ಬಿಎಂಟಿಸಿ ಟಿಕೆಟ್ ದರ ಹೆಚ್ಚಿಸಲು ನಿರ್ಧಾರ: ಡಿಸಿಎಂ ಲಕ್ಷ್ಮಣ ಸವದಿ!
ಬೆಂಗಳೂರು, ಫೆ. 25: ಡಿಸೇಲ್ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಾಲ್ಕೂ ಸಾರಿಗೆ ನಿಗಮಗಳ ಪ್ರಯಾಣಿಕರ ಟಿಕೆಟ್ ದರ ಹೆಚ್ಚಳ ಮಾಡುವ ಪ್ರಸ್ತಾವನೆ ಇದೆ ಎಂದು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. ವಿಕಾಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕಳೆದ ವರ್ಷ ಮೂರು ನಿಗಮಗಳಲ್ಲಿ ಶೇಕಡಾ 12ರಷ್ಟು ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ಟಿಕೆಟ್ ದರ ಹೆಚ್ಚಳ ಮಾಡಲು ಪ್ರಸ್ತಾವನೆ ಇದೆ ಎಂದಿದ್ದಾರೆ.
ಬಿಎಂಟಿಸಿ ಟಿಕೆಟ್ ದರ ಹೆಚ್ಚಳ: ಬಿಎಂಟಿಸಿ ಬಸ್ಗಳ ಟಿಕೆಟ್ ದರ ಹೆಚ್ಚಿಸುವ ಕುರಿತು ಮಾತನಾಡಿರುವ ಡಿಸಿಎಂ ಸವದಿ ಅವರು, ಬಿಎಂಟಿಸಿ ಟಿಕೆಟ್ ದರ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚೆರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಶೇಕಡಾ 15 ರಿಂದ 18ರಷ್ಟು ದರ ಹೆಚ್ಚಳ ಪ್ರಸ್ತಾವನೆ ಇದೆ ಎಂದಿದ್ದಾರೆ. ಬಸ್ಗಳ ಬಿಡಿಭಾಗಗಳು, ನಿವೃತ್ತಿ ಹಣ ಪಾವತಿಗಾಗಿ ಸಾರಿಗೆ ಇಲಾಖೆಗೆ 560 ಕೋಟಿ ರೂ. ಬ್ಯಾಂಕ್ ಸಾಲ ಪಡೆದಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಸವದಿ ವಿವರಿಸಿದರು. ಜೊತೆಗೆ ಈ ಮೊದಲೇ ಜೊತೆಗೆ ಸಿಟಿ ಟ್ಯಾಕ್ಸಿ ಪ್ರಯಾಣ ದರವನ್ನು ಶೇಕಡಾ15ರಷ್ಟು ಹೆಚ್ಚಳ ಮಾಡಲಾಗಿತ್ತು. ಓಲಾ ಮತ್ತು ಊಬರ್ ಪ್ರಯಾಣ ದರ ಹೆಚ್ಚಳಕ್ಕೆ ಮನವಿ ಬಂದಿದೆ. ಮಾತುಕತೆ ಬಳಿಕ ದರ ಹೆಚ್ಚಳ ಅನುಮೋದನೆ ನೀಡಲಾಗುವುದು ಎಂದಿದ್ದಾರೆ.
ಖಾಸಗಿ ಬಸ್ಗಳ ಮಾದರಿಯಲ್ಲಿ ಸಾರಿಗೆ ನಿಗಮದ ಬಸ್ಗಳ ಮೂಲಕ ಕಾರ್ಗೋ ಮತ್ತು ಕೋರಿಯರ್ ಸೇವೆ ನೀಡಲು ತೀರ್ಮಾನ ಮಾಡಲಾಗಿದೆ. ಅದರಂತೆ 109 ಸ್ಥಳಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗುತ್ತಿದೆ. ಕಾರ್ಗೋ ಮತ್ತು ಕೊರಿಯರ್ ಸೇವೆಯ ಮೂಲಕ ಪ್ರತಿವರ್ಷ 70 ರಿಂದ 80 ಕೋಟಿ ರೂ ಆದಾಯ ನಿರೀಕ್ಷಿಸಲಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.
Recommended Video
ಇಲಾಖೆಗೆ ಕೊರೊನಾವೈರಸ್ ಲಾಕ್ಡೌನ್ ಸೇರಿದಂತೆ ಉಳಿದ ಕಾರಣಗಳಿಂದಾಗಿ ಒಟ್ಟು ಸುಮಾರು 4 ಸಾವಿರ ಕೋಟಿ ರೂ.ಗಳಷ್ಟು ಆದಾಯ ಕೊರತೆಯಾಗಿದೆ. ಜೊತೆಗೆ ನಾಲ್ಕೂ ನಿಗಮಗಳಿಂದ ಒಟ್ಟು 2,710 ಕೋಟಿ ರೂ. ಗಳಷ್ಟು ನಷ್ಠವಾಗಿದೆ. ಕೋವಿಡ್ ಸಂದರ್ಭದಲ್ಲಿ ಸಿಬ್ಬಂದಿ ವೇತನ ಪಾವತಿಗಾಗಿ ಸರ್ಕಾರದಿಂದ 1,780 ಕೋಟಿ ರೂ ಅನುದಾನ ಪಡೆದು 1.3 ಲಕ್ಷ ಸಿಬ್ಬಂದಿಗೆ ವೇತನ ಪಾವತಿಸಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.