ಲಾಕ್ ಡೌನ್; ನಮ್ಮ ಮೆಟ್ರೋ ಕಾಮಗಾರಿಗಳು ವಿಳಂಬ?
ಬೆಂಗಳೂರು, ಏಪ್ರಿಲ್ 27 : ಹಲವು ವಾರಗಳ ಬಳಿಕ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ 2ನೇ ಹಂತದ ಯೋಜನೆಗೆ ಕಾಮಗಾರಿ ಆರಂಭವಾಗಿದೆ. ಲಾಕ್ ಡೌನ್ ಘೋಷಣೆಯಾದ ಬಳಿಕ ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.
ಕೆಂಗೇರಿ-ಅಂಜನಾನಪುರ ಎಕ್ಸ್ಟೆಕ್ಷನ್ ನಡುವಿನ ಕಾಮಗಾರಿ ಆರಂಭವಾಗಿದೆ. ಈ ಕಾಮಗಾರಿ ನಿಗದಿತ ಅವಧಿಗಿಂತ 6 ತಿಂಗಳು ತಡವಾಗಲಿದೆ ಎಂದು ಅಂದಾಜಿಸಲಾಗಿದೆ. ಅಕ್ಟೋಬರ್ ವೇಳೆಗೆ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಅಂದಾಜಿಸಲಾಗಿತ್ತು.
ಒಂದು ತಿಂಗಳ ಬಳಿಕ ನಮ್ಮ ಮೆಟ್ರೋ ಕಾಮಗಾರಿ ಪುನರಾರಂಭ
"ಶನಿವಾರದಿಂದ ನಗರದ ವಿವಿಧ ಪ್ರದೇಶಗಳಲ್ಲಿ ನಮ್ಮ ಮೆಟ್ರೋ ಕಾಮಗಾರಿ ಆರಂಭವಾಗಿದೆ. 2051 ಕಾರ್ಮಿಕರು, 73 ಪ್ರದೇಶಗಳಲ್ಲಿ ಕಾಮಗಾರಿಯನ್ನು ಆರಂಭಿಸಿದ್ದಾರೆ" ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ.
ಹೊರ ವರ್ತುಲ ರಸ್ತೆ ಮೆಟ್ರೋ; ಮಹತ್ವದ ಹೆಜ್ಜೆ ಇಟ್ಟ ಬಿಎಂಆರ್ಸಿಎಲ್
ಕಾಮಗಾರಿ ನಡೆಯುವ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಪಾಲನೆ ಮಾಡಲಾಗುತ್ತಿದೆ. ನಮ್ಮ ಮೆಟ್ರೋ ಕಾಮಗಾರಿಯಲ್ಲಿ ತೊಡಗಿದ್ದ ಸಾವಿರಾರು ಉದ್ಯೋಗಿಗಳು ಬೆಂಗಳೂರು ನಗರದಲ್ಲಿಯೇ ಇದ್ದು, ಎಲ್ಲಾ ಪ್ರದೇಶದಲ್ಲಿ ಕಾಮಗಾರಿ ಆರಂಭಿಸಲಾಗುತ್ತಿದೆ.
ಲಾಕ್ ಡೌನ್; ಬೆರಗುಗೊಳಿಸುವ 5 ಚಿತ್ರಗಳು
ಯೋಜನೆಗಳು ವಿಳಂಬ?
ಲಾಕ್ ಡೌನ್ ಪರಿಣಾಮದಿಂದ ಕಾಮಗಾರಿ ಸ್ಥಗಿತವಾಗಿತ್ತು. ಈಗ ಕಾಮಗಾರಿ ಆರಂಭಗೊಂಡರೂ ನಿಗದಿತ ಗಡುವಿಗೆ ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ಅನುಮಾನ ಉಂಟಾಗಿದೆ. ಕಾರ್ಮಿಕರ ಕೊರತೆ, ಸುರಂಗ ತೋಡಲು ಬರಬೇಕಾದ ಚೀನಾದ ತಜ್ಞರು, ರಾಜ್ಯ ಮತ್ತು ಕೇಂದ್ರದಿಂದ ಆರ್ಥಕ ಸಹಕಾರ ಮುಂತಾದ ಕಾರಣಗಳಿಂದಾಗಿ ಯೋಜನೆಗಳು ವಿಳಂಬವಾಗಲಿವೆ.
ಎರಡು ಯೋಜನೆ ಪೂರ್ಣ
ಮೈಸೂರು ರಸ್ತೆ-ಕೆಂಗೇರಿ ನಡುವಿನ 9 ಕಿ. ಮೀ. ಮಾರ್ಗ ಆಗಸ್ಟ್ನಲ್ಲಿ, ಯೆಲಚೇನಹಳ್ಳಿ-ಅಂಜನಾಪುರ ನಡುವಿನ 6.5 ಮಾರ್ಗ ನವೆಂಬರ್ನಲ್ಲಿ ಪೂರ್ಣಗೊಳ್ಳುವ ಬಗ್ಗೆ ಅಧಿಕಾರಿಗಳು ವಿಶ್ವಾಸದಿಂದ ಇದ್ದಾರೆ. ಈ ಮಾರ್ಗದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು ವರ್ಷಾಂತ್ಯಕ್ಕೆ ರೈಲು ಸಂಚಾರ ಆರಂಭಗೊಳ್ಳುವ ನೀರಿಕ್ಷೆ ಇದೆ.
ಕಾಮಗಾರಿಗೆ ಅಡ್ಡಿ ಏನು?
ಕೆಲವು ಮೆಟ್ರೋ ಸುರಂಗ ಮಾರ್ಗ ನಿರ್ಮಾಣಕ್ಕೆ ಚೀನಾದಿಂದ ಅಗತ್ಯ ಕಚ್ಚಾ ವಸ್ತುಗಳು ಬರಬೇಕಿತ್ತು. ಆದರೆ, ಕೋವಿಡ್ - 19 ಪರಿಣಾಮ ಅದು ಸ್ಥಗಿತಗೊಂಡಿದೆ. ಇನ್ನೂ ಕಾಮಗಾರಿ ನಡೆಯುವ ಅನೇಕ ಕಡೆಗಳಲ್ಲಿ ಸಿಮೆಂಟ್, ಕಬ್ಬಿಣದ ಕೊರತೆ ಎದುರಾಗಿದೆ. ಲಾಕ್ ಡೌನ್ ಮುಗಿದ ಬಳಿಕ ಕಚ್ಚಾ ವಸ್ತುಗಳ ಪೂರೈಕೆ ಆಗುವ ಸಾಧ್ಯತೆ ಇದೆ.
ವೆಚ್ಚವೂ ಅಧಿಕವಾಗಲಿದೆ
ವಿದೇಶಗಳಿಂದ ಬರುವ ಕಚ್ಚಾ ವಸ್ತುಗಳ ಪೂರೈಕೆ ಸರಿಯಾಗಲು ಸುಮಾರು 6 ತಿಂಗಳು ಬೇಕು. ಲಾಕ್ ಡೌನ್ ಪರಿಣಾಮ ಮೆಟ್ರೋ ಯೋಜನಾ ವೆಚ್ಚವೂ ಅಧಿಕವಾಗಲಿದೆ. ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ವೆಚ್ಚ 26,500 ಕೋಟಿಯಿಂದ 32 ಸಾವಿರ ಕೋಟಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.