ಬಂಡಾಯವೆದ್ದ ಶರತ್ ಬಚ್ಚೇಗೌಡ ಉಚ್ಚಾಟನೆಗೆ ಬಿಜೆಪಿ ಸಜ್ಜು
ಬೆಂಗಳೂರು, ನವೆಂಬರ್ 18: ಹೊಸಕೋಟೆ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ತಮ್ಮ ವಿರೋಧಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಂಸದ ಬಿಎನ್ ಬಚ್ಚೇಗೌಡ ಅವರ ಮಗ ಮತ್ತು ಪಕ್ಷದ ಸದಸ್ಯ ಶರತ್ ಬಚ್ಚೇಗೌಡ ಅವರನ್ನು ಬಿಜೆಪಿ ಉಚ್ಚಾಟಿಸಲು ಮುಂದಾಗಿದೆ.
ಪಕ್ಷದ ಹಿರಿಯ ನಾಯಕರ ಮನವೊಲಿಕೆ ಪ್ರಯತ್ನಕ್ಕೆ ಕಿವಿಗೊಡದ ಶರತ್ ಬಚ್ಚೇಗೌಡ, ಪಕ್ಷದ ವಿರುದ್ಧ ಬಂಡಾವೆದ್ದಿದ್ದರು. ತಮ್ಮ ರಾಜಕೀಯ ವಿರೋಧಿಯನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುತ್ತಿರುವ ನಾಯಕತ್ವದ ವಿರುದ್ಧ ಕಿಡಿಕಾರಿದ್ದರು. ಎಂಟಿಬಿ ನಾಗರಾಜ್ ಅವರ ಬಿಜೆಪಿ ಸೇರ್ಪಡೆಗೆ ಈ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸಿಕೊಂಡು ಬಂದಿದ್ದ ಅವರು, ಎಂಟಿಬಿ ಪಕ್ಷ ಸೇರಿಕೊಳ್ಳುತ್ತಿದ್ದಂತೆಯೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಶರತ್ ಬಚ್ಚೇಗೌಡ ಅವರಿಗೆ ಉಪ ಚುನಾವಣೆಯಲ್ಲಿ ಜೆಡಿಎಸ್ ನೇರ ಬೆಂಬಲ ಘೋಷಿಸಿದೆ.
ಬಿಜೆಪಿ ವಿರುದ್ಧ ಸಿಡಿದೆದ್ದು ನಿಂತ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆಸ್ತಿ 138 ಕೋಟಿ ರೂ.
ಈ ನಡುವೆ ಪಕ್ಷದ ಸೂಚನೆಗಳನ್ನು ಮೀರಿ ನಡೆದಿರುವುದಕ್ಕೆ ಶರತ್ ಬಚ್ಚೇಗೌಡ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಬಿಜೆಪಿ ಮುಂದಾಗಿದೆ.
ನಾಮಪತ್ರ ಹಿಂಪಡೆಯದಿದ್ದರೆ ಶಿಸ್ತುಕ್ರಮ
ಭಾನುವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಹೊಸಕೋಟೆಯಲ್ಲಿ ನಾಮಪತ್ರ ಸಲ್ಲಿಸಬಾರದು ಎಂದು ಪಕ್ಷ ಸೂಚನೆ ನೀಡಿತ್ತು. ಆದರೂ ಪಕ್ಷದ ಶಿಸ್ತು ಉಲ್ಲಂಘಿಸಿ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ಸೋಮವಾರ ಸಂಜೆಯೊಳಗೆ ನಾಮಪತ್ರವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಸಂಜೆಯೇ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಎಂಟಿಬಿಯಂತಹ ಪ್ರಾಮಾಣಿಕರಿಲ್ಲ
ಶರತ್ ಬಚ್ಚೇಗೌಡ ಅವರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು. ರಾಜೀನಾಮೆ ನೀಡಿದ 17 ಶಾಸಕರಲ್ಲಿ ಎಂಟಿಬಿ ನಾಗರಾಜ್ ಪ್ರಮುಖರಾಗಿದ್ದರು. ಅವರಂತಹ ಪ್ರಾಮಾಣಿಕ ವ್ಯಕ್ತಿ ಮತ್ತೊಬ್ಬರಿಲ್ಲ. ಅವರ ವಿರುದ್ಧ ಕಾಂಗ್ರೆಸ್ನವರು ಏನೇನೋ ಆರೋಪಗಳನ್ನು ಮಾಡುತ್ತಾರೆ. ಅವರಂತಹ ಪ್ರಾಮಾಣಿಕ ವ್ಯಕ್ತಿಯನ್ನು ಜನರು ಬೆಂಬಲಿಸುತ್ತಾರೆ ಎಂದು ಹೇಳಿದರು.
ಹೊಸಕೋಟೆಯಲ್ಲಿ ಜೆಡಿಎಸ್ ಸ್ಪರ್ಧೆ: ಕುಮಾರಸ್ವಾಮಿ ಅಚ್ಚರಿಯ ನಿರ್ಧಾರ
ಮಂಕುಬೂದಿ ಎರಚಿದ್ದಾರೆ
ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ಅವರಿಗೆ ಬೆಂಬಲ ನೀಡಲಿದ್ದೇವೆ. ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಗೆಲ್ಲುವುದರಲ್ಲಿ ಯಾವ ಅನುಮಾನವೂ ಇಲ್ಲ. ಶರತ್ ಬಚ್ಚೇಗೌಡ ಅವರಿಗೆ ಯಾರು ಮಂಕುಬೂದಿ ಎರಚಿದ್ದಾರೋ ಗೊತ್ತಿಲ್ಲ. ಪಕ್ಷದ ಆದೇಶವನ್ನು ಧಿಕ್ಕರಿಸಿ ಸ್ಪರ್ಧೆ ಮಾಡುವುದಾದರೆ ಶಿಸ್ತು ಕ್ರಮ ಎದುರಿಸುವುದು ಅನಿವಾರ್ಯ ಎಂದರು.
ಸಂಜೆವರೆಗೆ ಕಾಯುತ್ತೇವೆ
ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಇದು ಕೊನೆಯ ಅವಕಾಶ. ಅವರು ಸೋಮವಾರ ನಾಮಪತ್ರ ವಾಪಸ್ ಪಡೆಯಬೇಕು. ಅದಕ್ಕಾಗಿ ಪಕ್ಷ ಕಾಯುತ್ತದೆ. ಮನವೊಲಿಕೆ ಪ್ರಯತ್ನಕ್ಕೆ ಅವರು ಬಗ್ಗದಿದ್ದರೆ ಪಕ್ಷದಿಂದ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ಕೆಎಸ್ ಈಶ್ವರಪ್ಪ ಹೇಳಿದರು.
ಉಪಚುನಾವಣೆಗೆ ಮುನ್ನ ಬಚ್ಚೇಗೌಡ್ರ ವಿರುದ್ದ ಎಂಟಿಬಿ ನಾಗರಾಜ್ ಸ್ಪೋಟಕ ಆರೋಪ
ಮಂತ್ರಿ ಮಾಡುವುದರಲ್ಲಿ ತಪ್ಪೇನಿದೆ
ಅನರ್ಹ ಶಾಸಕರನ್ನು ಮಂತ್ರಿ ಮಾಡುತ್ತೇವೆ ಎಂಬ ತಮ್ಮ ಹೇಳಿಕೆ ವಿರುದ್ಧ ಕಾಂಗ್ರೆಸ್ ದೂರು ನೀಡಿರುವುದಕ್ಕೆ ಕಿಡಿಕಾರಿದ ಯಡಿಯೂರಪ್ಪ, ಸಿದ್ದರಾಮಯ್ಯ ಮತ್ತು ಅವರ ಟೀಮ್ಗೆ ಮಾಡಲು ಕೆಲಸ ಇಲ್ಲ. ಪ್ರತಿದಿನಿ ಚುನಾವಣಾ ಆಯೋಗಕ್ಕೆ ದೂರು ನೀಡುವುದೇ ಅವರ ಕೆಲಸ. ಕಾಂಗ್ರೆಸ್ ನಾಯಕರು ನೀಡಿರುವ ದೂರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ನಮ್ಮ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರೆ ಮಂತ್ರಿ ಮಾಡುತ್ತೇವೆ ಎಂದು ಹೇಳುವುದರಲ್ಲಿ ತಪ್ಪೇನಿದೆ? ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಮತ್ತು ನೂರಕ್ಕೆ ನೂರರಷ್ಟು ಅವರನ್ನು ಸಚಿವರನ್ನಾಗಿ ಮಾಡುತ್ತೇವೆ. ಅದಕ್ಕೆ ಚುನಾವಣಾ ಆಯೋಗ ಅಡ್ಡಿಪಡಿಸುವುದಿಲ್ಲ ಎಂದರು.