ನಮ್ಮ ಮೆಟ್ರೋ ಡಿಪೋ ನಿರ್ಮಾಣಕ್ಕೆ ಅರಣ್ಯ ಭೂಮಿ, ಎಎಪಿ ವಿರೋಧ
ಬೆಂಗಳೂರು, ಆಗಸ್ಟ್ 06: ವೈಟ್ಫೀಲ್ಡ್ ಬಳಿಯಲ್ಲಿ ಮೆಟ್ರೋ ಡಿಪೋ ಮತ್ತು ಎರಡು ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕಾಗಿ ಮೆಟ್ರೋ ಅಧಿಕಾರಿಗಳು ಕಾಡುಗೋಡಿ ಅರಣ್ಯ ಭೂಮಿಯ 18.11 ಹೆಕ್ಟೇರ್(44.75 ಎಕರೆ)ಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಅನುಮತಿ ಕೋರಿ ಸಲ್ಲಿಸಿದ್ದ ಮನವಿಗೆ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯವು ಅನುಮೋದನೆ ನೀಡಿರುವುದು ಆತಂಕಕಾರಿ ವಿದ್ಯಾಮಾನವಾಗಿದೆ ಎಂದು ಆಮ್ ಆದ್ಮಿ ಪಕ್ಷ
ಒಬ್ಬ ವ್ಯಕ್ತಿ ತನಗೆ ಅಗತ್ಯವಿರುವಷ್ಟು ಆಮ್ಲಜನಕವನ್ನು ಪಡೆದುಕೊಳ್ಳಲು 7 ರಿಂದ 8 ಮರಗಳು ಬೇಕಾಗುತ್ತವೆ. ಆದರೆ 1 ಕೋಟಿ ಜನಸಂದಣಿ ಹೊಂದಿರುವ ಬೆಂಗಳೂರು ಕೇವಲ 15 ಲಕ್ಷ ಮರಗಳನ್ನು ಹೊಂದಿದೆ. ಅಂದರೆ ಒಂದು ಮರದಿಂದ 7 ಜನರು ಉಸಿರಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಮರಗಳನ್ನು ಬೆಳೆಸಲು ಹೆಚ್ಚು ಒತ್ತು ಕೊಡಬೇಕಾಗಿರುವ ನಗರಾಭಿವೃದ್ಧಿ ಇಲಾಖೆಯು ಕಣ್ಣಿದ್ದೂ ಕುರುಡಾಗಿ ಕುಳಿತಿದೆ. ನಿಯಂತ್ರಣವಿಲ್ಲದ ನಗರೀಕರಣದ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ.
ಬೆಂಗಳೂರಿನ ದಕ್ಷಿಣ ಪ್ರದೇಶಕ್ಕಾಗಿ ಲಾಲ್ಬಾಗ್ ಹಾಗೂ ಬೆಂಗಳೂರು ಕೇಂದ್ರ ಭಾಗಕ್ಕೆ ಕಬ್ಬನ್ ಪಾರ್ಕ್ಗಳು ಇರುವಂತೆ ಬೆಂಗಳೂರು ಪೂರ್ವಕ್ಕೆ ಕಾಡುಗೋಡಿಯ ಅರಣ್ಯ ಪ್ರದೇಶವನ್ನು ಮೀಸಲಿಡಲಾಗಿದೆ. ಆದರೆ ಮೆಟ್ರೋ ಕಾಮಗಾರಿಗಾಗಿ ಅರಣ್ಯ ಭೂಮಿಯಲ್ಲಿರುವ ಮರಗಳನ್ನೂ ನಾಶ ಮಾಡಲು ಮೆಟ್ರೋ ಸಂಸ್ಥೆ ಮುಂದಾಗಿದೆ ಎಂದು ಎಎಪಿ ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ವಿಷಾದ ವ್ಯಕ್ತಪಡಿಸಿದರು.
ನಗರದಲ್ಲಿನ ಮರಗಳನ್ನೂ ವಿಸ್ತರಿಸಿ
ಬೆಂಗಳೂರಿನಂತಹ ಸಂಚಾರ ದಟ್ಟಣೆಯಿರುವ ನಗರಕ್ಕೆ ಮೆಟ್ರೋದ ಅಗತ್ಯತೆ ಬಹಳಷ್ಟಿದೆ. ಮೆಟ್ರೋ ಕಾರಣದಿಂದಾಗಿ ಸಾರ್ವಜನಿಕರ ಸಮಯ ಉಳಿಯುತ್ತಿದ್ದು ಒತ್ತಡವಿಲ್ಲದೆ ಕಾರ್ಯನಿರ್ವಹಿಸಲು ನೆರವಾಗುತ್ತಿದೆ. ಮೊದಲ ಹಂತದ 42 ಕಿ.ಮೀ ಉದ್ದದ ಮೆಟ್ರೋ ಮಾರ್ಗದಲ್ಲಿ 40 ಮೆಟ್ರೋ ನಿಲ್ದಾಣಗಳಿದ್ದು ದಿನಕ್ಕೆ 5 ಲಕ್ಷ ಪ್ರಯಾಣಿಕರು ಮೆಟ್ರೋ ಬಳಸುತ್ತಿದ್ದಾರೆ. ಹಾಗಾಗಿ ಬೆಂಗಳೂರು ನಗರಕ್ಕೆ ಮೆಟ್ರೋ ವಿಸ್ತರಣೆ ಅತ್ಯಾವಶ್ಯಕವಾಗಿ ಬೇಕಾಗಿದೆ. ಅಷ್ಟೇ ಪ್ರಮಾಣದಲ್ಲಿ ನಗರದಲ್ಲಿನ ಮರಗಳನ್ನೂ ವಿಸ್ತರಿಸುವುದೂ ಕೂಡ ಮುಖ್ಯವಾಗಿದೆ.
ಮೆಟ್ರೋ ಸಾಲಿನ ಕೆಳಭಾಗದಲ್ಲಿ ಮತ್ತು ಮೆಟ್ರೋ ನಿಲ್ದಾಣಗಳಲ್ಲಿರುವ ಜಾಗದಲ್ಲಿ ಸಣ್ಣ ಗಿಡಗಳನ್ನು ಬೆಳಸಿ ಹಸಿರು ಹೊದಿಕೆಯನ್ನು ಹಾಕುವುದಾಗಿ ಬಿಎಂಆರ್ಸಿಎಲ್ ಅಧಿಕಾರಿಗಳು ಮೆಟ್ರೋ ಕಾಮಗಾರಿ ಆರಂಭಗೊಳ್ಳುವ ಸಂದರ್ಭದಲ್ಲಿ ಹೇಳಿದ್ದರು. ಆದರೆ ಇದುವರೆಗೂ ಯಾವ ನಿಲ್ದಾಣದಲ್ಲಿಯೂ ಹಸಿರು ಹೊದಿಕೆ(ಗ್ರೀನ್ ಕವರ್)ಯ ಕೆಲಸ ನಡೆದಿಲ್ಲ. ಬದಲಾಗಿ ಮೆಟ್ರೋ ಸಾಲಿನ ಕೆಳಭಾಗವು ಕಸದ ಗುಂಡಿಗಳಾಗಿ ಮಾರ್ಪಟ್ಟಿವೆ.
600ಕ್ಕೂ ಹೆಚ್ಚು ಮರ ಕಡಿದಿರುವ ನಮ್ಮ ಮೆಟ್ರೋ
ಇಂತಹ ಹೊಣೆಗೇಡಿತನವನ್ನು ಪ್ರದರ್ಶಿಸಿರುವ ಬಿಎಂಆರ್ಸಿಎಲ್ ಈಗಾಗಲೇ 600ಕ್ಕೂ ಹೆಚ್ಚು ಮರಗಳನ್ನು ಕಡಿದುರುಳಿಸಿದೆ, ಸ್ವಾಧೀನ ಪಡಿಸಿಕೊಂಡ ಅರಣ್ಯ ಪ್ರದೇಶದಲ್ಲಿ ಎಷ್ಟು ಭೂಮಿಯನ್ನು ಬಳಸಲಾಗುತ್ತದೆ, ಎಷ್ಟು ಮರಗಳನ್ನು ರಕ್ಷಿಸಲಾಗುತ್ತಿದೆ ಎಂಬ ಯಾವುದೇ ಯೋಜನೆಯಿಲ್ಲದೆ ಕಾಡುಗೋಡಿ ಅರಣ್ಯ ಪ್ರದೇಶವನ್ನೂ ನಾಶಮಾಡಲು ಮುಂದಾಗಿದ್ದು, ಮತ್ತೊಂದು ಕೊಳಚೆ ಪ್ರದೇಶವನ್ನಾಗಿಸುವುದರಲ್ಲಿ ಅನುಮಾನವೇ ಇಲ್ಲ.
ಈಗಾಗಲೇ ಕೆ.ಆರ್.ಪುರಂನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಗಾವರ, ಆರ್.ಕೆ.ಹೆಗ್ಡೆನಗರದ ಮಾರ್ಗದಲ್ಲಿ ಮೆಟ್ರೋ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಕೆ.ಆರ್.ಪುರಂ ಮತ್ತು ಹೆಬ್ಬಾಳ ಹೊರವರ್ತುಲ ರಸ್ತೆ ನಡುವೆ ಎಂಬಸಿ ಗ್ರೂಪ್ ಕಂಪನಿ ಸೇರಿದಂತೆ ಹಲವಾರು ಐಟಿ ಕಂಪನಿಗಳಿದ್ದು, ಆ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜರ್ಕೂರು ಬಳಿಯ ಗ್ಯಾಸ್ ಪೈಪ್ ಮತ್ತು ಜಲಮಂಡಳಿಯ ಎರಡು ಪೈಪ್ ಲೈನ್ಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣವನ್ನು ನೀಡಿ 29 ಕಿ.ಮೀ ಮೆಟ್ರೋ ಮಾರ್ಗವನ್ನು ಹೆಬ್ಬಾಳ ಮಾರ್ಗವಾಗಿ 39 ಕಿ.ಮೀ ಮಾರ್ಗಕ್ಕೆ ಬದಲಾಯಿಸಲಾಗಿದೆ ಎಂದು ಮೋಹನ್ ದಾಸರಿ ಆರೋಪಿಸಿದರು.
ಕಾರ್ಪೊರೇಟ್ ಕಂಪನಿ ರೀತಿ ಕಾರ್ಯ
ಐಟಿ ಕಂಪನಿಗಳ ಅನುಕೂಲಕ್ಕಾಗಿ ಮೆಟ್ರೋ ಮಾರ್ಗವನ್ನೇ ಬದಲಾಯಿಸಿರುವ ಬಿಎಂಆರ್ಸಿಎಲ್, ಸಾರ್ವಜನಿಕರ ಅನುಕೂಲವನ್ನು ಮರೆತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಂತ್ರಣವಿಲ್ಲದೆ ಆದಾಯ ಮಾಡುವ ಉದ್ದೇಶದಿಂದ ಕಾರ್ಪೊರೇಟ್ ಕಂಪನಿಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕ ಹಿತಾಸಕ್ತಿಯನ್ನು ಗಾಳಿಗೆ ತೂರಿರುವ ಮೆಟ್ರೋ ಅಧಿಕಾರಿಗಳಿಗೆ ಕಾಡುಗೋಡಿಯ ಅರಣ್ಯ ಪ್ರದೇಶದಲ್ಲಿರುವ ಮರಗಳು ಮುಖ್ಯವಾಗದೇ ಇರುವುದು ಅವರ ಪರಿಸರ ಕಾಳಜಿಯು ಯಾವ ಮಟ್ಟಕ್ಕೆ ಸಂಕುಚಿತವಾಗಿದೆ ಎಂಬುದನ್ನು ತೋರಿಸುತ್ತದೆ.
ಅಭಿವೃದ್ಧಿ ಎಂದರೆ ಪ್ರಾಕೃತಿಕ ಸಂಪತ್ತನ್ನೂ ಉಳಿಸಿಕೊಂಡು ಮಾಡುವ ಸುಸ್ಥಿರ ಅಭಿವೃದ್ಧಿ ಎಂಬುದನ್ನು ಮರೆತಿರುವ ಸರ್ಕಾರಗಳು ವಿನಾಶಕಾರಿ ಅಭಿವೃದ್ಧಿಯ ಹಿಂದೆ ಓಡುತ್ತಿವೆ. ಸರ್ಕಾರದ ಯೋಜನೆಗಳಿಗೆ ಯಾವುದೇ ಪರಿಶೀಲನೆಗಳಿಲ್ಲದೆ ಸಹಿಹಾಕಲಾಗುತ್ತಿದೆ. ಕಾಡುಗೋಡಿ ಅರಣ್ಯ ಪ್ರದೇಶ ಸ್ವಾಧೀನದ ಪರಿಹಾರವಾಗಿ 45 ಎಕರೆ ಭೂಮಿಯನ್ನು ಕಾಳಿ ಹುಲಿ ಮೀಸಲು ಪ್ರದೇಶ ಮತ್ತು ತಿಪ್ಪಗೊಂಡನಹಳ್ಳಿಯಲ್ಲಿ ನೀಡಲಾಗಿದೆ. ಭೂಮಿಗೆ ಪರಿಹಾರವಾಗಿ ಭೂಮಿಯನ್ನು ಮತ್ತೆಲ್ಲೋ ನೀಡಬಹುದು. ಆದರೆ ಅಲ್ಲಿಯ ಮರಗಳನ್ನಾಗಲೀ, ಆ ಮರಗಳಿಂದ ಅಲ್ಲಿಯ ಜನರಿಗೆ ದೊರೆಯುತ್ತಿದ್ದ ಶುದ್ಧ ಗಾಳಿಯನ್ನಾಗಲೀ, ಪ್ರಾಕೃತಿಕ ಸೌಂದರ್ಯವನ್ನಾಗಲೀ ಪರಿಹಾರವಾಗಿ ನೀಡಲು ಸಾಧ್ಯವೇ?
ಶುದ್ಧಗಾಳಿ ಇಲ್ಲದೆ ಜನರು ಕಂಗಾಲು
ಕಾಡುಗೋಡಿ ಅರಣ್ಯದಿಂದಾಗಿ ವೈಟ್ ಫೀಲ್ಡ್, ವರ್ತೂರು, ಸಿದ್ಧಾರ್ಥ ಲೇಔಟ್, ಗೋಪಾಲನಗರದಂತಹ ಹಲವು ಪ್ರದೇಶಗಳಲ್ಲಿನ ಜನರು ಶುದ್ಧಗಾಳಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಹಾಗಾಗಿ ಕಾಡುಗೋಡಿ ಅರಣ್ಯವನ್ನು ಉಳಿಸಿಕೊಂಡು ಮೆಟ್ರೋ ಕಾಮಗಾರಿಯನ್ನು ಮಾಡುವ ಬಗೆಗೆ ಬಿಎಂಆರ್ಸಿಎಲ್ ಚಿಂತಿಸಬೇಕು. ಮೆಟ್ರೋ ಅಧಿಕಾರಿಗಳು ಕಾರ್ಪೋರೆಟ್ ಕಂಪನಿಗಳಂತ ಲಾಭಗಳಿಸುವ ಬಗೆಗಷ್ಟೇ ಚಿಂತಿಸದೆ ಸಾರ್ವಜನಿಕ ಆಸ್ತಿ ರಕ್ಷಣೆಯ ಬಗೆಗೂ ಆಲೋಚಿಸಬೇಕು. ಈಗಲೂ ಸಮಯವಿದ್ದು ಅರಣ್ಯ ನಾಶವನ್ನು ತಪ್ಪಿಸುವಂತಹ ರೀತಿಯಲ್ಲಿ ಯೋಜನೆ ರೂಪಿಸಬೇಕು.
ನಾಶ ಮಾಡಿದ ಮರಗಳ ಜಾಗದಲ್ಲಿ ಹಸಿರು ಪ್ಲಾಂಟೇಷನ್ ಮಾಡುವುದಾಗಿ ಹೇಳುತ್ತಿರುವ ಬಿಎಂಆರ್ಸಿಎಲ್, ಇದುವರೆಗೂ ಯಾವ ಭಾಗದಲ್ಲಿಯೂ ಗ್ರೀನ್ ಕವರ್ ಕೆಲಸವನ್ನು ಮಾಡಿ ತನ್ನ ಮಾತನ್ನು ಉಳಿಸಿಕೊಂಡಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಖಾಲಿ ಬಿದ್ದು ಕಸದ ಗುಂಡಿಗಂತಾಗಿರುವ ಮೆಟ್ರೋ ಸಾಲಿನ ಕೆಳಗೆ ಗಿಡಗಳನ್ನು ಬೆಳೆಸಿ ತಮ್ಮ ಕಾರ್ಯನಿರ್ವಹಣೆಯನ್ನು ಸಾಬೀತು ಪಡಿಸಬೇಕು. ಸ್ವಾಧೀನ ಪಡಿಸಿಕೊಂಡಿರುವ ಅರಣ್ಯ ಭೂಮಿಯಲ್ಲಿ 50% ಗಿಡ-ಮರಗಳನ್ನು ಸಂರಕ್ಷಿಸಿ, ಉಳಿಸಿ ಬೆಳೆಸಬೇಕು. ಅರಣ್ಯ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಮೆಟ್ರೋ ಮಾರ್ಗವನ್ನು ರೂಪಿಸಬೇಕು ಎಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ ಎಂದ ಅವರು ತಿಳಿಸಿದರು.