ಲಾಕ್ಡೌನ್: ಬಿಎಂಟಿಸಿ ಸಿಬ್ಬಂದಿಗೆ ಸರ್ಕಾರದಿಂದ ಗಿಫ್ಟ್!
ಬೆಂಗಳೂರು, ಜು. 16: ವೇತನ, ಭತ್ಯೆ ರಹಿತ ಒಂದು ವರ್ಷದ ರಜೆ ಕೊಡುವ ಬಗ್ಗ ಚರ್ಚೆ, ಲಾಕ್ಡೌನ್ ಸಂದರ್ಭದಲ್ಲಿ ಹಾಜರಿದ್ದರೂ ರಜೆ ಬರೆಯಿಸಿಕೊಂಡಿದ್ದು ಇಂತಹುದನ್ನೇ ಎದುರಿಸಿದ್ದ ಬಿಎಂಟಿಸಿ ಸಿಬ್ಬಂದಿಗೆ ಸರ್ಕಾರ ಶುಭ ಸುದ್ದಿಯನ್ನು ಕೊಟ್ಟಿದೆ. ಕೊರೊನಾ ವೈರಸ್ನಿಂದಾಗಿ ಜಾರಿಯಲ್ಲಿದ್ದ ಲಾಕ್ಡೌನ್ ಸಂದರ್ಭದಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿಗೆ ಸರ್ಕಾರ ಉಡುಗೊರೆ ಕೊಡಲು ಇದೀಗ ಮುಂದಾಗಿದೆ.
Recommended Video
ಕೊರೊನಾ ವೈರಸ್ನಿಂದ ಕಳೆದ ಮಾರ್ಚ್ 24 ರಿಂದ ಏಪ್ರಿಲ್ 24, 2020ರ ಲಾಕ್ಡೌನ್ ಅವಧಿಯಲ್ಲಿ ಕೆಲಸ ಮಾಡಿದ್ದ ಬಿಎಂಟಿಸಿ ಸಿಬ್ಬಂದಿಗೆ ಸರ್ಕಾರ ಉಡುಗೊರೆ ಕೊಡಲು ತೀರ್ಮಾನ ಮಾಡಿದೆ. ಆ ಸಂದರ್ಭದಲ್ಲಿ ಇಡೀ ದೇಶವೇ ಕೊರೊನಾ ವೈರಸ್ ಸೋಂಕಿನ ಆತಂಕದಿಂದ ಸ್ತಬ್ದವಾಗಿತ್ತು. ಕಠಿಣ ಕಾಲದಲ್ಲಿ ಜೀವದ ಹಂಗು ತೊರೆದು ಸ್ವಯಂ ಪ್ರೇರಿತರಾಗಿ ಗ್ರೂಪ್ ಸಿ ಹಾಗೂ ಡಿ ದರ್ಜೆಯ 3,397 ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದರು.
ಬೆಂಗಳೂರು ಲಾಕ್ ಡೌನ್; ಬಿಎಂಟಿಸಿಯ ಸೂಚನೆಗಳು
ಸಿಬ್ಬಂದಿ ಸೇವಾನಿಷ್ಠೆ
ಬೆಂಗಳೂರಿನಲ್ಲಿ ಮೊದಲ ಹಂತದ ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರದ ಆದೇಶದಂತೆ ಜನತೆಗೆ ತುರ್ತು ಸೇವಾ ಸೌಲಭ್ಯ ಒದಗಿಸಲು ಆರೋಗ್ಯ, ಗೃಹ, ಪೊಲೀಸ್, ಪೌರ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಾರಿಗೆ ಸೌಲಭ್ಯವನ್ನು ಬಿಎಂಟಿಸಿ ಒದಗಿಸಿತ್ತು.
ಸಿಬ್ಬಂದಿಯ ಸೇವಾ ನಿಷ್ಠೆಯನ್ನು ಗಮನಿಸಿ, ಗುರುತಿಸುವ ಸಲುವಾಗಿ ಸರ್ಕಾರ ಬೋನಸ್ ನೀಡಲು ನಿರ್ಧಾರ ಮಾಡಿದೆ.
ವಿಶೇಷ ಭತ್ಯೆ
ಮೊದಲ ಹಂತದ ಲಾಕ್ಡೌನ್ ಆತಂಕದ ಕಾಲದಲ್ಲಿ ಸಿಬ್ಬಂದಿಯ ಕರ್ತವ್ಯ ನಿಷ್ಠೆಯನ್ನು ಗಮನಿಸಿ, ಅವರ ಶ್ಲಾಘನೀಯ ಸೇವೆಗಾಗಿ ಪ್ರತಿ ನೌಕರನಿಗೆ ದಿನವೊಂದಕ್ಕೆ 250 ರೂಪಾಯಿಗಳ ವಿಶೇಷ ಭತ್ಯೆಯನ್ನು ನೀಡಿ ಪ್ರೋತ್ಸಾಹಿಸಲು ತೀರ್ಮಾನ ಮಾಡಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಲಾಕ್ಡೌನ್ ಸಂದರ್ಭದಲ್ಲಿ ಮೂರು ಪಾಳಿಗಳಲ್ಲಿ ಕೆಲಸ ನಿರ್ವಹಿಸಿದ್ದ 3,397 ನೌಕರರಿಗೆ 38370 ಮಾನವ ದಿನಗಳ ಲೆಕ್ಕದಲ್ಲಿ ಬೋನಸ್ ಕೊಡಲು ತೀರ್ಮಾನ ಮಾಡಲಾಗಿದೆ. ಬೋನಸ್ ಕೊಡಲು 95,92,500 ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ಅಧ್ಯಕ್ಷ ನಂದೀಶ್ ರೆಡ್ಡಿ
ಲಾಕ್ಡೌನ್ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಪ್ರತಿದಿನಕ್ಕೆ 250 ರೂಪಾಯಿಗಳನ್ನು ಬೋನಸ್ ರೂಪದಲ್ಲಿ ಕೊಡಲು ನಿಗಮ ನಿರ್ದೇಶಕರ ಸಭೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಯನ್ನು ಬಿಎಂಟಿಸಿ ಮಂಡಳಿ ಠರಾವು ಮಾಡಿ ಪ್ರಸ್ತಾವನೆಯನ್ನು ಅಂಗೀಕಾರ ಮಾಡಿದೆ.
ಬಿಎಂಟಿಸಿ ಅಧ್ಯಕ್ಷ, ಮಾಜಿ ಶಾಸಕ ಎನ್. ಎಸ್. ನಂದೀಶ್ ರೆಡ್ಡಿ ಹಾಗೂ ಬಿಎಂಟಿಸಿ ಎಂಡಿ ಶಿಖಾ ಅವರ ಅನುಮೋದನೆ ಮೇರೆಗೆ ಬೋನಸ್ ಕೊಡಲು ಸರ್ಕಾರ ತೀರ್ಮಾನ ಮಾಡಿದೆ.
ಮೊದಲ ಹಂತದ ಲಾಕ್ಡೌನ್
ಕೊರೊನಾ ವೈರಸ್ ಮುಂದಿಟ್ಟಿದ್ದ ಆತಂಕಂದಿಂದ ಮಾರ್ಚ್ 24 ರಿಂದ ಇಡೀ ದೇಶಾದ್ಯಂತ ಏಕಾಏಕಿ ಲಾಕ್ಡೌನ್ ಜಾರಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕೋಟಿ ರೂಪಾಯಿ ಕೊಟ್ಟರೂ ಮನೆಯಿಂದ ಹೊರಗೆ ಬರದ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಆ ಸಂದರ್ಭದಲ್ಲಿ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಸೇರಿದಂತೆ ಅಗತ್ಯ ಸೇವೆಗಳ ಸಿಬ್ಬಂದಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದರು. ಅದನ್ನು ಗಮನಿಸಿ ಪ್ರೋತ್ಸಾಹಿಸಿದ್ದಕ್ಕೆ ಜನ ಸಾಮಾನ್ಯರು ಕೂಡ ಸರ್ಕಾರವನ್ನು ಶ್ಲಾಘನೆ ಮಾಡಿದ್ದಾರೆ.