ಬಿಎಂಟಿಸಿಯನ್ನು ನಷ್ಟದಿಂದ ಪಾರು ಮಾಡಲು ವಿಪ್ರೋ ಸಹಾಯ
ಬೆಂಗಳೂರು, ಜು.24: ಬೆಂಗಳೂರು ನಗರ ರಸ್ತೆ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯನ್ನು ಇನ್ನಷ್ಟು ಸ್ಮಾರ್ಟ್ಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ವಿವಿಧ ಯೋಜನೆಗಳಿಗೆ ಕೈಜೋಡಿಸಲು ಬಯೋಕಾನ್ ಹಾಗೂ ವಿಪ್ರೋ ಕೂಡ ಮುಂದಾಗಿದೆ.
ಈ ಕುರಿತು ವಿಪ್ರೋ ಅಧ್ಯಕ್ಷ ಅಜೀಮ್ ಪ್ರೇಂಜಿ ಮಂಗಳವಾರ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಬಿಎಂಟಿಸಿ ಜಾಗದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಚಿಂತನೆ
ಬಿಎಂಟಿಸಿ ನೂರಾರು ಕೋಟಿ ನಷ್ಟದಲ್ಲಿದೆ, ಇದೀಗ ಎಸ್ಎಸ್ಟಿ ಮಕ್ಕಳು ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡುವುದರಿಂದ ಬಿಎಂಟಿಸಿಗೆ ಇನ್ನಷ್ಟು ಆರ್ಥಿಕ ಹೊರೆ ಬೀಳಲಿದೆ, ಹಾಗಾಗಿ ಬಿಎಂಟಿಸಿಯು ಬೃಹತ್ ವಾಣಿಜ್ಯ ಮಳಿಗೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿ ಭೋಗ್ಯ ಅಥವಾ ಬಾಡಿಗೆ ರೂಪದಲ್ಲಿ ಐಟಿ ಕಂಪನಿಗಳಿಗೆ ನೀಡುವ ಮೂಲಕ ನಿಗಮಕ್ಕೆ ನೂರಾರು ಕೋಟಿ ರೂ ಆದಾಯ ತರುವ ಕುರಿತು ಈಗಾಗಲೇ ಚರ್ಚಿಸಿದ್ದಾರೆ.
ಬಿಎಂಟಿಸಿಯನ್ನು ನಷ್ಟದಿಂದ ಪಾರ ಮಾಡುವುದು ಹೇಗೆ ಎನ್ನುವ ಕುರಿತು ಸರ್ಕಾರ ಇಷ್ಟು ದಿನ ತಲೆ ಕೆಡಿಸಿಕೊಂಡಿತ್ತು, ಆದರೆ ಖಾಸಗಿ ಸಹಭಾಗಿತ್ವ ದೊರೆತ ನಂತರ ಸ್ವಲ್ಪ ಸಮಾಧಾನ ದೊರೆತಂತಾಗಿದೆ. ಈ ಹಿಂದೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದರು. ಇದೀಗ ವಿಪ್ರೋ ಅಧ್ಯಕ್ಷರು ಭೇಟಿ ಮಾಡಿ ವಿವಿಧ ಯೋಜನೆಗಳ ಕುರಿತು ಚರ್ಚೆ ನಡೆಸಿದ್ದಾರೆ.
2016-17ರಲ್ಲಿ 80 ಕೋಟಿ ರೂ. ಹಾಗೂ 2017-18ರಲ್ಲಿ 192 ಕೋಟಿ ರೂ. ಸಾಲವನ್ನು ನಿಗಮ ಮಾಡಿಕೊಂಡಿದೆ. ಸ್ವತಃ ಬಂಡವಾಳ ಹೂಡಿ ಇಂತಹ ಪಾರ್ಕ್ ನಿರ್ಮಿಸಲು ನಿಗಮ ಆರ್ಥಿಕವಾಗಿ ಸಶಕ್ತವಾಗಿಲ್ಲ. ಹೀಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೆ ಚಿಂತನೆ ನಡೆದಿದೆ.
ಬಿಎಂಆರ್ಸಿಎಲ್ ಈಗಾಗಲೇ ಬೈಯಪ್ಪನಹಳ್ಳಿ ಬಳಿಯ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಸಮೀಪ ಮೆಟ್ರೋ ಭವನ ನಿರ್ಮಾಣಕ್ಕೆ ರೂಪು ರೇಷೆ ಸಿದ್ಧಪಡಿಸಿದೆ. ಬಿಎಂಟಿಸಿಗೆ ಪ್ರತಿ ತಿಂಗಳು 1.48 ಕೋಟಿ ರೂ. ಬಾಡಿಗೆ ನೀಡುತ್ತಿರುವ ಸಾರಿಗೆ ಇಲಾಖೆಯೂ ಶಾಂತಿನಗರದಲ್ಲೇ ಇರುವ ಬಿಎಂಟಿಸಿಯ 1.4 ಎಕರೆ ಜಾಗ ಖರೀದಿಸಲು ಚಿಂತನೆ ನಡೆಸಿದೆ.