ಜಯನಗರ ಚುನಾವಣೆ : ಬಿಜೆಪಿಯಿಂದ ಎನ್.ನಾಗರಾಜು ಅಮಾನತು
ಬೆಂಗಳೂರು, ಜುಲೈ 08 : ಬೈರಸಂದ್ರ ವಾರ್ಡ್ನ ಬಿಜೆಪಿ ಬಿಬಿಎಂಪಿ ಸದಸ್ಯ ಎನ್.ನಾಗರಾಜು ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಜಯನಗರ ವಿಧಾನಸಭೆ ಚುನಾವಣೆಯಲ್ಲಿ ನಾಗರಾಜು ಅವರು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದರು ಎಂಬ ಆರೋಪವಿದೆ.
ಬೆಂಗಳೂರು ನಗರ ಬಿಜೆಪಿ ಘಟಕದ ಅಧ್ಯಕ್ಷ ಪಿ.ಎನ್.ಸದಾಶಿವ ಅವರು ಎನ್.ನಾಗರಾಜು ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಜೂನ್ 14ರಂದು ನಾಗರಾಜು ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು.
ಕಾಂಗ್ರೆಸ್ ಸೇರಿರುವ ಸುದ್ದಿಗಳನ್ನು ತಳ್ಳಿ ಹಾಕಿದ : ಎನ್.ನಾಗರಾಜು
ಜೂನ್ 11ರಂದು ಬೆಂಗಳೂರಿನ ಜಯನಗರ ಕ್ಷೇತ್ರದ ವಿಧಾನಸಭೆ ಚುನಾವಣೆ ನಡೆದಿತ್ತು. ಜೂನ್ 13ರಂದು ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ನ ಸೌಮ್ಯಾ ರೆಡ್ಡಿ ಅವರು 2 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯ ಬಿ.ಎನ್.ಪ್ರಹ್ಲಾದ್ ಅವರು ಸೋಲು ಅನುಭವಿಸಿದ್ದರು.
ಜಯನಗರದಲ್ಲಿ ಮಳೆಯ ಜೊತೆ ಬಲವಾಗಿ ಬೀಸಿರುವ ಗಾಳಿಸುದ್ದಿ
ಬಸವೇಶ್ವರ ನಗರ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯ ಎನ್.ಎಚ್.ಪದ್ಮರಾಜ್ ಅವರಿಗೂ ಶೋಕಾಸ್ ನೀಡಲಾಗಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಪ್ರಚಾರದ ವೇಳೆ ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿದೆ.
ಬೈರಸಂದ್ರ ವಾರ್ಡ್ ಕಾರ್ಪೊರೇಟರ್ ನಾಗರಾಜ್ಗೆ ಶೋಕಾಸ್ ನೋಟಿಸ್!
ಪ್ರಚಾರದಿಂದ ದೂರವುಳಿದಿದ್ದರು
ಜೂನ್ 11ರಂದು ಬೆಂಗಳೂರಿನ ಜಯನಗರ ಕ್ಷೇತ್ರದ ವಿಧಾನಸಭೆ ಚುನಾವಣೆ ನಡೆದಿತ್ತು. ಆದರೆ, ಎನ್.ನಾಗರಾಜು ಅವರು ಚುನಾವಣಾ ಪ್ರಚಾರದಿಂದ ದೂರವುಳಿದಿದ್ದರು.
ಜೂನ್ 4ರಂದು ಎನ್.ನಾಗರಾಜು ಮಾಜಿ ಸಚಿವ ಎಚ್.ಎಂ.ರೇವಣ್ಣ, ರಾಮಲಿಂಗಾ ರೆಡ್ಡಿ, ರಾಮಲಿಂಗಾ ರೆಡ್ಡಿ ಪುತ್ರಿ, ಜಯನಗರದ ಹಾಲಿ ಶಾಸಕಿ ಸೌಮ್ಯಾ ರೆಡ್ಡಿ ಜೊತೆಯಾಗಿರುವ ಫೋಟೋವನ್ನು ಫೇಸ್ಬುಕ್ನಲ್ಲಿ ಹಾಕಿದ್ದರು. ಆದ್ದರಿಂದ, ಅವರು ಕಾಂಗ್ರೆಸ್ ಬೆಂಬಲಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಎನ್.ನಾಗರಾಜು ಸ್ಪಷ್ಟನೆ ನೀಡಿದ್ದರು
ಬೈರಸಂದ್ರ ವಾರ್ಡ್ ಬಿಬಿಎಂಪಿ ಸದಸ್ಯ ಎನ್.ನಾಗರಾಜು ಅವರು, 'ಜಯನಗರ ಕ್ಷೇತ್ರದಲ್ಲಿ ಬಿಜೆಪಿ ಬಿ.ಎನ್.ಪ್ರಹ್ಲಾದ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರಿಂದ ಯಾವುದೇ ಅಸಮಾಧಾನವಿಲ್ಲ. ಬಿಜೆಪಿಗಾಗಿಯೇ ಕೆಲಸ ಮಾಡುವೆ ನಾನು ಕಾಂಗ್ರೆಸ್ ಸೇರಿಲ್ಲ. ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲಿದ್ದೇನೆ' ಎಂದು ಹೇಳಿದ್ದರು.
ಆದರೆ, ಜಯನಗರ ಚುನಾವಣೆಯಲ್ಲಿ ಬಿ.ಎನ್.ಪ್ರಹ್ಲಾದ್ ಅವರು ಸೋಲು ಅನುಭವಿಸಿದ್ದರು. ನಂತರ ಎನ್.ನಾಗರಾಜು ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು. ಜುಲೈ 7ರಂದು ಅವರನ್ನು ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಜಯನಗರ ಚುನಾವಣೆ ಫಲಿತಾಂಶ
ಜೂನ್ 11ರಂದು ಬೆಂಗಳೂರಿನ ಜಯನಗರ ಕ್ಷೇತ್ರದ ವಿಧಾನಸಭೆ ಚುನಾವಣೆ ನಡೆದಿತ್ತು. ಜೂನ್ 13ರಂದು ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ 54,458 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ಬಿ.ಎನ್.ಪ್ರಹ್ಲಾದ್ ಅವರು 51,571 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದ್ದರು.
ಜಯನಗರದ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಪಕ್ಷ ವಿರೋಧಿ ಕೆಲಸ ಮಾಡಲಾಗಿದೆ ಎಂದು ಆರೋಪಿಸಿ ಎನ್.ನಾಗರಾಜು ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು.
ಅಭ್ಯರ್ಥಿ ಆಯ್ಕೆ ಬಗ್ಗೆ ಅಪಸ್ವರ
ಜಯನಗರದಲ್ಲಿ ಬಿಜೆಪಿ ಬಿ.ಎನ್.ಪ್ರಹ್ಲಾದ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬಳಿಕ ಪಕ್ಷದಲ್ಲಿ ಅಸಮಾಧಾನ ಉಂಟಾಗಿತ್ತು. ಬಿಬಿಎಂಪಿ ಸದಸ್ಯರು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದರು.
ಬಿಬಿಎಂಪಿ ಸದಸ್ಯರಲ್ಲಿಯೇ ಯಾರಿಗಾದರೂ ಟಿಕೆಟ್ ನೀಡಬಹುದಿತ್ತು ಎಂದು ಅವರು ಒತ್ತಾಯಿಸಿದ್ದರು. ಜಯನಗರದ 3ನೇ ಬ್ಲಾಕ್ನಲ್ಲಿರುವ ಪೈ ವೈಸ್ರಾಯ್ ಹೋಟೆಲ್ನಲ್ಲಿ ಬಿಬಿಎಂಪಿ ಸದಸ್ಯರು ಸಭೆ ನಡೆಸಿ, ಪಕ್ಷದ ನಾಯಕರ ಮೇಲೆ ಒತ್ತಡ ಹಾಕಲು ಪ್ರಯತ್ನ ನಡೆಸಿದ್ದರು. ಆದರೆ, ಪಕ್ಷ ಅಂತಿಮವಾಗಿ ಬಿ.ಎನ್.ಪ್ರಹ್ಲಾದ್ ಅವರನ್ನು ಅಭ್ಯರ್ಥಿಯಾಗಿಸಿತ್ತು.