ಫೋನ್ ಟ್ಯಾಪಿಂಗ್ ಪ್ರಕರಣ ಬಿಜೆಪಿಗೆ ಸಿಕ್ಕ ಬ್ರಹ್ಮಾಸ್ತ್ರ!
Recommended Video
ಬೆಂಗಳೂರು, ಆಗಸ್ಟ್ 19: ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಟ್ಯಾಪಿಂಗ್ ಪ್ರಕರಣ ಬಿಜೆಪಿಗೆ ಮುಂದಿನ ದಿನಗಳಲ್ಲಿ ಬ್ರಹ್ಮಾಸ್ತ್ರವಾಗುವ ಎಲ್ಲ ಲಕ್ಷಣಗಳು ಕಂಡು ಬರತೊಡಗಿದೆ.
ಫೋನ್ ಕದ್ದಾಲಿಕೆ : ಸಿಬಿಐ ತನಿಖೆ ಬಗ್ಗೆ ಅನುಮಾನವಿದೆ!
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣ ಭಾರೀ ಚರ್ಚೆಗೆ, ಆರೋಪ, ಪ್ರತ್ಯಾರೋಪಗಳಿಗೆ ದಾರಿ ಮಾಡಿಕೊಟ್ಟಿತ್ತು. ನೇರವಾಗಿ ಈ ಆರೋಪ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನೇ ಚುಚ್ಚಿದ್ದರೂ ಅವರು ಅದಕ್ಕೆ ಸ್ಪಷ್ಟ ಮಾಹಿತಿ ನೀಡದೆ ನುಣುಚಿಕೊಳ್ಳತೊಡಗಿದ್ದರು. ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರಂತೂ ಕೆಂಡಾಮಂಡಲರಾಗಿ ಬಿಟ್ಟರು.
ಸಿಬಿಐ ತನಿಖೆಗೆ ಆಗ್ರಹ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಪ್ರಕರಣದ ವಿಷಯದಲ್ಲಿ ಮೆದುಧೋರಣೆ ತೋರುತ್ತಿದ್ದಾರೆ ಎಂಬ ಆರೋಪವೂ ಇತ್ತು. ಆದರೆ ಬಿಜೆಪಿಯ ಹಲವು ನಾಯಕರಂತು ಯುದ್ಧೋನ್ಮಾನದಲ್ಲಿದ್ದರು. ತನಿಖೆ ಆಗಲೇಬೇಕು, ಅದು ಸಿಬಿಐ ತನಿಖೆಯೇ ಆಗಬೇಕೆಂದು ಆಗ್ರಹಿಸಿದ್ದರು.
ಇನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು, "ಹಾಗೇನಾದರು ನಡೆದಿದ್ದರೆ ಅದು ತನಿಖೆಯಾಗಲಿ, ನಮ್ಮ ಅಭ್ಯಂತರವೇನಿಲ್ಲ" ಎಂಬ ಸಮಾಧಾನದ ಉತ್ತರ ನೀಡಿದ್ದರು. ಆದರೆ ಒಳಗೊಳಗೆ ಬೆಂಬಲ ನೀಡಿದ ನಮ್ಮ ನಾಯಕರ ಫೋನನ್ನೇ ಕದ್ದು ಆಲಿಸಿರುವುದನ್ನು ಅರಗಿಸಿಕೊಳ್ಳಲು ಈಗಲೂ ಬಹಳಷ್ಟು ಕಾಂಗ್ರೆಸ್ನ ನಾಯಕರಿಗೆ ಸಾಧ್ಯವಾಗುತ್ತಿಲ್ಲ.
ಮೈತ್ರಿಯಿಂದ ಆಡಳಿತ ಚುಕ್ಕಾಣಿ ಹಿಡಿದ ಜೆಡಿಎಸ್
ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷವೂ ಮ್ಯಾಜಿಕ್ ಸಂಖ್ಯೆ ಪಡೆಯದೆ ಸರ್ಕಾರ ರಚನೆಗೆ ಸರ್ಕಸ್ ಮಾಡುತ್ತಿದ್ದಾಗ ಬಿಜೆಪಿಗೆ ಅಧಿಕಾರ ನೀಡಬಾರದು ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ಗೆ ಮಣೆ ಹಾಕಿತ್ತು. ಇದು ಸ್ಥಳೀಯ ಕಾಂಗ್ರೆಸ್ನ ಹೆಚ್ಚಿನ ನಾಯಕರಿಗೆ ಇಷ್ಟವಿರಲಿಲ್ಲ. ಏಕೆಂದರೆ ಕುಮಾರಸ್ವಾಮಿ ಅವರು ಜೆಡಿಎಸ್ ನ ಬೆಂಬಲ ಪಡೆದು ಸರ್ಕಾರ ರಚಿಸಿ ಧರಂಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಅವರಿಗೆ ಕೈಕೊಟ್ಟು ಬಿಜೆಪಿಯ ಸಖ್ಯ ಬೆಳೆಸಿದ ನಿದರ್ಶನವೂ ಇತ್ತು. ಜತೆಗೆ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರು ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗುವುದನ್ನು ಒಪ್ಪುವುದಿಲ್ಲ ಎಂಬುದು ಕೂಡ ಗೊತ್ತಿತ್ತು. ಆದರೆ ಅದೆಲ್ಲವನ್ನು ಗಾಳಿಗೆ ತೂರಿ ಕುರ್ಚಿಗಾಗಿ ಮೈತ್ರಿ ಮಾಡಿಕೊಂಡು ಆಡಳಿತ ಚುಕ್ಕಾಣಿ ಹಿಡಿದಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಲು ಹಸಿರು ನಿಶಾನೆ ತೋರಲಾಗಿತ್ತು. ಇದು ಸದ್ದಿಲ್ಲದೆ ಕಾಂಗ್ರೆಸ್ ನಾಯಕರಲ್ಲಿ ಅತೃಪ್ತಿಯ ಕಿಡಿ ಹತ್ತಿಸಿತ್ತು. ಆ ಒಂದು ಅತೃಪ್ತಿ ಮೇಲ್ನೋಟಕ್ಕೆ ಬೂದಿ ಮುಚ್ಚಿದ ಕೆಂಡದಂತೆ ಇತ್ತಾದರೂ ಅದಕ್ಕೆ ತುಪ್ಪಸುರಿದು ದಿಗ್ಗನೆ ಉರಿಯುವಂತೆ ಮಾಡಿದ್ದು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಟ್ರಂಪ್ ಮಾರ್ಗದರ್ಶನವೂ ಪಡೆಯಲಿ: ಎಚ್ ಡಿ ಕುಮಾರಸ್ವಾಮಿ
ಸರ್ಕಾರ ಗಟ್ಟಿ ಮಾಡಿಕೊಳ್ಳಲು ಫೋನ್ ಕದ್ದಾಲಿಕೆ ಮೊರೆ?
ಜೆಡಿಎಸ್ ನ ಸಖ್ಯ ಮಾಡಿದ ಕಾರಣಕ್ಕೆ ಗೆಲ್ಲುವ ಕ್ಷೇತ್ರದಲ್ಲಿಯೇ ಕಾಂಗ್ರೆಸ್ ಮಕಾಡೆ ಮಲಗುವಂತಾಯಿತು. ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಬಂದು ಜೆಡಿಎಸ್ ಮತ್ತು ಕಾಂಗ್ರೆಸ್ ಎರಡು ನೆಲಕಚ್ಚಿದ್ದನ್ನು ಕಂಡ ಬಳಿಕ ಕಾಂಗ್ರೆಸ್ನ ಹೆಚ್ಚಿನ ಶಾಸಕರಿಗೆ ಇನ್ನೂ ಹೀಗೆಯೇ ಜೆಡಿಎಸ್ ನೊಂದಿಗೆ ಮುಂದುವರೆದರೆ ಭವಿಷ್ಯ ಇಲ್ಲವಾಗುತ್ತದೆ ಎಂಬ ಸತ್ಯದ ಅರಿವಾಗಿತ್ತು.
ಹಾಗಾಗಿ ಭಿನ್ನಮತೀಯ ಚಟುವಟಿಕೆಗೆ ಇನ್ನಷ್ಟು ವೇಗ ಕೊಡಲು ಆರಂಭಿಸಿದ್ದರು. ಆದರೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಇದೆಲ್ಲವನ್ನು ಮೊದಲೇ ಗ್ರಹಿಸಿದ್ದರು. ತನ್ನ ಸರ್ಕಾರ ಗಟ್ಟಿ ಮಾಡಿಕೊಳ್ಳಬೇಕಾದರೆ ಯಾವ ನಾಯಕರು ಏನು ಮಾಡುತ್ತಿದ್ದಾರೆ? ನಿಜವಾದ ಅವರ ನಿಲುವೇನು ಎಂಬುದನ್ನು ತಿಳಿದುಕೊಳ್ಳಲು ಫೋನ್ ಕದ್ದಾಲಿಕೆಗೆ ಮೊರೆ ಹೋದರು ಎನ್ನಲಾಗುತ್ತಿದೆ. ಆದರೆ ಮುಂದೊಂದು ದಿನ ತನಗೆ ಸಂಕಷ್ಟ ತಂದೊಡ್ಡಬಹುದು ಎಂಬುದು ಅವರಿಗೆ ಗೊತ್ತೇ ಆಗಿರಲಿಲ್ಲ. ಹೀಗಾಗಿಯೇ ಅವರು ತಮ್ಮ ಪಕ್ಷದ ರಾಜ್ಯಾಧ್ಯಕ್ಷರಿಂದ ಆರಂಭವಾಗಿ ಕಾಂಗ್ರೆಸ್ ನಾಯಕ ಮಾಜಿ ಸಚಿವ ಸಿದ್ದರಾಮಯ್ಯ, ಹಾಗೂ ರೆಬಲ್ ಶಾಸಕರ ಫೋನ್ ಕರೆಗಳ ಮೇಲೆ ನಿಗಾವಹಿಸಲಾರಂಭಿಸಿದರು. ಜತೆಗೆ ರೆಬಲ್ ನಾಯಕರನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಿದರು ಆದರೆ ಅದ್ಯಾವುದೂ ಸಾಧ್ಯವಾಗಲಿಲ್ಲ.
ಮಗ ವಿಜಯೇಂದ್ರ ಮೂಲಕ ಯಡಿಯೂರಪ್ಪ ವರ್ಗಾವಣೆ ದಂಧೆ: ಎಚ್ ಡಿಕೆ
ಆರೋಪ ಸಾಬೀತಾದರೆ ರಾಜಕೀಯಕ್ಕೆ ಬಳಕೆ
ಈಗಾಗಲೇ ಜೆಡಿಎಸ್ ಸಹವಾಸ ಮಾಡಿದ ತಪ್ಪಿಗೆ ಕಾಂಗ್ರೆಸ್ ಭಾರೀ ಬೆಲೆಯನ್ನೇ ತೆತ್ತಿದೆ. ಸುಮಾರು ಹದಿನೈದಕ್ಕೂ ಹೆಚ್ಚು ಶಾಸಕರನ್ನು ಕಳೆದುಕೊಳ್ಳುವಂತಾಗಿದೆ. ಮುಂದೆ ಸುಮಾರು ಹದಿನೆಂಟು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, ಆ ಚುನಾವಣೆಗೆ ಒಂದು ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿ ಹೋದರೆ ಇನ್ನಷ್ಟು ಹೊಡೆತ ಬೀಳಲಿದೆ ಎಂಬುದು ಮನದಟ್ಟಾಗಿರುವ ಹಿನ್ನೆಲೆಯಲ್ಲಿ ಎರಡು ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆ ಎದುರಿಸಿ ರೆಬಲ್ ಶಾಸಕರಿಗೆ ಟಾಂಗ್ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಅಷ್ಟರೊಳಗೆ ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆ ನಡೆದು ನಿಜಾಂಶ ಹೊರಬಂದು ಈಗ ಕೇಳಿ ಬಂದಿರುವ ಆರೋಪಗಳು ಸಾಬೀತಾದರೆ ಅದನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುವುದಂತು ಸತ್ಯ.
ಆದರೆ ಕಾಂಗ್ರೆಸ್ನ ಪರಿಸ್ಥಿತಿ ಮಾತ್ರ ಅಯೋಮಯವಾಗಿದೆ. ಅತ್ತ ಕೇಂದ್ರದಲ್ಲಿಯೂ ಹೈಕಮಾಂಡ್ ಗಟ್ಟಿಯಾಗಿಲ್ಲ. ಇತ್ತ ರಾಜ್ಯ ನಾಯಕರಲ್ಲಿ ಒಗ್ಗಟ್ಟು ಅಷ್ಟಕಷ್ಟೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಈ ದೌರ್ಬಲ್ಯಗಳನ್ನು ಬಳಸಿಕೊಂಡು ಬಿಜೆಪಿ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರಲು ಪ್ರಯತ್ನಿಸುತ್ತಿರುವುದಂತು ಸತ್ಯ.