ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣ: ಕಾಂಗ್ರೆಸ್ ಸದಸ್ಯೆ ಬಂಧನ
ಬೆಂಗಳೂರು , ಮಾರ್ಚ್ 16: ಮಾರ್ಚ್ 14 ರಂದು ಬೆಳಗ್ಗೆ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಆರ್ ಎಸ್ ಎಸ್, ಬಿಜೆಪಿ ಕಾರ್ಯಕರ್ತ, ಪುರಸಭೆ ಸದಸ್ಯ ಶ್ರೀನಿವಾಸ್ ಪ್ರಸಾದ್ ಅವರ ಹತ್ಯೆಗೆ ಸಂಬಂಧಿಸಿದಂತೆ ಬೊಮ್ಮಸಂದ್ರ ಪುರಸಭೆಯ ಕಾಂಗ್ರೆಸ್ ಸದಸ್ಯೆ ಸರೋಜಮ್ಮ ಎಂಬುವವರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.[ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಬಿಜೆಪಿ ಮುಖಂಡನ ಹತ್ಯೆ]
ಶ್ರೀನಿವಾಸ್ ಮತ್ತು ಸರೋಜಮ್ಮ ನಡುವೆ ಹಲವು ದಿನಗಳಿಂದ ರಾಜಕೀಯ ದ್ವೇಷ ಇತ್ತು ಎನ್ನಲಾಗುತ್ತಿದೆ. ಈ ಹತ್ಯೆಯಲ್ಲಿ ಸರೋಜಮ್ಮ ಅವರ ಪುತ್ರ ಮಂಜು ಕೈವಾಡವಿದೆ ಎಂದೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರಿಗೆ ಸಿಕ್ಕಿಹಾಕಿಕೊಂಡ ಮಧು, ನಾರಾಯಣಸ್ವಾಮಿ, ಮಂಜುನಾಥ್ ಮತ್ತು ಮುರಳೀ ಎಂಬುವವರು ತಾವು ಸರೋಜಮ್ಮನ ಮಗ ಮಂಜುನ ಸ್ನೇಹಿತರು, ಹಣದಾಸೆಗಾಗಿ ಈ ಕೆಲಸ ಮಾಡಿದ್ದೇವೆಂದು ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.[ಬಿಜೆಪಿ ಮುಖಂಡನ ಹತ್ಯೆ: ತನಿಖೆಗೆ ತಂಡ ರಚನೆ]
ಬೊಮ್ಮಸಂದ್ರ ಪುರಸಭೆಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸರೋಜಮ್ಮಗೆ ಶ್ರೀನಿವಾಸ್ ಪ್ರಸಾದ್ ಪ್ರಬಲ ಪ್ರತಿಸ್ಪರ್ಧಿಯಾಗಿದ್ದರು. ಅದೂ ಅಲ್ಲದೆ ಇಬ್ಬರ ನಡುವೆ ನಡೆದಿದ್ದ ಕಾನೂನು ಹೋರಾಟವೊಂದರಲ್ಲೂ ಶ್ರೀನಿವಾಸ್ ಪ್ರಸಾದ್ ಗೆದ್ದಿದ್ದರು. ಕೊಲೆಗೆ ಈ ಎಲ್ಲವೂ ಕಾರಣವಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರಾದರೂ ಮತ್ತಷ್ಟು ತನಿಖೆ ನಡೆದ ನಂತರವಷ್ಟೇ ಸತ್ಯ ಹೊರಬೀಳಲಿದೆ.