ರೋಷನ್ ಬೇಗ್ಗೆ ಮತ್ತೊಂದು ಆಘಾತ: ಶಿವಾಜಿನಗರದಲ್ಲಿ ಶರವಣಗೆ ಟಿಕೆಟ್
ಬೆಂಗಳೂರು, ನವೆಂಬರ್ 14: ಕಾಂಗ್ರೆಸ್ನಲ್ಲಿ ಬಂಡಾಯವೆದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿ ಸೇರ್ಪಡೆಗೆ ಸಿದ್ಧತೆ ನಡೆಸಿದ್ದ ರೋಷನ್ ಬೇಗ್ ಅವರಿಗೆ ಬಿಜೆಪಿ ಆಘಾತ ನೀಡಿದೆ.
ಬಿಜೆಪಿ ಸೇರ್ಪಡೆಗೊಂಡು ಶಿವಾಜಿನಗರದ ಅಭ್ಯರ್ಥಿಯಾಗಿ ಟಿಕೆಟ್ ಪಡೆಯುವ ಬಯಕೆ ಹೊಂದಿದ್ದ ರೋಷನ್ ಬೇಗ್ ಅವರಿಗೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿಲ್ಲ. ಬದಲಾಗಿ ಬಿಬಿಎಂಪಿಯ ಮಾಜಿ ಕಾರ್ಪೊರೇಟ್ ಎಂ. ಶರವಣ ಅವರಿಗೆ ಟಿಕೆಟ್ ನೀಡಿದೆ.
ಶಿವಾಜಿನಗರದ ರೋಷನ್ ಬೇಗ್ ಏಕೆ ಬಿಜೆಪಿ ಸೇರುತ್ತಿಲ್ಲ?
ಹಲಸೂರು ಪಾಲಿಕೆ ಸದಸ್ಯೆ ಮಮತಾ ಅವರ ಪತಿ ಶರವರಣ ಗುರುವಾರ ಬೆಳಿಗ್ಗೆಯಷ್ಟೇ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದರು. ಬಿಜೆಪಿ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಶಿವಾಜಿನಗರ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಣೆ ಮಾಡಿರಲಿಲ್ಲ. ಕೆಲವೇ ಗಂಟೆಗಳಲ್ಲಿ ಎರಡನೆಯ ಪಟ್ಟಿ ಬಿಡುಗಡೆ ಮಾಡಿದ್ದು ಅದರಲ್ಲಿ ಶಿವಾಜಿನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಂ. ಶರವಣ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಬಿಜೆಪಿ ಹೈಕಮಾಂಡ್ ಶರವಣ ಹೆಸರನ್ನು ಅಂತಿಮಗೊಳಿಸಿದೆ.
ರೋಷನ್ಬೇಗ್ಗೆ ಆಘಾತ
ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ಪ್ರಮುಖರ ವಿರುದ್ಧ ನಿರಂತರ ವಾಗ್ದಾಳಿಗಳನ್ನು ನಡೆಸಿದ್ದ ಶಿವಾಜಿನಗರದ ಅನರ್ಹ ಶಾಸಕ ರೋಷನ್ ಬೇಗ್, ಬಿಜೆಪಿಯಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಸುಪ್ರೀಂಕೋರ್ಟ್ ಅನರ್ಹ ಶಾಸಕರ ಕುರಿತಾದ ಪ್ರಕರಣದ ತೀರ್ಪು ನೀಡಿದ ಬೆನ್ನಲ್ಲೇ ರೋಷನ್ ಬೇಗ್ ಅವರಿಗೆ ಮೊದಲ ಆಘಾತ ನೀಡಿತ್ತು. ಗುರುವಾರ ಮತ್ತೊಂದು ಆಘಾತ ನೀಡಿದೆ.
ಬಿಜೆಪಿ ಸೇರ್ಪಡೆ ಇಲ್ಲ
ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾದ ಬಳಿಕ ಬಿಜೆಪಿ ಅನರ್ಹ ಶಾಸಕರು ಕಮಲ ಪಾಳೆಯವನ್ನು ಸೇರಿಕೊಳ್ಳಲಿದ್ದಾರೆ ಎಂದು ಪಟ್ಟಿ ತಿಳಿಸಿತ್ತು. ಇದರಲ್ಲಿ 17 ಅನರ್ಹ ಶಾಸಕರ ಪೈಕಿ 16 ಶಾಸಕರ ಹೆಸರು ಇತ್ತು. ಶಿವಾಜಿನಗರದ ಅನರ್ಹ ಶಾಸಕ ರೋಷನ್ ಬೇಗ್ ಹೆಸರು ಇರಲಿಲ್ಲ. ಹೀಗಾಗಿ ಗುರುವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ರೋಷನ್ ಬೇಗ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಅನರ್ಹ ಶಾಸಕರೂ ಬಿಜೆಪಿ ಸೇರ್ಪಡೆಯಾಗಿದ್ದರು. ಎಂ. ಶರವಣ ಕೂಡ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದರು.
17 ಅನರ್ಹ ಶಾಸಕರಲ್ಲಿ ಒಬ್ಬರಿಗೆ ಮಾತ್ರ ಬಿಜೆಪಿ ಬಾಗಿಲು ಬಂದ್: ಆಗ ಅನರ್ಹ, ಈಗ ಅತಂತ್ರ!
ಟಿಕೆಟ್ ಕೂಡ ಇಲ್ಲ
ರೋಷನ್ ಬೇಗ್ ಅವರನ್ನು ಬಳಿಕ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ನಿರೀಕ್ಷೆ ಕೂಡ ಹುಸಿಯಾಗಿದೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ಅನುಮತಿ ನೀಡಿದ್ದರೂ ಅವರಿಗೆ ಅವಕಾಶ ಸಿಕ್ಕಿಲ್ಲ. ಅತ್ತ ಬಿಜೆಪಿ ಸದಸ್ಯತ್ವವೂ ಸಿಗದೆ, ಇತ್ತ ಟಿಕೆಟ್ ಕೂಡ ಇಲ್ಲದೆ ರೋಷನ್ ಬೇಗ್ ಅತಂತ್ರರಾಗಿದ್ದಾರೆ. ಡಿ.5ರಂದು ಉಪ ಚುನಾವಣೆ ನಡೆಯಲಿದ್ದು, ನ.18 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಈಗ ಬಿಜೆಪಿಯಿಂದ ಟಿಕೆಟ್ ದೊರಕದ ಕಾರಣ ರೋಷನ್ ಬೇಗ್ ಮುಂದಿನ ನಡೆ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಐಎಂಎ ಹಗರಣ ಕಾರಣ?
ರೋಷನ್ ಬೇಗ್ ಅವರ ಹೆಸರು ಬಹುಕೋಟಿ ಐಎಂಎ ಹಗರಣದಲ್ಲಿ ಕೇಳಿಬಂದಿತ್ತು. ಅವರನ್ನು ಎಸ್ಐಟಿ ವಿಚಾರಣೆಗೂ ಒಳಪಡಿಸಿತ್ತು. ಈಗ ರಾಜ್ಯ ಬಿಜೆಪಿ ಸರ್ಕಾರ ಆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದೆ. ಗಂಭೀರ ಆರೋಪ ಹೊತ್ತಿರುವ ರೋಷನ್ ಬೇಗ್ ಅವರನ್ನು ಉಪ ಚುನಾವಣೆಯ ಹೊಸ್ತಿಲಲ್ಲಿ ಪಕ್ಷಕ್ಕೆ ಸೇರಿಸಿಕೊಂಡರೆ ಅದು ಹಿನ್ನಡೆಯುಂಟುಮಾಡಬಹುದು ಎಂಬ ಕಾರಣಕ್ಕೆ ಹೈಕಮಾಂಡ್ ಅವರ ಸೇರ್ಪಡೆಗೆ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ