ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆ
ಬೆಂಗಳೂರು, ಫೆಬ್ರವರಿ 01 : ಜೆಸಿ ನಗರದ ಚಿನ್ನಪ್ಪ ಗಾರ್ಡನ್ ಬಳಿ ಬಿಜೆಪಿ ಕಾರ್ಯಕರ್ತ ಸಂತೋಷ್(28) ಎಂಬುವವರನ್ನು ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಬುಧವಾರ ನಡೆದಿದೆ. ಈ ಸಂಬಂಧ ಕಾಂಗ್ರೆಸ್ ನ ಜೆಸಿ ನಗರ ಬ್ಲಾಕ್ ಅಧ್ಯಕ್ಷ ಖಾದರ್ ಅವರ ಮಗ ವಾಸೀಂ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಚಿನ್ನಪ್ಪ ಗಾರ್ಡ್ ನ್ ನಿವಾಸಿ ಸಂತೋಷ್ ಸಂಜೆ 6 ಗಂಟೆ ಸುಮಾರಿಗೆ ಸ್ಥಳೀಯ ಬೇಕರಿಯೊಂದರ ಬಳಿ ನಿಂತುಕೊಂಡಿದ್ದರು. ಅಲ್ಲಿಗೆ ಬಂದಿದ್ದ ವಾಸಿಂ, ಫಿಲಿಪ್ಸ್, ಇರ್ಫಾನ್ ಹಾಗೂ ಉಮ್ಮರ್ ಅವರ ಜತೆ ಜಗಳ ತೆಗೆದು ಮಾರಕಾಸ್ತ್ರಗಳಿಂದ ಹೊಡೆದಿದ್ದರು.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತೋಷ್ ಅವರನ್ನು ಸ್ಥಳೀಯರು ಜೈನ್ ಆಸ್ಪತ್ರೆಗೆ ಕರೆದೊಯ್ದರು. ತಪಾಸಣೆ ನಡೆಸಿದ ವೈದ್ಯರು, ಮಾರ್ಗಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ತಿಳಿಸಿದರು.
ಕೊಲೆ ಸಂಬಂಧ ವಾಸಿಂ ಹಾಗೂ ಫಿಲಿಪ್ಸ್ನನ್ನು ಬಂಧಿಸಿದ್ದೇವೆ. ಇರ್ಫಾನ್ ಹಾಗೂ ಉಮ್ಮರ್ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ವಿಶೇಷ ತಂಡ ರಚಿಸಿದ್ದೇವೆ ಎಂದು ಡಿಸಿಪಿ ಚೇತನ್ಸಿಂಗ್ ರಾಥೋಡ್ ತಿಳಿಸಿದರು.
ಈ ಹಿಂದೆ ಆರೋಪಿ ವಸೀಂ, ಉಮರ್, ಮತ್ತು ಫಿಲಿಪ್ಸ್ ಎಂಬುವವರಿಗೆ ಸಂತೋಷ್ ಕರೆದು ಅವಾಜ್ ಹಾಕಿದ್ದು, ನಮ್ ಏರಿಯಾದಲ್ಲಿ ಗಾಂಜಾ ಸೇದಬೇಡಿ ಅಂತ ಜೋರು ಮಾಡಿದ್ದರು ಎಂಬ ಮಾಹಿತಿಗಳು ಲಭ್ಯವಾಗಿವೆ.
ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಹೀಗಾಗಿ ಕೊಲೆ ನಡೆದಿರಬಹುದೆಂದು ಜೆ.ಸಿ ನಗರ ಪೊಲೀಸರು ಶಂಕಿಸಿದ್ದಾರೆ. ಜತೆಗೆ ಬಿಜೆಪಿಯಿಂದ ಕಾಂಗ್ರೆಸ್ ಗೆ ಬರುವಂತೆ ಆರೋಪಿ ವಾಸಿಂ ಒತ್ತಾಯಿಸಿದ್ದ ಎನ್ನಲಾಗಿದೆ.
ಮೃತನ ಸಂಬಂಧಿಕರು ಹಾಗೂ ಸ್ಥಳೀಯರು, ಜೆ.ಸಿ.ನಗರ ಠಾಣೆ ಎದುರು ಬುಧವಾರ ರಾತ್ರಿ ಸೇರಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಮುಖಂಡನ ಮಗನೆಂಬ ಕಾರಣಕ್ಕೆ ವಾಸೀಂ, ಹಲವು ಕ್ರಿಮಿನಲ್ ಚಟುವಟಿಕೆ ನಡೆಸುತ್ತಿದ್ದಾನೆ. ಯುವಕರ ತಂಡ ಕಟ್ಟಿಕೊಂಡು ಗಾಂಜಾ ಮಾರಾಟ ಮಾಡಿಸುತ್ತಿದ್ದಾನೆ. ಈತನ ಹಾವಳಿಯಿಂದ ಚಿನ್ನಪ್ಪ ಗಾರ್ಡನ್ ನಿವಾಸಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದರು.
ಸಂತೋಷ್ ಭಾವ ಶಿವು, ಕೊಲೆ ಪ್ರಕರಣದಲ್ಲಿ ವಾಸೀಂ ಹಾಗೂ ಆತನ ಸಹಚರರಿಗೆ ಕಠಿಣ ಶಿಕ್ಷೆಯಾಗಬೇಕು. ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.