ಕೆಂಗೇರಿ ಮೆಟ್ರೋ ಪ್ರಯಾಣಿಕರಿಗೆ ಪ್ರತಿ 15 ನಿಮಿಷಕ್ಕೊಂದರಂತೆ ಬಿಎಂಟಿಸಿ ಫೀಡರ್ ಬಸ್ ಸೇವೆ
ಬೆಂಗಳೂರು, ಆಗಸ್ಟ್ 26: ಕೆಂಗೇರಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಪ್ರತಿ 15 ನಿಮಿಷಕ್ಕೊಂದರಂತೆ ಬಿಎಂಟಿಸಿಯು ಫೀಡರ್ ಬಸ್ ಸೇವೆ ಒದಗಿಸಲಿದೆ.
ಒಟ್ಟು 3 ಕಡೆಗಳಿಂದ ಒಟ್ಟು 10 ಮಾರ್ಗಗಳಲ್ಲಿ 42 ಬಸ್ಗಳು ಕಾರ್ಯಾಚರಿಸಲಿವೆ. ಆರ್ಆರ್ ಗೇಟ್, ಬೆಂಗಳೂರು ಯೂನಿವರ್ಸಿಟಿ ಹಾಗೂ ಕೆಂಗೇರಿ ಟಿಟಿಎಂಸಿಯಿಂದ ಫೀಡರ್ ಬಸ್ ಸೇವೆ ಸಿಗಲಿದೆ.
ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗ ಆ. 29 ರಂದು ಉದ್ಘಾಟನೆ
ಫೀಡರ್ ಬಸ್ಗಳು ಆರ್ಆರ್ ಗೇಟ್, ಪೂರ್ಣಪ್ರಜ್ಞ ಲೇಔಟ್, ಗಣಕಲ್, ರಾಮಸಂದ್ರ, ಉಳ್ಳಾಲ ಸ್ಯಾಟಲೈಟ್ ಟೌನ್, ತಾವರೆಕೆರೆ, ರಘುವನಹಳ್ಳಿ, ಬಿಡದಿ ಹಾಗೂ ತಲಘಟ್ಟಪುರ ಸುತ್ತಮುತ್ತಲಿನ ಪ್ರದೇಶಗಳಿಗೆ ಬಸ್ ಸೇವೆ ಇದೆ.
ಫೀಡರ್ ಬಸ್ ಜತೆಜೆತೆಗೇ ಸಾಮಾನ್ಯ ಬಸ್ಗಳ ಸಂಚಾರವೂ ಇರಲಿದೆ. ರಾಜರಾಜೇಶ್ವರಿನಗರ, ಬೆಂಗಳೂರು ಯೂನಿವರ್ಸಿಟಿ, ಕೆಂಗೇರಿ, ಉತ್ತರ ಹಳ್ಳಿ, ಬನಶಂಕರಿ, ಕೆಂಗೇರಿ, ಸುಮನಹಳ್ಳಿ, ಬಿಡದಿಗೆ ಬಸ್ಗಳು ಸಂಚರಿಸಲಿವೆ.
ಬಹು ನಿರೀಕ್ಷಿತ ನಮ್ಮ ಮೆಟ್ರೋದ ಮೈಸೂರು ರಸ್ತೆ - ಕೆಂಗೇರಿ ವಿಸ್ತರಿತ ಮಾರ್ಗಕ್ಕೆ ಆಗಸ್ಟ್ 29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಚಾಲನೆ ನೀಡಲಿದ್ದಾರೆ.
ಆಗಸ್ಟ್ 29 ರಂದು ಭಾನುವಾರ ಮಧ್ಯಾಹ್ನ 12ಕ್ಕೆ ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವರು ಮೈಸೂರು ರಸ್ತೆ-ಕೆಂಗೇರಿ ಮೆಟ್ರೋಗೆ ಚಾಲನೆ ನೀಡಲಿದ್ದಾರೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ತಿಳಿಸಿದ್ದಾರೆ.
ಈಗಾಗಲೇ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗವನ್ನು ಪರಿಶೀಲನೆ ನಡೆಸಿ, ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಿದ್ದಾರೆ. ಮೈಸೂರು ರಸ್ತೆ-ಕೆಂಗೇರಿ ತನಕ ಮೆಟ್ರೋ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದೆ.
ನೇರಳೆ ಮಾರ್ಗದ ವಿಸ್ತರಿತ ಮಾರ್ಗದಲ್ಲಿ ರೈಲು ಸಂಚಾರ ನಡೆಸುವುದರಿಂದ 75 ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಆರ್. ಆರ್. ನಗರ ಸೇರಿದಂತೆ ಸುತ್ತಮತ್ತಲಿನ ಬಡಾವಣೆಗಳ ಜನರಿಗೆ ಮೆಟ್ರೋ ಸಂಪರ್ಕ ಸಿಗಲಿದೆ.
ಈ ವಿಸ್ತರಿತ ನೇರಳೆ ಮಾರ್ಗದಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ, ಮೈಲಸಂದ್ರ ಮತ್ತು ಕೆಂಗೇರಿ ಬಸ್ ನಿಲ್ದಾಣ ಸೇರಿದಂತೆ ಒಟ್ಟು ಆರು ಮೆಟ್ರೋ ನಿಲ್ದಾಣಗಳು ಬರುತ್ತವೆ.
ಮೈಸೂರು ರಸ್ತೆಯ ಈ ಮಾರ್ಗದಲ್ಲಿ ಉಂಟಾಗುವ ಅತಿ ಹೆಚ್ಚು ಟ್ರಾಫಿಕ್ ದಟ್ಟಣೆಯಿಂದ ಜನರು ಪ್ರತಿನಿತ್ಯ ಹೈರಾಣುಗುತ್ತಿದ್ದಾರೆ. ಪ್ರತಿನಿತ್ಯ ಕಚೇರಿಗೆ ಓಡಾಡುವವರು ಇದರಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಈಗ ಈ ಮೆಟ್ರೋ ಮಾರ್ಗದ ಮೂಲಕ ಈ ಭಾಗದ ಜನರು ಲಭ ಸಂಚಾರ ಮಾಡಬಹುದಾಗಿದ್ದು, ಟ್ರಾಫಿಕ್ ದಟ್ಟಣೆ ಕೂಡ ಕಡಿಮೆಯಾಗಲಿದೆ.
ಈ ವಿಸ್ತರಿತ ಮಾರ್ಗವು 2019ರ ಕೊನೆಯ ವೇಳೆಗೆ ಮುಕ್ತಾಯವಾಗಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಕೊರೋನಾ ಸೇರಿ ಹಲವು ಕಾರಣಗಳಿಂದ ಇದು ವಿಳಂಬವಾಗಿತ್ತು.
ಗುತ್ತಿಗೆದಾರರ ಬದಲಾವಣೆ, ಭೂಸ್ವಾಧೀನದಲ್ಲಾದ ವಿಳಂಬ ಮತ್ತು ನಂತರ ಕೊರೊನಾ ಸೋಂಕಿನ ಕಾರಣದಿಂದ ಈ ಮಾರ್ಗ ನಿರ್ಮಾಣ ನೆನೆಗುದಿಗೆ ಬಿದ್ದಿತ್ತು. ಆದರೆ ಇದೆಲ್ಲದಕ್ಕೂ ಈಗ ಕೊನೆ ಎಂಬಂತೆ ಈಗ ಕಾಮಗಾರಿ ಪೂರ್ಣ ಗೊಂಡಿದ್ದು ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿದೆ.
Recommended Video
ಉದ್ಘಾಟನೆ ಬಳಿಕ ಅದೇ ರೈಲಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅದೇ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ. ಮೈಸೂರು ರಸ್ತೆಯ ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ 7. 50 ಕಿ.ಮೀ ಮೆಟ್ರೋ ಮಾರ್ಗ ಸುಗಮ ಸಂಚಾರಕ್ಕೆ ಲಭ್ಯವಾಗಲಿದ್ದು, ಇದರಿಂದ ಟ್ರಾಫಿಕ್ ದಟ್ಟಣೆ ಕಡಿಮೆಯಾಗಲಿದೆ.