ಬೆಂಗಳೂರು: ಗಲಭೆ ಪೀಡಿತ ಪ್ರದೇಶಕ್ಕೆ ಭಾನುವಾರ ಬಿಜೆಪಿ ತಂಡ ಭೇಟಿ
ಬೆಂಗಳೂರು, ಆಗಸ್ಟ್ 15: ಕಳೆದ ಮಂಗಳವಾರ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರದೇಶಗಳಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸಲಿದೆ. ಅಲ್ಲಿ ಸಂಗ್ರಹಿಸಿದ ಮಾಹಿತಿಗಳ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಿದೆ.
ಅರವಿಂದ್ ಲಿಂಬಾವಳಿ, ಮಾಲೀಕಯ್ಯ ಗುತ್ತೇದಾರ್, ಎಂ. ಶಂಕರಪ್ಪ, ಪಿ.ಸಿ. ಮೋಹನ್, ಎ. ನಾರಾಯಣ ಸ್ವಾಮಿ ಮತ್ತು ಛಲವಾದಿ ನಾರಾಯಣ ಸ್ವಾಮಿ ಅವರ ತಂಡವು ಆಗಸ್ಟ್ 16ರ ಭಾನುವಾರ ಸ್ಥಳಕ್ಕೆ ತೆರಳಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಲಿದೆ. ಬೆಳಿಗ್ಗೆ 10.30ರ ವೇಳೆಗೆ ಈ ತಂಡ ಅಲ್ಲಿಗೆ ತೆರಳಲಿದೆ ಎಂದು ಬಿಜೆಪಿ ತಿಳಿಸಿದೆ.
ರಕ್ಷಣೆ ನೀಡಿಲ್ಲ-ಡಿಕೆಶಿ ಆರೋಪ: ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ಅವರ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿ ಧ್ವಂಸ ಮಾಡಲಾಗಿದೆ. ಇದರಿಂದ ಇಡೀ ಕುಟುಂಬ ಆತಂಕದಲ್ಲಿದೆ. ಇಂತಹ ಘೋರ ಕೃತ್ಯ ನಡೆದ ಬಳಿಕ ಅಧಿಕಾರಿಗಳು ಮತ್ತು ಸಚಿವರು ಸ್ಥಳಕ್ಕೆ ನೆಪಮಾತ್ರದ ಭೇಟಿ ನೀಡಿ ಅನವಶ್ಯಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ರಕ್ಷಣೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದರು. ಆದರೆ ಇರುವರೆಗೂ ಶಾಸಕರು ಮತ್ತು ಅವರ ಕುಟುಂಬದವರಿಗೆ ಸರ್ಕಾರ ರಕ್ಷಣೆ ನೀಡಲು ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಒಬ್ಬ ಶಾಸಕರಿಗೆ ಭದ್ರತೆ ಒದಗಿಸಲು ವಿಫಲರಾದರೆ ಇನ್ನು ಸಾಮಾನ್ಯ ಜನರನ್ನು ಈ ಸರ್ಕಾರ ರಕ್ಷಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಕೂಡಲೇ ಅಖಂಡ ಶ್ರೀನಿವಾಸಮೂರ್ತಿ ಮತ್ತು ಅವರ ಕುಟುಂಬದವರಿಗೆ ಸರ್ಕಾರವು ಭದ್ರತೆ ಒದಗಿಸಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.