ಸಿದ್ದರಾಮಯ್ಯ ಪಿಎ, ದಿನೇಶ್ ಗುಂಡೂರಾವ್ ವಿರುದ್ಧ ಬಾಂಬ್ ನಾಗ ಆರೋಪ
ಪೊಲೀಸ್ ಇಲಾಖೆಯಲ್ಲಿಯೇ ಅನೇಕ ಕ್ರೈಂ ನಡೆಯುತ್ತಿದೆ ಎಂದು ಹೇಳಿರುವ ನಾಗ, ಹಣಕ್ಕಾಗಿ ಪೊಲೀಸರು ಏನು ಬೇಕಾದರೂ ಮಾಡುತ್ತಾರೆ ಎಂದು ಆರೋಪಿಸಿದ್ದಾನೆ ಬಾಂಬ್ ನಾಗ.
ಬೆಂಗಳೂರು, ಏಪ್ರಿಲ್ 22: ಅಕ್ರಮ ಹಣ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮಾಜಿ ಕಾರ್ಪೊರೇಟರ್ ಬಾಂಬ್ ನಾಗ, ಅಜ್ಞಾತ ಸ್ಥಳದಿಂದ ವಿವಾದಾತ್ಮಕ ಬಾಂಬ್ ಎಸೆದಿದ್ದಾನೆ. ತಾನು ಮಾತನಾಡಿರುವ ವಿಡಿಯೋ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿರುವ ನಾಗ, ಇಡೀ ಪೊಲೀಸ್ ಇಲಾಖೆಯೇ ಭ್ರಷ್ಟತನದಿಂದ ಕೂಡಿದೆ ಎಂದು ಆರೋಪಿಸಿದ್ದಾನೆ.
ಆದರೆ, ಪೊಲೀಸರ ಕೈಯ್ಯಿಗೆ ಸಿಗದೇ ತಪ್ಪಿಸಿಕೊಂಡು ಹೋಗಿರುವ ಬಾಂಬ್ ನಾಗ, ಎಲ್ಲಿಂದಲೋ ಕುಳಿತುಕೊಂಡು ಹೀಗೊಂದು ವಿಡಿಯೋ ಕಳುಹಿಸಿದರೆ ಅದನ್ನು ಕಾನೂನು ಮಾನ್ಯ ಮಾಡುವುದೇ ಅಥವಾ ನಾಗ ಹೇಳಿರುವ ಹೇಳಿಕೆಗಳಿಗೆ ಬೆಲೆ ಸಿಗುತ್ತದೆಯೇ ಎಂಬ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ವಿಡಿಯೋ ಆಧಾರಿತ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿರುವ ಜನರೂ ಒಬ್ಬ ಕ್ರಿಮಿನಲ್ ಹಿನ್ನಲೆ ಇರುವ ಮನುಷ್ಯ ಹೀಗೆ ಹೇಳುತ್ತಾನೆಂದರೆ ನಂಬಲು ಅಸಾಧ್ಯ ಎನ್ನುವಂಥ ಮಾತುಗಳೂ ಕೇಳಿಬಂದಿವೆ.
ಅದೇನೇ ಇರಲಿ ಅದೆಲ್ಲೋ ಕುಳಿತುಕೊಂಡು ದಕ್ಷ ಅಧಿಕಾರಿಗಳುಳ್ಳ ಪೊಲೀಸ್ ಇಲಾಖೆಯ ಮೇಲೆ ಹೀಗೆ ಬೆರಳು ತೋರಿಸುತ್ತಿರುವ ನಾಗ ಮಾಡಿರುವ ಆರೋಪಗಳ ಪ್ರಮುಖಾಂಶ ಇಲ್ಲಿವೆ.
- ಪೊಲೀಸ್ ಇಲಾಖೆಯಲ್ಲಿಯೇ ಅನೇಕ ಕ್ರೈಂ ನಡೆಯುತ್ತಿದೆ ಎಂದು ಹೇಳಿರುವ ನಾಗ, ಹಣಕ್ಕಾಗಿ ಪೊಲೀಸರು ಏನು ಬೇಕಾದರೂ ಮಾಡುತ್ತಾರೆ.
- ನನ್ನ ಮನೆ ಮೇಲೆ ಪೊಲೀಸ್ ರೈಡ್ ಆದಾಗ ಸಿಕ್ಕ ಹೊಸ ನೋಟುಗಳನ್ನು ಪೊಲೀಸರೇ ಬಾಚಿಕೊಂಡಿದ್ದಾರೆ.
- ಆಗಾಗ ಪೊಲೀಸರು ನನ್ನ ಮನೆಗೆ ಬಂದು ಮಾತುಕತೆ ನಡೆಸಿಕೊಂಡು ಹೋಗುತ್ತಿದ್ದರು. ಹಾಗೆ ಬರುವಾಗಲೆಲ್ಲಾ ನನಗೆ ಫೋನ್ ಮಾಡಿ ಸಿಸಿಟಿವಿ ಆಫ್ ಮಾಡುವಂತೆ ಕೋರಿ ಆನಂತರವಷ್ಟೇ ಮನೆಗೆ ಬಂದು ಮಾತುಕತೆ ನಡೆಸುತ್ತಿದ್ದರು.
- ನನ್ನ ಈ ಸ್ಥಿತಿಗೆ ದಿನೇಶ್ ಗುಂಡೂರಾವ್ ಹಾಗೂ ಪಿಸಿ ಮೋಹನ್ ಕಾರಣ. ಒಮ್ಮೆ ನಮ್ಮ ಮನೆಯ ಹತ್ತಿರ ನಡೆದಿದ್ದ ರಾಜಕೀಯ ಸಮಾರಂಭವೊಂದಕ್ಕೆ ಬಂದಿದ್ದ ದಿನೇಶ್ ಗುಂಡೂರಾವ್ ಅವರ ಬೆಂಬಲಿಗರ ಕಾರುಗಳನ್ನು ನಾನು ನಮ್ಮ ಮನೆಯ ಮುಂದುಗಡೆ ಹೋಗದಂತೆ ತಡೆದಿದ್ದೆ. ಇದಕ್ಕೆ ದಿನೇಶ್ ಗುಂಡೂರಾವ್ ಹೀಗೆ ಅನೇರವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ.
- ನನ್ನ ಮನೆಯಲ್ಲಿ ಸಿಕ್ಕ ಹಣವೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಪಿಎ ಮಂಜುನಾಥ್ ಅವರಿಗೆ ಸೇರಿದ್ದು. ಅದನ್ನು ಅವರು ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಸೇರಿದ ಹಣ ಎಂದು ಹೇಳಿ ನನ್ನ ಮನೆಯಲ್ಲಿ ಇಟ್ಟಿದ್ದರು. ಈ ದಂಧೆಯಲ್ಲಿ ಐವರು ಭಾಗಿಯಾಗಿದ್ದಾರೆ.
- ನಾನು ತುಂಬಾ ದಿನಗಳಿಂದ ಹಣದ ಬ್ಲಾಕ್ ಆ್ಯಂಡ್ ವೈಟ್ ದಂಧೆ ನಡೆಸುತ್ತಿದ್ದೆ. ಮುಖ್ಯಮಂತ್ರಿಯ ಸ್ಪೆಷಲ್ ಪಿಎ ಅವರಿಗೆ ಬೇಕಾದವರಿಂದಲೇ ನನ್ನಿಂದ ಹಲವಾರು ಮಂದಿಯ ಕಪ್ಪು ಹಣವನ್ನು ಬಿಳಿ ಮಾಡಿಸಿದ್ದಾರೆ.
- ನನಗೆ ಪೊಲೀಸ್ ಅಧಿಕಾರಿಗಳ ಬಣ್ಣ ಗೊತ್ತಿದೆ. ಹಾಗಾಗಿ, ನನ್ನನ್ನು ಕೊಲ್ಲಲು ಷಡ್ಯಂತ್ರ ನಡೆಸಿದ್ದ ಪೊಲೀಸರು ನನ್ನನ್ನು ಕೊಲ್ಲಲು 10 ಕೋಟಿ ರು. ಫಿಕ್ಸ್ ಮಾಡಿದ್ದಾರೆ ಆದರೆ, ದೇವರ ದಯೆಯಿಂದ ನಾನು ಅವರಿಗೆ ಸಿಕ್ಕಿಲ್ಲ.
- ನನ್ನ ಮನೆ ಶ್ರೀರಾಮಪುರದಲ್ಲಿದ್ದರೂ ಹೆಣ್ಣೂರು ಠಾಣೆಯಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲು. ಎಸ್ಸೈ ಶ್ರೀನಿವಾಸ್ ರಿಂದ ಪ್ರಕರಣ ದಾಖಲು. ನಾನು ಈವರೆಗೆ ಬಾಣಸವಾಡಿ, ಹೆಣ್ಣೂರು ಕಡೆ ಹೋಗಿಯೇ ಇಲ್ಲ. ಆದರೂ, ಅಲ್ಲಿ ನನ್ನ ವಿರುದ್ಧ ಕೇಸು ದಾಖಲಾಗಿದೆ.
- ಮೊದಲು ನನ್ನ ವಿರುದ್ಧದ ಆರೋಪಗಳಿಗೆ ಸಾಕ್ಷ್ಯ ಕೊಡಿ. ಆರೋಪಗಳನ್ನು ಸಾಬೀತು ಮಾಡಿ. ವಿನಾಕಾರಣ ಗೂಬೆ ಕೂರಿಸಬೇಡಿ.
- ಕಿಶೋರ್, ಮಧು, ಉಮೇಶ್, ಉಮೇಶ್ ಅಣ್ಣ ನವೀನ್ ಎಂಬುವರು ನನ್ನ ಮನೆಗೆ ಬಂದು ಬ್ಲಾಕ್ ಆ್ಯಂಡ್ ವೈಟ್ ದಂಧೆ ನಡೆಸುತ್ತಿದ್ದರು. ಉಮೇಶ್ ಕೈಯ್ಯಲ್ಲಿ 10 ಕೋಟಿ ರು. ಹಣ ಕಳುಹಿಸಿದ್ದ ಅಧಿಕಾರಿಗಳು.
- ನಾನು ತಮಿಳಿಗನಾಗಿ ಹುಟ್ಟಿದ್ದೇ ತಪ್ಪಾಯಿತು.
- ಪೊಲೀಸರೇ, ನನ್ನನ್ನು, ನನ್ನ ವಂಶವನ್ನು ಕಳ್ಳರ ವಂಶ ಎಂದು ಕರೆಯಬೇಡಿ.
- ಪೊಲೀಸ್ ಠಾಣೆಗಳೆಂದರೆ ಅವು ನ್ಯಾಯ ಕೊಡುವ ದೇವಾಲಯಗಳು. ಆದರೆ, ಶೇ. 90ರಷ್ಟು ಪೊಲೀಸರೇ ರೋಲ್ ಕಾಲ್ ನಡೆಸುತ್ತಾರೆ.
- ಹೈಕೋರ್ಟ್ ನಿಂದಲೇ ನನಗೆ ತಡೆಯಾಜ್ಞೆ ಸಿಕ್ಕಿದೆ. ಕೋರ್ಟಿಗಿಂತ ಪೊಲೀಸರು ದೊಡ್ಡವರಲ್ಲ.