ತನ್ನ ಬಿಟ್ಟು ಮಹೇಶ್ ಕುಮಟಳ್ಳಿಗೆ ಟಿಕೆಟ್: ಲಕ್ಷ್ಮಣ ಸವದಿ ಏನಂದ್ರು?
ಬೆಂಗಳೂರು, ನವೆಂಬರ್ 15: ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರವಿಲ್ಲ ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿರುವ ಅವರು ನನ್ನ ಮುಂದಿನ ರಾಜಕೀಯ ಭವಿಷ್ಯವನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ನಾನು ಅಭ್ಯರ್ಥಿಗಳ ಪರ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದರು.
ತಮ್ಮನ್ನು ಸೋಲಿಸಿದವರನ್ನೇ ಗೆಲ್ಲಿಸಬೇಕಾದ ಹೊಣೆ: ಡಿಸಿಎಂ ಲಕ್ಷ್ಮಣ ಸವದಿ ಅತಂತ್ರ
ಕಡಿಮೆ ಅಂತರದಲ್ಲಿ ಸೋತಿದ್ದರಿಂದ ಟಿಕೆಟ್ ಕೇಳಿದ್ದೆ. ಹಾಗೆಂದ ಮಾತ್ರಕ್ಕೆ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಬಾರದೆಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದರು.
ನಾನು ಅಥಣಿಯಿಂದ ಉಪಚುನಾವಣೆಯಲ್ಲಿ ಆಕಾಂಕ್ಷಿಯಾಗಿದ್ದು ನಿಜ. ನನಗೆ ಟಿಕೆಟ್ ನೀಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿದ್ದೆ. ಅಂತಿಮವಾಗಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಲಾಗಿದೆ. ನನ್ನ ವೈಯಕ್ತಿಕ ಹಿತಾಸಕ್ತಿ ಏನೇ ಇರಲಿ ಪಕ್ಷದ ಗೆಲುವು ಮುಖ್ಯ ಎಂದು ತಿಳಿಸಿದರು.
ಮುನಿಸನ್ನು ಮರೆದು ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಸವದಿ ಹೇಳಿದ್ದಾರೆ. ಒಂದು ಬಾರಿ ಕ್ಷೇತ್ರ ಕೈತಪ್ಪಿ ಹೋದರೆ ಅದನ್ನು ಮರಳಿ ಪಡೆಯುವುದು ಭಾರೀ ಸಾಹಸದ ಕೆಲಸವೇ ಸರಿ.
ನನ್ನ ರಾಜಕೀಯ ಒಲವು, ನಿಲುವು ಏನೇ ಇರಲಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ವರಿಷ್ಠರು ಕೊಟ್ಟಿರುವ ಸೂಚನೆಯನ್ನು ಚಾಚುತಪ್ಪದೇ ಪಾಲನೆ ಮಾಡುತ್ತೇನೆ ಎಂದು ತಿಳಿಸಿದರು.