ಬಿಎಂಟಿಸಿ ನೌಕರರ ಪ್ರತಿಭಟನೆ: ಬಸ್ ಸಂಚಾರದಲ್ಲಿ ವ್ಯತ್ಯಯವಿಲ್ಲ
ಬೆಂಗಳೂರು, ಜನವರಿ 27: ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಸರ್ಕಾರ ಪರಿಗಣಿಸಬೇಕು ಎಂದು ಒತ್ತಾಯಿಸಿ ಬಿಎಂಟಿಸಿ ಬಸ್ ನೌಕರರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಆರಂಭಿಸಿದ್ದು, ಆದರೆ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.
ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರು ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಬಿಎಂಟಿಸಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಹುದೆಂಬ ಆತಂಕದಲ್ಲಿ ಸಾರ್ವಜನಿಕರಿದ್ದರು.
ಬಸ್ ದರ ಹೆಚ್ಚಳ ಕುರಿತು ಸ್ಪಷ್ಟನೆ ಕೊಟ್ಟ ಸಾರಿಗೆ ಸಚಿವ ಸವದಿ
ಆದರೆ ಇದ್ಯಾವುದಕ್ಕೂ ಬಿಎಂಟಿಸಿ ನೌಕರರು ಅವಕಾಶ ನೀಡದೆ ಒಂದೆಡೆ ಉಪವಾಸ ಪ್ರತಿಭಟನೆ ಆರಂಭಿಸಿದ್ದು, ಇನ್ನೊಂದೆಡೆ ಒಂದಷ್ಟು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುತ್ತಿಲ್ಲ.
ಫ್ರೀಡಂ ಪಾರ್ಕ್ ನಲ್ಲಿ ಬೆಳಗ್ಗೆ 7.00 ಗಂಟೆಯಿಂದ ಆರಂಭಿಸಿದ್ದು, ಸಂಜೆ 5.00 ಗಂಟೆಯವರೆಗೆ ಕುಟುಂಬ ಸದಸ್ಯರೊಂದಿಗೆ ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ. ಉಪವಾಸ ಸತ್ಯಾಗ್ರಹದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಸೆಕೆಂಡ್ ಶಿಫ್ಟ್ ನಲ್ಲಿರುವವರು ಭಾಗವಹಿಸುತ್ತಾರೆ.
ಮಾರ್ನಿಂಗ್ ಶಿಫ್ಟ್ ನಲ್ಲಿ ಕೆಲಸ ಮಾಡಿರುವವರು ಮಧ್ಯಾಹ್ನದ ನಂತರ ಹೋಗಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಲಿದ್ದಾರೆಂದು ಬಿಎಂಟಿಸಿ ಮೂಲಗಳಿಂದ ತಿಳಿದು ಬಂದಿದೆ.
ಕಳೆದ ಸಮ್ಮಿಶ್ರ ಸರ್ಕಾರ ಬಿಎಂಟಿಸಿ ನೌಕಕರರ ಒತ್ತಾಯಕ್ಕೆ ಮಣಿಯದೇ ಇದ್ದ ಕಾರಣ ಮತ್ತೆ ಬಿಎಂಟಿಸಿ ನೌಕರರು ಉಪವಾಸ ಸತ್ಯಾಗ್ರಹ ಮಾಡುವುದರ ಮೂಲಕ ಸರ್ಕಾರದ ಮೇಲೆ ಒತ್ತಡ ಏರಲು ತೀರ್ಮಾನಿಸಿದ್ದಾರೆ.
ಬಿಎಂಟಿಸಿ ನೌಕರರು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನ ನೀಡಲಿದ್ದಾರೆ. ಕಳೆದ ಬಾರಿ ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಪತ್ರ ಚಳುವಳಿ ಮಾಡಿ ನಮ್ಮನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ್ದದರು.