BMTC ಬಿಗ್ ಟ್ರಂಕ್ ಬಸ್ ಸಂಚಾರ ಉದ್ಘಾಟನೆ
ಬೆಂಗಳೂರು. ಸೆ. 16: ರಾಜಧಾನಿಯಲ್ಲಿ ಬಸ್ ಪ್ರಯಾಣಿಕರಿಗೆ ಮತ್ತಷ್ಟು ಸೇವೆ ಒದಗಿಸಲು ಮುಂದಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) 62 'ಬಿಗ್ ಟ್ರಂಕ್' ಬಸ್ಸುಗಳನ್ನು ಸಂಚಾರಕ್ಕೆ ರಸ್ತೆಗೆ ಬಿಟ್ಟಿದೆ. ಇದರಿಂದ ಚಂದಾಪುರಕ್ಕೆ ದಿನನಿತ್ಯ ಸಂಚರಿಸುವ ಬಸ್ ಪ್ರಯಾಣಿಕರು ನಿರಾಳವಾಗಬಹುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ನಿಗದಿತ ಸಮಯಕ್ಕೆ ವಿಧಾನಸೌಧ ಮುಂಭಾಗ 'ಬಿಗ್ ಟ್ರಂಕ್ ಬಸ್' ಸೇವೆಗೆ ಚಾಲನೆ ನೀಡಿದರು. ಸುಮಾರು 80,000 ಪ್ರಯಾಣಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ.
ಈಗಿರುವ ಬಿಗ್ ಬಸ್ಸುಗಳಿಗೂ ಈ ಹೊಸ ಬಿಗ್ ಟ್ರಂಕ್ ಬಸ್ಸುಗಳಿಗೂ ಯಾವುದೇ ವ್ಯತ್ಯಾಸ ಇಲ್ಲ. ಆದರೆ, ವಿಶಿಷ್ಟ ಶೀರ್ಷಿಕೆ ನೀಡಲಾಗಿದೆ ಅಷ್ಟೇ. ಪ್ರಯಾಣ ದರದಲ್ಲೂ ವ್ಯತ್ಯಾಸವಿರುವುದಿಲ್ಲ. 'ಬಿಗ್ ಟ್ರಂಕ್ ಬಸ್'ನಿಂದ ಹೆಚ್ಚು ಮಾರ್ಗಗಳು ಸೃಷ್ಟಿಯಾಗುವುದಿಲ್ಲ. ಬದಲಾಗಿ ಅಧಿಕ ಟ್ರಿಪ್ ಸೇವೆ ಲಭ್ಯವಾಗಲಿದೆ. ಇದರಿಂದ ಪ್ರಯಾಣಿಕರ ಪರದಾಟ, ಪೀಕ್ ಅವರ್ ನಲ್ಲಿ ಬಸ್ ಕೊರತೆ ನೀಗಲಿದೆ.
ಆರಂಭದಲ್ಲಿ ಹೊಸೂರು ಮಾರ್ಗದಲ್ಲಿ 62 ಬಿಗ್ ಟ್ರಂಕ್ ಬಸ್ಗಳು ರಸ್ತೆಗಿಳಿಯಲಿವೆ - ಕೆಂಪೇಗೌಡ ಬಸ್ ನಿಲ್ದಾಣದಿಂದ ಅತ್ತಿಬೆಲೆಗೆ (3A) ಪ್ರತಿ 5 ನಿಮಿಷಕ್ಕೆ, ಚಂದಾಪುರಕ್ಕೆ (3C) ಪ್ರತಿ 25 ನಿಮಿಷಕ್ಕೆ, ಎಲೆಕ್ಟ್ರಾನಿಕ್ ಸಿಟಿ (3E) ಮತ್ತಿತರ ಕಡೆಗೆ ಪ್ರತಿ 20 ನಿಮಿಷಕ್ಕೆ ನಿತ್ಯ 400 ಟ್ರಿಪ್ ಸಂಚಾರ ನಡೆಸಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸೇರಿದಂತೆ ವಿವಿಧ ಸಾರಿಗೆ ಸಂಸ್ಥೆಗಳಿಗೆ ಒಟ್ಟು 7184 ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಲಾಗುವುದು. ಬಿಎಂಟಿಸಿಗೆ 2500 ಹಾಗೂ ಕೆಎಸ್ಆರ್ಟಿಸಿ ಸೇರಿದಂತೆ ವಿವಿಧ ಸಾರಿಗೆ ಸಂಸ್ಥೆಗಳಿಗೆ 4684 ಬಸ್ ಸೇರ್ಪಡೆ ಮಾಡುವ ಉದ್ದೇಶವಿದೆ. ನರ್ಮ್ ಯೋಜನೆಯಡಿ ಈ ಯೋಜನೆಯನ್ನು ಕಾರ್ಯಾಚರಣೆಗೊಳಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಗತ್ತಿನಲ್ಲೇ ಅತಿ ಹೆಚ್ಚು 2400 ಮಾರ್ಗಗಳನ್ನು ಬಿಎಂಟಿಸಿ ಬೆಂಗಳೂರಿನಲ್ಲಿ ಹೊಂದಿದೆ. ಸುಮಾರು ಒಂದು ಕೋಟಿ ಜನಸಂಖ್ಯೆಯಿದ್ದಾರೆ. ಸಾರಿಗೆ ಸಂಸ್ಥೆಯನ್ನು ಬಲಪಡಿಸಿ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವುದು ಸರ್ಕಾರದ ಉದ್ದೇಶ ಎಂದು ಹೇಳಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಗ್ ಟ್ರಂಕ್ ಬಸ್ ಸಂಚಾರಕ್ಕೆ ೧೨ ಕಾರಿಡಾರ್ಗಳನ್ನು ಗುರುತಿಸಲಾಗಿದ್ದು, ಇಂದು ಹೊಸೂರು ರಸ್ತೆಯ ಕಾರಿಡಾರ್ನಲ್ಲಿ ೬೨ ಬಸ್ಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ.
ಗೃಹ ಸಚಿವ ಕೆ.ಜೆ. ಜಾರ್ಜ್, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ರೋಷನ್ ಬೇಗ್, ಶಿವಣ್ಣ, ಎಸ್.ಟಿ. ಸೋಮಶೇಖರ್, ಮೇಯರ್ ಸತ್ಯನಾರಾಯಣ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಫರ್ವೇಜ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.