ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಪೋಟ
ಬೆಂಗಳೂರು, ಡಿ. 28 : ನಗರದ ಚರ್ಚ್ ಸ್ಟ್ರೀಟ್ ನಲ್ಲಿರುವ ಕೋಕೋನಟ್ ಗ್ರೋವ್ ಎಂಬ ಹೋಟೆಲಿನ ಬಳಿ ಭಾನುವಾರ ಸಂಜೆ 8.30ಕ್ಕೆ ಬಾಂಬ್ ಸ್ಫೋಟ ಸಂಭವಿಸಿದ್ದು, ಓರ್ವ ಮಹಿಳೆಯ ತಲೆಗೆ ತೀವ್ರವಾಗಿ ಗಾಯವಾಗಿದ್ದು, ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೊಂದಿಗೆ ಇನ್ನೂ ಇಬ್ಬರು ಕೂಡ ಗಾಯಗೊಂಡಿದ್ದಾರೆ.
ಚರ್ಚ್ ಸ್ಟ್ರೀಟ್ ನಲ್ಲಿದ್ದ ಪಾದಚಾರಿ ರಸ್ತೆಯಲ್ಲಿದ್ದ ಹೂಕುಂಡದ ಬುಡದಲ್ಲಿ ಸುಧಾರಿತ ಸ್ಫೋಟದ ಸಾಧನ ಇಡಲಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತೀವ್ರವಾಗಿ ಗಾಯಗೊಂಡಿರುವ ಭವಾನಿ (33) ಎಂಬುವವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೊಂದಿಗಿದ್ದ ಮತ್ತೊಬ್ಬರೂ ಗಾಯಗೊಂಡಿದ್ದಾರೆ ಎಂದು ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಧಾವಿಸಿದ್ದು, ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು, ಈ ಕಡಿಮೆ ಪ್ರಮಾಣದ ಸ್ಫೋಟ ಸಂಭವಿಸಿದ್ದು ಹೇಗೆ ಎಂಬುದರ ತನಿಖೆ ನಡೆಸುತ್ತಿದ್ದಾರೆ. ಹೊಸ ವರ್ಷಕ್ಕೆ ಕೆಲವೇ ದಿನಗಳಿರುವಾಗ ಈ ಸ್ಫೋಟ ಸಂಭವಿಸಿರುವುದು ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಇಡೀ ನಗರದಾದ್ಯಂತ ಕಟ್ಟೆಚ್ಚರದಿಂದಿರುವಂತೆ ಪೊಲೀಸರಿಗೆ ಸೂಚಿಸಲಾಗಿದೆ.
ಚೆನ್ನೈ ಮೂಲದ ಭವಾನಿ ದೇವಿ ಅವರ ತಲೆಗೆ ತೀವ್ರವಾಗಿ ಗಾಯವಾಗಿದೆ. ಅವರನ್ನು ಮಲ್ಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರೊಂದಿಗಿದ್ದ ಬೆಂಗಳೂರಿನ ಕಾರ್ತಿಕ್ ಅವರ ಬೆನ್ನಿಗೆ ಗಾಯವಾಗಿದ್ದು, ಅವರನ್ನೂ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಸಂದೀಪ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಹೊಸ್ಮಟ್ ಆಸ್ಪತ್ರಗೆ ಸೇರಿಸಲಾಗಿದೆ. ಅವರಿಗೆ ಮಂಡಿಗೆ ಗಾಯವಾಗಿದೆ.
ಭವಾನಿ ಮತ್ತು ಕಾರ್ತಿಕ್ ಅವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಎಂಜಿ ರಸ್ತೆಯ ಬಳಿಯಿರುವ ಅಮೀಬಾಗೆ ಹೋಗುವಾಗ ಈ ಘಟನೆ ಸಂಭವಿಸಿದೆ. ಹೂಕುಂಡದ ಬಳಿ ಲುಂಗಿ ಬಟ್ಟೆ ಮತ್ತು ಕಾಗದದಲ್ಲಿ ಬಾಂಬನ್ನು ಸುತ್ತಿ ಇಡಲಾಗಿತ್ತು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಸ್ಥಳಕ್ಕೆ ಡಿವಿ ಸದಾನಂದ ಗೌಡ ದೌಡು : ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಅವರು ಕೂಡ ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಧಾವಿಸಿದ್ದಾರೆ. ಟ್ವಿಟ್ಟರ್ ಮುಖಾಂತರ ಐಸ್ಐಎಸ್ ಪರ ಸಂದೇಶ ಬಿತ್ತರಿಸುತ್ತಿದ್ದ ಮೆಹದಿ ಮಸ್ರೂರ್ ಬಿಸ್ವಾಸ್ ನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ ನಂತರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು.
ಸುಳ್ಳು ಸುದ್ದಿ ಹಬ್ಬಿಸದಂತೆ ಮನವಿ : ಈ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಅನಗತ್ಯ ಸುದ್ದಿಗಳನ್ನು ಹಬ್ಬಿಸಬಾರದೆಂದು ಪೊಲೀಸ್ ಆಯುಕ್ತರು ಜನರಿಗೆ ಮನವಿ ಮಾಡಿದ್ದಾರೆ. ಇಬ್ಬರು ಸತ್ತಿದ್ದಾರೆ, ಮೂವರು ಸತ್ತಿದ್ದಾರೆ ಎಂದು ಯಾರಾದರೂ ಸುಳ್ಳು ಸುದ್ದಿ ಹಬ್ಬಿಸಿದರೆ ಅವರ ಮುಖಕ್ಕೆ ಗುದ್ದಿ ಎಂದು ವಿಜಯ್ ಮಲ್ಯ ಅವರು ಟ್ವಿಟ್ಟರಿನಲ್ಲಿ ಸಂದೇಶ ಹಾಕಿದ್ದಾರೆ.
ಎಚ್ಚರದಿಂದಿರುವಂತೆ ಜನರಿಗೂ ಸೂಚನೆ : ನಗರದಾದ್ಯಂತ ಕಟ್ಟೆಚ್ಚರದಿಂದಿರುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಜೊತೆಗೆ ನಾಗರಿಕರಿಗೆ ಅನುಮಾನಾಸ್ಪದ ವಸ್ತುಗಳ ಕಂಡುಬಂದರೆ ಕೂಡಲೆ 100 ಸಂಖ್ಯೆಗೆ ಕರೆ ಮಾಡುವಂತೆ ಪೊಲೀಸ್ ಆಯುಕ್ತ ಸೂಚಿಸಿದ್ದಾರೆ.
ನಗರಕ್ಕೆ ಮರುಕಳಿಸಿದ ಆತಂಕ : 2008ರ ಜುಲೈ 25ರಂದು ಬೆಂಗಳೂರಿನಲ್ಲಿ ಏಳು ಕಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿ, ಮಡಿವಾಳದಲ್ಲಿ ಓರ್ವ ಮಹಿಳೆ ಸಾವಿಗೀಡಾಗಿದ್ದರು.