ನಮ್ಮ ಮೆಟ್ರೋದಲ್ಲಿ ದಾಖಲೆ ಸಂಖ್ಯೆಯ ಪ್ರಯಾಣಿಕರು, ಒಂದೇ ದಿನ 1.67 ಕೋಟಿ ರುಪಾಯಿ ಸಂಗ್ರಹ
ಬೆಂಗಳೂರು, ಆಗಸ್ಟ್ 16: ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಬರೆದಿದೆ. ಒಂದೇ ದಿನ ದಾಖಲೆಯ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚಾರ ಮಾಡಿದ್ದು, ಬಿಎಂಆರ್ಸಿಎಲ್ ಕೋಟಿ ಕೋಟಿ ಆದಾಯ ಬಾಚಿಕೊಂಡಿದೆ.
ಮತ್ತೊಂದೆಡೆ ಬಿಎಂಟಿಸಿ ರಜತ ಮಹೋತ್ಸವ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಪ್ರಯಾಣಿಕರಿಗೆ ಉಚಿತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ರಜೆ ಇದ್ದ ಕಾರಣ ಬೆಂಗಳೂರಿಗರು, ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ್ದರು.
ಬೆಂಗಳೂರು: 'ನಮ್ಮ ಮೆಟ್ರೋ'ದಿಂದ ಶೀಘ್ರವೇ ಪ್ರೀಪೇಯ್ಡ ಆಟೋ ಸೇವೆ ಆರಂಭ
ಸೋಮವಾರ ಒಂದೇ ದಿನ ನಮ್ಮ ಮೆಟ್ರೋದಲ್ಲಿ 6.30 ಲಕ್ಷ ಪ್ರಯಾಣಿಕರು ಸಂಚರಿಸುವ ಮೂಲಕ ನೂತನ ದಾಖಲೆ ನಿರ್ಮಾಣವಾಗಿದೆ. ಸಾಮಾನ್ಯ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಜುಲೈ ತಿಂಗಳಿನಲ್ಲಿ ಸರಾಸರಿ 4.7 ಲಕ್ಷ ಜನ ಪ್ರಯಾಣ ಮಾಡಿದ್ದರು. ಇದು ಆಗಸ್ಟ್ ತಿಂಗಳಿನಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.
ಸೋಮವಾರ ರಜೆ ಇದ್ದ ಕಾರಣ ಲಾಲ್ಬಾಗ್, ಕಬ್ಬನ್ ಪಾರ್ಕ್, ವಿಧಾನಸೌಧ ಸೇರಿದಂತೆ ವಿವಿಧ ಕಡೆಗಳಲ್ಲಿ ಅಮೃತ ಮಹೋತ್ಸವ ಹಿನ್ನಲೆ ವಿದ್ಯುತ್ ದೀಪಾಲಂಕಾರ ವೀಕ್ಷಿಸಲು ಜನ ಮೆಟ್ರೋ ರೈಲುಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಮೆಟ್ರೋ ರೈಲುಗಳಲ್ಲಿ ಜನಜಾತ್ರೆ: ಜನಸಂದಣಿ ನಿಯಂತ್ರಿಸಲು ಸಿಬ್ಬಂದಿ ಹರಸಾಹಸ
80 ಸಾವಿರ ಟಿಕೆಟ್ ಖರೀದಿಸಿದ್ದ ಕೆಪಿಸಿಸಿ
ಮತ್ತೊಂದೆಡೆ ಸ್ವಾತಂತ್ರ್ಯ ದಿನಾಚರಣೆ ದಿನವೇ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿತ್ತು. ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಕಾರ್ಯಕರ್ತರು ಆಗಮಿಸಲು ಅನುಕೂಲವಾಗುವಂತೆ ಕೆಪಿಸಿಸಿ ಬಿಎಂಆರ್ಸಿಎಲ್ ನಿಂದ ಸುಮಾರು 80 ಸಾವಿರ ಟಿಕೆಟ್ ಖರೀದಿ ಮಾಡಿತ್ತು. ಲಾಲ್ಬಾಗ್ ಫಲಪುಷ್ಪ ಪ್ರದರ್ಶನದ ಅಂಗವಾಗಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಿಎಂಆರ್ಸಿಎಲ್ ಪೇಪರ್ ಟಿಕೆಟ್ ಮಾರಾಟ ಮಾಡಿತ್ತು.
ಒಂದು ಟಿಕೆಟ್ಗೆ 30 ರುಪಾಯಿಯಂತೆ ಕಾಂಗ್ರೆಸ್ 80 ಸಾವಿರ ಟಿಕೆಟ್ ಖರೀದಿ ಮಾಡಿತ್ತು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೆಂಗೇರಿ, ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳಿಂದ ನ್ಯಾಷನಲ್ ಕಾಲೇಜ್ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ ಮಾಡಿದರು. ಪಾದಯಾತ್ರೆಯಲ್ಲಿ ಭಾಗವಹಿಸುವವರು ಮೆಜೆಸ್ಟಿಕ್ ನಿಲ್ದಾಣಕ್ಕೆ ಪ್ರಯಾಣ ಮಾಡಿದರು.
ಒಂದೇ ದಿನ 6.30 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣ
ಕೋವಿಡ್ಗಿಂದ ಮೊದಲು ಮೆಟ್ರೋದಲ್ಲಿ ಒಂದೇ ದಿನ 6.1 ಲಕ್ಷ ಸಂಚಾರ ಮಾಡಿದ್ದು ದಾಖಲೆಯಾಗಿತ್ತು. ಆದರೆ ಅದಾದ ಬಳಿಕ ಸೋಮವಾರ ಮೊದಲ ಬಾರಿ ಒಂದೇ ದಿನ 6.30 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣ ಮಾಡುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್.
ಇದೇ ಮೊದಲ ಬಾರಿಗೆ 500ಕ್ಕೂ ಹೆಚ್ಚು ದಿನದ ಪಾಸ್ ಮಾರಾಟವಾಗಿದೆ. ರಜಾದಿನವಾದ್ದರಿಂದ ಇಷ್ಟೊಂದು ಪ್ರಯಾಣಿಕರು ಆಗಮಿಸುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ, ಕಾಂಗ್ರೆಸ್ ಖರೀದಿ ಮಾಡಿದ ಟಿಕೆಟ್ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಟೆಕೆಟ್ ಪಡೆದು ಸಂಚಾರ ಮಾಡಿದ್ದಾರೆ.
ಒಂದೇ ದಿನ 1.67 ಕೋಟಿ ರುಪಾಯಿ ಕಲೆಕ್ಷನ್
ಸೋಮವಾರ ಒಂದೇ ದಿನ ಬಿಎಂಆರ್ಸಿಎಲ್ ಟಿಕೆಟ್ ಮಾರಾಟದಿಂದ 1.67 ಕೋಟಿ ರುಪಾಯಿ ಸಂಗ್ರಹ ಮಾಡಿದೆ ಎಂದು ಅಂಜುಂ ಫರ್ವೇಜ್ ಮಾಹಿತಿ ನೀಡಿದರು. ಕೋವಿಡ್ ನಿಂದ ಆರ್ಥಿಕ ಸಂಕಷ್ಟ ಅನುಭವಿಸಿದ್ದ ಬಿಎಂಆರ್ಸಿಎಲ್ ಈಗ ಯಥಾಸ್ಥಿತಿಯತ್ತ ಮರಳುತ್ತಿದೆ ಎಂದರು.
2022ರ ಆರ್ಥಿಕ ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ಕೋವಿಡ್ ನಂತರ ಇದೇ ಮೊದಲ ಬಾರಿಗೆ ಬಿಎಂಆರ್ಸಿಎಲ್ ಲಾಭದ ಹಳಿಗೆ ಮರಳಿದೆ. ಎರಡನೇ ತ್ರೈಮಾಸಿಕ ಅವಧಿಯಲ್ಲಿ ನಮ್ಮ ಮೆಟ್ರೋ 12 ಲಕ್ಷ ರುಪಾಯಿಗಳ ಲಾಭ ಗಳಿಸಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಕೂಡ ಹೆಚ್ಚಳವಾಗುತ್ತಿದೆ.
ಖಾದಿ ಉತ್ಪನ್ನಗಳ ಪ್ರದರ್ಶನಕ್ಕೆ ಅವಕಾಶ ಕೊಟ್ಟ ಮೆಟ್ರೋ
75ನೇ ವರ್ಷದ ಸ್ವಾತಂತ್ಯ್ರ ಸಂಭ್ರಮದ ಅಂಗವಾಗಿ ಕೈಮಗ್ಗ ಮತ್ತು ಖಾದಿ ಉತ್ಪನ್ನಗಳನ್ನು ಉತ್ತೇಜಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು 60 ಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಬೆಂಗಳೂರು ಸಂತೆ ಜಾಗದಲ್ಲಿ ತಮ್ಮ ಉತ್ಪನ್ನಗಳನ್ನು ಉಚಿತವಾಗಿ ಮಾರಾಟ ಮಾಡಲು ಅನುಮತಿ ನೀಡಿದೆ.
ಆಗಸ್ಟ್ 15 ರಿಂದ 21 ರವರೆಗೆ ಕುಶಲಕರ್ಮಿಗಳೊಂದಿಗೆ ಖಾದಿ ಪ್ರದರ್ಶನ ನಡೆಯಲಿದೆ. ಒಂದು ವಾರಗಳ ಕಾಲ ಯಾವುದೇ ಶುಲ್ಕ ಪಡೆಯದೇ ಬಿಎಂಆರ್ಸಿಎಲ್ ಕುಶಲಕರ್ಮಿಗಳಿಗೆ ಮಳಿಗೆ ತೆರೆಯಲು ಅವಕಾಶ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಲು ಈ ಕ್ರಮ ವಹಿಸಲಾಗಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ.
Recommended Video