ಮೆಜಿಸ್ಟಿಕ್ನಲ್ಲಿ ಅಪಹರಣವಾಗಿದ್ದ ಅಂಧ ದಂಪತಿಯ ಮಗು ಪತ್ತೆ
ಬೆಂಗಳೂರು, ಏಪ್ರಿಲ್ 30: ಸಂಬಂಧಿಗಳ ಮನೆಗೆಂದು ನಿನ್ನೆ ಬೆಂಗಳೂರಿಗೆ ಬಂದಿದ್ದ ಅಂಧ ದಂಪತಿಗಳ ಎಂಟು ತಿಂಗಳ ಹಸುಗೂಸನ್ನು ಅಪಹರಿಸಲಾಗಿತ್ತು, ಆದರೆ ಪೊಲೀಸರ ಶ್ರಮದಿಂದ ಒಂದೇ ದಿನದಲ್ಲಿ ಮಗು ಮತ್ತೆ ಹೆತ್ತವರ ಮಡಿಲು ಸೇರಿದೆ.
ನಿನ್ನೆ ಮೆಜಿಸ್ಟಿಕ್ನಲ್ಲಿ ಮಗುವಿಗೆ ನೀರು ಕುಡಿಸುತ್ತೇನೆಂದು ಮಹಿಳೆಯೊಬ್ಬರು ಅಂಧ ದಂಪತಿಯಿಂದ ಮಗುವನ್ನು ಪಡೆದಿದ್ದರು, ಆ ನಂತರ ಮಗುವನ್ನು ಅಪಹರಿಸಿದ್ದರು, ಪೊಲೀಸ್ ದೂರು ನೀಡಲಾಗಿತ್ತು.
ಮೆಜೆಸ್ಟಿಕ್ನಲ್ಲಿ ಅಂಧ ದಂಪತಿಯ 8 ತಿಂಗಳ ಹಸುಗೂಸು ಅಪಹರಣ
ಮಗುವನ್ನು ಕಳೆದುಕೊಂಡಿದ್ದ ಅಂಧ ದಂಪತಿಗಳ ಗೋಳು ಹೇಳತೀರದಾಗಿತ್ತು, ಸಾಮಾಜಿಕ ಜಾಲತಾಣದಲ್ಲಿ ಘಟನೆಗೆ ಮರುಗಿ ಸಹಾಸ್ರಾರು ಜನ ಪ್ರತಿಕ್ರಿಯಿಸಿದ್ದರು, ಮತ್ತು ದಂಪತಿಗಳ ಮಡಿಲಿಗೆ ಮಗು ಸೇರಲೆಂದು ಪ್ರಾರ್ಥಿಸಿದ್ದರು, ಅಂತೆಯೇ ಇಂದು ಮಗು ಅಂಧ ದಂಪತಿಗಳ ಮಡಿಲು ಸೇರಿದೆ.
ಮಗು ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಮಗುವಿನ ಚಿತ್ರವನ್ನು ಎಲ್ಲಾ ಠಾಣೆಗೆ ಕಳುಹಿಸಿದ್ದರು, ಮಗುವನ್ನು ಚಿತ್ರದುರ್ಗದ ಮಹಿಳೆಯೊಬ್ಬರು ಕೆಂಗೇರಿ ಬಳಿ ಗುರುತಿಸಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು, ಕೂಡಲೆ ಎಚ್ಚೆತ್ತ ಪೊಲೀಸರು ಮಗುವನ್ನು ಅಪಹರಣಕಾರರ ಸಮೇತ ಹಿಡಿದರು.
ತಮಗೆ ಮಕ್ಕಳಿಲ್ಲ ಎಂದು ಯಾರದ್ದೋ ಮಗುವನ್ನು ಅಪಹರಿಸಿದ ಕಳ್ಳರು
ಅಂಧ ದಂಪತಿಯ ಮಗುವನ್ನು ಅಪಹರಿಸಿದ ಘಟನೆ ಬಗ್ಗೆ ತೀವ್ರ ಬೇಸರದಿಂದ ನಿನ್ನೆ ಟ್ವೀಟ್ ಮಾಡಿದ್ದ ಚಿತ್ರ ನಟ ಜಗ್ಗೇಶ್ ಅವರು ಇಂದು ಮಗು ದೊರೆತ ನಂತರವೂ ಟ್ವೀಟ್ ಮಾಡಿದ್ದು, ಪೊಲೀಸರಿಗೆ ಧನ್ಯವಾದ ಹೇಳುವ ಜೊತೆಗೆ ಆ ಅಂಧ ದಂಪತಿಯನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.