ಈ ಸರ್ಕಾರ ಮುಗಿಯೋವರೆಗೂ ಯಡಿಯೂರಪ್ಪ ಅವರೇ ಸಿಎಂ
ಬೆಂಗಳೂರು, ಆ. 23: ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸರಣಿ ಸಭೆಗಳು ನಡೆದಿವೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ನೇತೃತ್ವದಲ್ಲಿ ಹೊಸ ಪದಾಧಿಕಾರಿಗಳೊಂದಿಗೆ ಇಡೀ ದಿನ ಸಭೆ ನಡೆದಿವೆ. ರಾಜ್ಯ ಬಿಜೆಪಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಕಾರ್ಯದರ್ಶಿಗಳು, ಖಜಾಂಚಿಗಳು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರುಗಳ ಪ್ರತ್ಯೇಕ ಸಭೆ ನಡೆಸಿದರು.
Recommended Video
ಪಕ್ಷ ಸಂಘಟನೆ ಹಾಗೂ ಬಿಬಿಎಂಪಿ ಚುನಾವಣೆಯನ್ನು ಕೇಂದ್ರೀಕರಿಸಿ ನಡೆದ ಸಭೆಯಲ್ಲಿ ಎಲ್ಲರನ್ನೂ ಪ್ರತ್ಯೇಕವಾಗಿ ಮಾತನಾಡಿಸಿದರು. ಮೊದಲಿಗೆ ರೈತ ಮೋರ್ಚಾ ಅಧ್ಯಕ್ಷ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಜತೆ ಬಿ ಎಲ್ ಸಂತೋಷ್ ಚರ್ಚೆ ನಡೆಸಿದರು. ನಂತರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಜೊತೆ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಜತೆಗೂ ಚರ್ಚೆ ನಡೆಸಿದರು.
ಬೆಂಗಳೂರು ಗಲಭೆ: ಬಿಎಲ್ ಸಂತೋಷ್ ಭೇಟಿ ಮಾಡಿದ ಗೃಹ ಸಚಿವ ಬೊಮ್ಮಾಯಿ
ಸರಣಿ ಸಭೆಗಳ ಕುರಿತು ಮಾಹಿತಿ ಕೊಟ್ಟ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು, ನಮ್ಮ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಬೆಳಗ್ಗೆಯಿಂದ ಸಭೆ ನಡೆಸಿದ್ದಾರೆ. ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ರಾಜ್ಯಾಧ್ಯಕ್ಷ ಭಾಗವಹಿಸಿದ್ದರು. ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಡಲು ಸೂಚಿಸಿದ್ದಾರೆ. ಜೊತೆಗೆ ನಮಗೆಲ್ಲ ರಾಜ್ಯಾದ್ಯಂತ ಪ್ರವಾಸ ಮಾಡಲು ಸೂಚನೆ ಕೊಟ್ಟಿದ್ದಾರೆ. ಕಾರ್ಯಕರ್ತರನ್ನು ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ತೊಡಗಿಸಬೇಕು ಎಂದಿದ್ದಾರೆ.
ಸಚಿವರಾದ ಬೊಮ್ಮಾಯಿ ಮತ್ತು ಸುಧಾಕರ್ ಜೊತೆ ಚರ್ಚೆ ವಿಚಾರ: ಸಾಧನೆ ಮೌಲ್ಯಮಾಪನಕ್ಕಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸುಧಾಕರ್ ಜೊತೆ ಚರ್ಚೆ ಮಾಡಿಲ್ಲ. ಗಲಭೆ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಮಾಹಿತಿ ಪಡೆದು ಕೊಂಡಿದ್ದಾರೆ. ಗಲಭೆಯಲ್ಲಿ ಎಸ್ಡಿಪಿಐ ಪಾತ್ರದ ಬಗ್ಗೆ ಗಲಾಟೆಗೆ ಕಾರಣಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ರವಿಕುಮಾರ್ ಹೇಳಿದ್ದಾರೆ.
ಜೊತೆಗೆ ಕೊರೊನಾ ವೈರಸ್ ನಿಯಂತ್ರಣದ ಬಗ್ಗೆ ಸುಧಾಕರ್ ಅವರಿಂದ ಮಾಹಿತಿ ಪಡೆದಿದ್ದಾರೆ. ಇದು ಸಹಜವಾದ ಮಾತುಕತೆ. ನಾಯಕತ್ವ ಬದಲಾವಣೆ ವಿಚಾರ ಚರ್ಚೆ ನಡೆಸಿದ್ದಾರೆ ಅನ್ನೋದು ಸುಳ್ಳು. ಅದರಲ್ಲಿ ಸತ್ಯಾಂಶ ಇಲ್ಲ. ಪಕ್ಷ ಸಂಘಟನೆ ಬಗ್ಗೆ ಮಾತ್ರ ಸಂತೋಷ್ ಚರ್ಚೆ ಮಾಡಿದ್ದಾರೆ. ಈ ಸರ್ಕಾರ ಮುಗಿಯೋವರೆಗೂ ಯಡಿಯೂರಪ್ಪ ಅವರೇ ಸಿಎಂ ಆಗಿರ್ತಾರೆ ಎಂದು ಎನ್. ರವಿಕುಮಾರ್ ಹೇಳಿಕೆ ಕೊಟ್ಟಿದ್ದಾರೆ.