ಎಲೆಕ್ಟ್ರಾನಿಕ್ ಸಿಟಿಯಲ್ಲಿ ಉಗ್ರರ ತಾಣ ಪತ್ತೆ, ಸುಧಾರಿತ ಸ್ಫೋಟಕ ವಸ್ತು ವಶ
ಬೆಂಗಳೂರು, ಸೆ. 25: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಂಗ್ಲಾದೇಶ ಮೂಲದ ಜಮಾತ್ ಉಲ್ ಮುಜಾಹಿದ್ದೀನ್ ಸಂಘಟನೆಯ ಅಡಗು ತಾಣ ಪತ್ತೆಯಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅಧಿಕಾರಿಗಳು ದಾಳಿ ನಡೆಸಿ, ಸುಧಾರಿತ ಸ್ಫೋಟಕ್ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಎನ್ಐಎ ಕಸ್ಟಡಿಯಲ್ಲಿರುವ ಜೆಎಂಬಿ ಉಗ್ರ ಜಾಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್ ವಿಚಾರಣೆ ವೇಳೆ ಎಲೆಕ್ಟ್ರಾನಿಕ್ ಸಿಟಿಯ ಅಡಗುತಾಣ ಬಗ್ಗೆ ತಿಳಿಸಿದ್ದಾನೆ. 2014ರ ಬುರ್ದ್ವಾನ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಕೌಸರ್ ಗೆ ದಕ್ಷಿಣ ಭಾರತದಲ್ಲಿ ಅಡಗುತಾಣಗಳ ನಿರಂತರ ಸಂಪರ್ಕವಿರುವುದು ಪತ್ತೆಯಾಗಿತ್ತು. ಅತ್ತಿಬೆಲೆ, ಕಾಡುಗೋಡಿ, ಕೆ. ಆರ್ ಪುರಂ, ಚಿಕ್ಕ ಬಾಣಾವಾರ, ಶಿಕಾರಿಪಾಳ್ಯ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಉಗ್ರರಿಗೆ ನೆರವಾಗುವ ಸಹಾಯಕರು ನೆಲೆಸಿದ್ದಾರೆ. ಸ್ಲೀಪರ್ ಸೆಲ್ ಗಳಂತೆ ಈ ತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಸುಧಾರಿತ ಸ್ಫೋಟಕ ಸಾಮಾಗ್ರಿಗಳ ಬಳಕೆ ಬಗ್ಗೆ ಮ್ಯಾನುಯಲ್, ಲೇಖನಗಳು, ಗ್ರೇನೇಡ್ ಮಾದರಿ ವಸ್ತು, ಪ್ಲಾಸ್ಟಿಕ್ ಟೇಪಿನಲ್ಲಿ ಸುತ್ತಿದ ಬ್ಯಾಟರಿಗೆ ಎಲೆಕ್ಟ್ರಿಕಲ್ ವೈರ್, ಕ್ಯಾಪಸಿಟರ್, ಮೂರು ಸ್ವಿಚ್ ಗಳು, ಒಂದು ಮೈಕ್ರೋ ಲಿಥಿಯಂ ಸೆಲ್ ಯುಳ್ಳ ಒಂದು ಪ್ಲಾಸ್ಟಿಕ್ ಪಾರದರ್ಶಕ ಬಾಕ್ಸ್ ಸಿಕ್ಕಿದೆ.
ಇದಲ್ಲದೆ ಕೈ ಗ್ಲೌಸ್, ಐಡೆಂಟಿಡಿ ಕಾರ್ಡ್, ಬಾಡಿಗೆ ಕ್ರಯಪತ್ರ, ಬೆಂಗಾಲಿ ಭಾಷೆಯಲ್ಲಿರುವ ಕೈಬರಹ ಪತ್ರ, ಒಂದು ಡಿಜಿಟಲ್ ಕೆಮೆರಾ, 2018ರಲ್ಲಿ ಬೆಂಗಳೂರಿನಲ್ಲಿ ಕದ್ದ ಬೆಳ್ಳಿ ಪಾತ್ರೆಗಳನ್ನು ಜಪ್ತಿ ಮಾಡಲಾಗಿದೆ.
ಕೃಷ್ಣಗಿರಿಯಲ್ಲಿ ರಾಕೆಟ್ ಪ್ರಯೋಗ
"ನಾನು ಹಾಗೂ ನನ್ನ ಸಹಚರರು ತಮಿಳುನಾಡಿನ ಕೃಷ್ಣಗಿರಿಯಲ್ಲಿ ಮೂರು ರಾಕೆಟ್ ಶೆಲ್ ಗಳನ್ನು ಪ್ರಯೋಗಕ್ಕೊಳಪಡಿಸಿದ್ದೆವು. ಸ್ಥಳೀಯವಾಗಿ ಸಿಕ್ಕ ಕಚ್ಚಾವಸ್ತುಗಳನ್ನು ಬಳಸಿ ಹಬೀಬುರ್ ರಾಕೆಟ್ ತಯಾರಿಸಿದ್ದ. ನಂತರ ನಿರ್ಜನ ಪ್ರದೇಶದಲ್ಲಿ ರಾಕೆಟ್ ಶೆಲ್ ಪ್ರಯೋಗ ಮಾಡಿದ್ದೆವು" ಎಂದು ವಿಚಾರಣೆ ವೇಳೆ ಕೌಸರ್ ಹೇಳಿದ್ದಾನೆ. ಎನ್ ಐಎಗೆ ಜಪ್ತಿ ಮಾಡಿರುವ ಸ್ಫೋಟಕ ವಸ್ತುಗಳಲ್ಲಿ 1.5 ವೋಲ್ಟ್ ಪ್ರಮಾಣದ 8 ಬ್ಯಾಟರಿಗಳಿವೆ. ಇದರ ಜೊತೆಯಲ್ಲಿ ರಾಕೆಟ್ ಶೆಲ್ ಲಾಂಚ್ ಮಾಡಲು ಪ್ಯಾಡ್, ಎಲೆಕ್ಟ್ರಿಕಲ್ ವೈರ್ ಸಿಕ್ಕಿದ್ದು, ಕೌಸರ್ ಹೇಳಿಕೆಗೆ ಪುಷ್ಟಿ ಸಿಕ್ಕಿದೆ.
ಆಗಸ್ಟ್ ನಲ್ಲಿ ಬಂಧಿತನಾಗಿದ್ದ ಜಾಹಿದುಲ್ ಕೌಸರ್
ಬುರ್ದ್ವಾನ್ ಹಾಗೂ ಬೋಧ್ ಗಯಾ ಸ್ಫೋಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಾಹಿದುಲ್ ನನ್ನು ಆಗಸ್ಟ್ ನಲ್ಲಿ ಎನ್ಐಎ ತಂಡ ಬಂಧಿಸಿತ್ತು. ಜಮಾತ್ ಉಲ್ ಮುಜಾಹಿದ್ದೀನ್ ಆಫ್ ಬಾಂಗ್ಲಾದೇಶ್ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದ ಈತ ಬೆಂಗಳೂರಿನ ಸಮೀಪವಿರುವ ರಾಮನಗರದಲ್ಲಿ ನೆಲೆಸಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು, ಕೌಸರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.
ಪಶ್ಚಿಮ ಬಂಗಾಳದ ಇನ್ನಿಬ್ಬರು ಉಗ್ರರು ಬಂಧನ
2018ರ ಜನವರಿ 8ರಂದು ಸಂಭವಿಸಿದ ಬೋಧ್ ಗಯಾ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಸರ್ ಅಲ್ಲದೆ ಪಶ್ಚಿಮ ಬಂಗಾಳ ಮೂಲದ ಅಬ್ದುಲ್ ಕರೀಂ ಹಾಗೂ ಮುಸ್ತಫಿಜುರ್ ರೆಹ್ಮಾನ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಕೇರಳದ ಮಲ್ಲಪುರಂನಲ್ಲಿ ನಿರಾಶ್ರಿತ ಶಿಬಿರದಲ್ಲಿ ಬೆಂಗಾಲಿಯಲ್ಲಿ ಮಾತನಾಡುತ್ತಿದ್ದ ಇಬ್ಬರನ್ನು ಎನ್ಐಎ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.
ಬಾಂಗ್ಲಾ ಮೂಲದ ಉಗ್ರರ ಬಗ್ಗೆ ಎಚ್ಚರ
ಒಟ್ಟಾರೆ, 5 ಮಂದಿಯನ್ನು ಬಂಧಿಸಲಾಗಿದ್ದು, 10 ಮಂದಿಯನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ. ಎಲ್ಲರೂ ಬಾಂಗ್ಲಾದೇಶ ಮೂಲದ ಜಮಾತ್ ಉಲ್ ಮುಜಾಹಿದ್ದೀನ್ ಸಂಘಟನೆಯ ಸಂಪರ್ಕ ಹೊಂದಿದ್ದಾರೆ ಎಂದು ಎನ್ಐಎ ಅಧಿಕಾರಿಯೊಬ್ಬರು ಒನ್ಇಂಡಿಯಾಕ್ಕೆ ತಿಳಿಸಿದರು. ಗುಪ್ತಚರ ಇಲಾಖೆಯು ಅಕ್ರಮ ವಲಸಿಗರ ಬಗ್ಗೆ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅದರಲ್ಲೂ ದಕ್ಷಿಣ ಭಾರತದಲ್ಲಿ ಅಕ್ರಮ ನುಸುಳುವಿಕೆ ಹೆಚ್ಚಾಗಿದೆ. ಕಾರ್ಮಿಕರ ಸೋಗಿನಲ್ಲಿ ನಿರಾಶ್ರಿತ ಶಿಬಿರಗಳಲ್ಲಿ ಉಗ್ರರು ಸೇರಿಕೊಳ್ಳುತ್ತಿದ್ದಾರೆ ಎಂದು ಐಬಿ ಎಚ್ಚರಿಸಿದೆ.