ:
Recommended Video
ಶುಕ್ರವಾರ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಿತ್ತು. ಹೀಗಾಗಿ ಹುಸಿ ಬಾಂಬ್ ಕರೆಯಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಇದರ ನಡುವೆ ಇ ಮೇಲ್ ಜಾಡು ಹಿಡಿದು ಬೆಂಗಳೂರು ಸೈಬರ್ ತಜ್ಞರ ತಂಡ ತನಿಖೆ ನಡೆಸುತ್ತಿದೆ.