ಶರತ್ ಬಚ್ಚೇಗೌಡರಿಗೆ ಬಿಜೆಪಿ ಬಾಗಿಲು ಬಂದ್: ಬಿಜೆಪಿ ಮುಖಂಡ
ಬೆಂಗಳೂರು, ಡಿಸೆಂಬರ್ 10: ಉಪ ಚುನಾವಣೆಯಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿರುವ ಶರತ್ ಬಚ್ಚೇಗೌಡ ಅವರಿಗೆ ಬಿಜೆಪಿ ಬಾಗಿಲು ಬಂದ್ ಆಗಿದೆ ಎಂದು ಹೊಸಕೋಟೆ ಬಿಜೆಪಿ ಮುಖಂಡ ಜಯರಾಜ್ ಹೇಳಿದ್ದಾರೆ.
ಹೊಸಕೋಟೆಯ ಎಂಟಿಬಿ ಭವನದಲ್ಲಿ ಮಾತನಾಡಿದ ಜಯರಾಜ್, ಮಂತ್ರಿ ಸ್ಥಾನ ತ್ಯಾಗ ಮಾಡಿ, ಬಿಜೆಪಿ ಸರ್ಕಾರ ರಚಿಸಲು ಪ್ರಮುಖ ಕಾರಣವಾಗಿರುವ ಎಂಟಿಬಿ ನಾಗರಾಜ್ ಅವರನ್ನು ಉಪ ಚುನಾವಣೆಯಲ್ಲಿ ಬೆಂಬಲಿಸದೇ ಮೋಸ ಮಾಡಿದರೆಂದು ಶರತ್ ವಿರುದ್ದ ಆರೋಪಿಸಿದರು.
ಯಡಿಯೂರಪ್ಪ ನಾಳೆ ದೆಹಲಿಗೆ, ನಾಡಿದ್ದು ಸಂಪುಟ ವಿಸ್ತರಣೆ
ಎಂಟಿಬಿ ನಾಗರಾಜ ಅವರಿಗೆ ಸಚಿವ ಸ್ಥಾನ ನೀಡಬೇಕು, ಎಂಟಿಬಿ ಅವರ ತ್ಯಾಗಕ್ಕೆ ಕೈ ಹಿಡಿಯಬೇಕು ಎಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು. ಜೊತೆಗೆ ಯಾವುದೇ ಕಾರಣಕ್ಕೂ ಶರತ್ ಬಚ್ಚೇಗೌಡ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಆಗ್ರಹಿಸಿದರು.
ಸೋತವರಿಗೆ ಮಂತ್ರಿ ಸ್ಥಾನ ಕೊಡುವುದಿಲ್ಲ ಎಂಬ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಯರಾಜ್, ಎಂಟಿಬಿ ಶಾಸಕ ಸ್ಥಾನದ ಜೊತೆಗೆ ಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿದವರು, ಈಶ್ವರಪ್ಪ ಇಂದು ಮಂತ್ರಿಯಾಗಲು ಕಾರಣವಾದವರಲ್ಲಿ ಎಂಟಿಬಿ ಕೂಡಾ ಒಬ್ಬರು ಎಂಬುದನ್ನು ಮರೆಯಬಾರದು ಎಂದು ತಿರುಗೇಟು ನೀಡಿದರು.
ಬಿಜೆಪಿಗೆ ಸೆಡ್ಡು ಹೊಡೆದು ಹಣ ಬಲವನ್ನು ಮಣಿಸಿದ ಶರತ್ ಬಚ್ಚೇಗೌಡ ಯಾರು?
ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ಹೊಸಕೋಟೆಯ ೫ ಸಾವಿರ ಜನ ಭೇಟಿಯಾಗಿ ಮನವಿ ಮಾಡಿಕೊಳ್ಳುತ್ತೇವೆ, ಕಾಂಗ್ರೆಸ್ ನಿಂದ ಎಂಟಿಬಿ ಅವರ ಅಭಿಮಾನಿಗಳು ಬಿಜೆಪಿಗೆ ಬರಲಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಇರಬೇಕೆಂದು ಕಾರ್ಯಕರ್ತರಿಗೆ ಸಂದೇಶ ನೀಡಿದರು.