ಬಿಎಂಟಿಸಿ ಖಾಸಗೀಕರಣ; ಹೇಗೆ ನಡೆಯಲಿದೆ ಪ್ರಕ್ರಿಯೆ?
ಬೆಂಗಳೂರು, ಮಾರ್ಚ್ 31; ಬೆಂಗಳೂರು ನಗರದ ಜನರ ಜೀವನಾಡಿ ಬಿಎಂಟಿಸಿ ಬಸ್ಗಳು. ಸಂಸ್ಥೆ ಆರ್ಥಿಕ ನಷ್ಟದಲ್ಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ಮೊದಲ ಹೆಜ್ಜೆ ಇಡಲಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಿಎಂಟಿಸಿ ಖಾಸಗೀಕರಣದ ಕುರಿತು ಮಾತನಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಬಿಎಂಟಿಸಿಯ ಸಿಬ್ಬಂದಿಗಳು ಖಾಸಗೀಕರಣ ವಿರೋಧಿಸಿದ್ದರು.
ಸಾರಿಗೆ ನೌಕರರ ಮುಷ್ಕರ ನೆಪವೊಡ್ಡಿ ಬಿಎಂಟಿಸಿ ಖಾಸಗೀಕರಣಗೊಳಿಸಲು ಸರ್ಕಾರದ ಹುನ್ನಾರ - ಎಎಪಿ ಆರೋಪ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 1,500 ಡಿಸೇಲ್ ಬಸ್ಗಳನ್ನು ಖಾಸಗಿಯವರಿಂದ ಪಡೆಯಲು ತೀರ್ಮಾನಿಸಿದೆ. ಇದಕ್ಕಾಗಿ ಆಸಕ್ತ ಸಂಸ್ಥೆಗಳಿಂದ ಬಿಡ್ ಸಹ ಆಹ್ವಾನ ಮಾಡಲಾಗಿದೆ. ಈ ಮೂಲಕ ಖಾಸಗಿಕರಣದ ಮೊದಲ ಹೆಜ್ಜೆ ಇಟ್ಟಿದೆ.
1500 ಬಸ್ಗಳಿಗೆ ಬಿಎಂಟಿಸಿ ಟೆಂಡರ್ ಆಹ್ವಾನ, ಖಾಸಗೀಕರಣ ಭಯ
ಸುಮಾರು 15 ವರ್ಷಗಳ ಹಿಂದೆ ಖಾಸಗೀಕರಣ ಮಾಡುವ ಪ್ರಯತ್ನ ನಡೆದಿತ್ತು. ಗುತ್ತಿಗೆ ಆಧಾರದಲ್ಲಿ ಬಸ್ ಪಡೆಯಲಾಗಿತ್ತು. ಆದರೆ, ಇದರಿಂದಾಗಿ ಬಿಎಂಟಿಸಿ ಮತ್ತು ಖಾಸಗಿ ಸಂಸ್ಥೆಗಳಿಗೆ ಯಾವುದೇ ಲಾಭವಾಗಿರಲಿಲ್ಲ ಆದ್ದರಿಂದ ಗುತ್ತಿಗೆ ರದ್ದಾಗಿತ್ತು.
ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ
ಖಾಸಗಿ ಬಸ್ಗಳ ಗುತ್ತಿಗೆ
ಕೇಂದ್ರ ಸರ್ಕಾರದ ಫೇಮ್ ಇಂಡಿಯಾ-2ರ ಅಡಿ ಗುತ್ತಿಗೆ ಆಧಾರದಲ್ಲಿ 300 ವಿದ್ಯುತ್ ಬಸ್ಗಳನ್ನು ಬಿಎಂಟಿಸಿಗೆ ಸೇರ್ಪಡೆಗೊಳಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಇದೇ ಮಾದರಿಯಲ್ಲಿ 1,500 ಡಿಸೇಲ್ ಬಸ್ಗಳನ್ನು ಗುತ್ತಿಗೆ ಪಡೆಯುವುದು ಬಿಎಂಟಿಸಿಯ ಲೆಕ್ಕಾಚಾರವಾಗಿದೆ.
ಕಿ. ಮೀ. ಲೆಕ್ಕದಲ್ಲಿ ಹಣ ಪಾವತಿ
ಖಾಸಗಿ ಬಸ್ಗಳನ್ನು ಗುತ್ತಿಗೆ ಪಡೆದರೆ ಕಿ. ಮೀ.ಗಳ ಲೆಕ್ಕದಲ್ಲಿ ಹಣ ಪಾವತಿ ಮಾಡಲಾಗುತ್ತದೆ. ಖಾಸಗಿ ಸಂಸ್ಥೆಗಳು ಸಲ್ಲಿಸುವ ಬಿಡ್ ಪರಿಶೀಲನೆ ಮಾಡಿದ ಬಳಿಕ ಮುಂದಿನ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಬಸ್ ಪೂರೈಕೆ ಮಾಡುವ ಸಂಸ್ಥೆಗಳೇ ಅವುಗಳ ನಿರ್ವಹಣೆ ನೋಡಿಕೊಳ್ಳಬೇಕು. ಆದರೆ, ಬಸ್ಗಳಿಗೆ ಬಿಎಂಟಿಸಿ ಬಸ್ಗಳ ಬಣ್ಣಗಳನ್ನು ಬಳಿಯಲಾಗುತ್ತದೆ.
ಸುಮಾರು 2 ಸಾವಿರ ಕೋಟಿ ನಷ್ಟ
ಬಿಎಂಟಿಸಿ ಮೊದಲೇ ನಷ್ಟದಲ್ಲಿತ್ತು, ಕೋವಿಡ್ ಲಾಕ್ ಡೌನ್ ಪರಿಣಾಮ ಸಂಸ್ಥೆಗೆ ಸುಮಾರು 2 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರವೇ ಸಂಸ್ಥೆಗೆ ಆರ್ಥಿಕ ನೆರವು ನೀಡಬೇಕು. ಇದರ ಬದಲು ಖಾಸಗಿ ಬಸ್ ಗುತ್ತಿಗೆ ಪಡೆದು ಓಡಿಸುವುದು ಚಿಂತನೆಯಾಗಿದೆ.
ನೌಕರರ ವಿರೋಧ
ಬಿಎಂಟಿಸಿ ಖಾಸಗಿ ಬಸ್ ಗುತ್ತಿಗೆ ಪಡೆಯುವ ಪ್ರಸ್ತಾವನೆಗೆ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಗುತ್ತಿಗೆ ಪಡೆದಾಗ ಖಾಸಗಿ ಬಸ್ಗಳಿಗೆ ಚಾಲಕರು ಖಾಸಗಿ ಸಂಸ್ಥೆಯವರು ಆಗಿದ್ದರು. ನಿರ್ವಾಹಕರನ್ನು ಬಿಎಂಟಿಸಿಯಿಂದ ನಿಯೋಜನೆ ಮಾಡಲಾಗಿತ್ತು. ಈಗಲೂ ಅದೇ ಮಾದರಿ ಅನುಸರಿಸಲಾಗುತ್ತದೆಯೇ? ಕಾದು ನೋಡಬೇಕಿದೆ.
ಮತ್ತೆ ಅನುದಾನ ನೀಡಲಿದೆಯೇ?
ಬಿಎಂಟಿಸಿ ನೌಕರರ ವೇತನಕ್ಕೆ ಅನುದಾನ ನೀಡುವ ಸರ್ಕಾರ ಪದೇ ಪದೇ ಅನುದಾನ ನೀಡುವುದು ಅನುಮಾನ. ಆದ್ದರಿಂದ, ಖಾಸಗಿ ಬಸ್ಗಳನ್ನು ಗುತ್ತಿಗೆ ಪಡೆದು ಓಡಿಸಲು ತೀರ್ಮಾನಿಸಲಾಗುತ್ತಿದೆ. ಅಲ್ಲದೇ ಪದೇ ಪದೇ ಮುಷ್ಕರ ಹೂಡುವ ಸಿಬ್ಬಂದಿಗೂ ಇದರಿಂದ ಸಂದೇಶ ರವಾನೆಯಾಗಲಿದೆ.