"ಪಂಚಾಯತಿ ಚುನಾವಣೆಯಲ್ಲಿ ಶೇ.80 ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರ ಗೆಲುವು''
ಬೆಂಗಳೂರು, ನವೆಂಬರ್ 30: ರಾಜ್ಯ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ಆ ಮೂಲಕ ರಾಜ್ಯದಲ್ಲಿ ಪ್ರಗತಿ ಕಾಣುತ್ತಿದೆ. ಜನರ ವಿಶ್ವಾಸ ಸಂಪೂರ್ಣ ಬಿಜೆಪಿ ಪರವಾಗಿದೆ. ಶೇ.80 ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆ ಪಕ್ಷಾತೀತವಾಗಿ ಸ್ಪರ್ಧೆ ಮಾಡುವಂತಾಗಿದ್ದು, ಆದರೂ ಎಲ್ಲ ರಾಜಕೀಯ ಪಕ್ಷಗಳ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
"ಹತಾಶರಾಗಿ ಶಿವಕುಮಾರ್ ಈ ರೀತಿ ಮಾತನಾಡುತ್ತಿದ್ದಾರೆ"
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ ಸರ್ಕಾರ ಕಳೆದ 73 ವರ್ಷದಲ್ಲಿ ಕಾಣದ ಎಲ್ಲಾ ಸುಧಾರಣೆಗಳನ್ನು ತಂದಿದೆ. ಸಾಕಷ್ಟು ಸುಧಾರಣೆ ಕಾರ್ಯಕ್ರಮಗಳನ್ನು ತಂದಿದ್ದರಿಂದಾಗಿ ಪ್ರಗತಿ ಕಾಣುವಂತಾಗಿದೆ ಎಂದು ಹೇಳಿದರು.
ಕೊರೊನಾ ನಿರ್ವಹಣೆಯನ್ನು ಉತ್ತಮವಾಗಿ ಮಾಡಲಾಗಿದೆ. ಅತಿವೃಷ್ಟಿ-ಅನಾವೃಷ್ಟಿ ವೇಳೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಸಂತ್ರಸ್ತರ ಬಳಿಗೆ ತೆರಳಿ ಅವರಿಗೆ ಸಾಂತ್ವನ ಹೇಳಿ ಅವರ ಕಷ್ಟಕ್ಕೆ ನಿಲ್ಲಲಾಗಿದೆ. ಎಲ್ಲ ರೀತಿಯ ಪರಿಹಾರವನ್ನು ಕೊಟ್ಟು ಅವರ ಜೀವನ ಸುಧಾರಣೆಗೆ ಎಲ್ಲಾ ಪ್ರಯತ್ನ ಮಾಡಲಾಗಿದೆ. ಹಾಗಾಗಿ ಜನರ ವಿಶ್ವಾಸ ಸಂಪೂರ್ಣ ಬಿಜೆಪಿ ಪರ ಇದೆ ಎಂದು ತಿಳಿಸಿದರು.
ರಾಜ್ಯದ ಉದ್ದಗಲದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಶೇ.80ರಷ್ಟು ಪಂಚಾಯತ್ಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ನಾವು ನಾಡಿನ ಉದ್ದಗಲಕ್ಕೆ ನಡೆಸುತ್ತಿದ್ದೇವೆ. ಆರು ತಂಡಗಳಾಗಿ ಎಲ್ಲಾ ಕಡೆ ಸಮಾವೇಶಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದೇವೆ. ಕಮಲ ಎಲ್ಲ ಕಡೆ ಅರಳಲಿದ್ದು. ಹೆಚ್ಚಿನ ಪಂಚಾಯತ್ ಸದಸ್ಯರು ಬಿಜೆಪಿಯವರೇ ಇರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಮನಗರ ಜಿಲ್ಲೆಯಲ್ಲಿ ನಮಗೆ ಹೆಚ್ಚಿನ ಸವಾಲಿದೆ. ಬಹಳ ಸದೃಢವಾಗಿ ಅಲ್ಲಿ ಜೆಡಿಎಸ್, ಕಾಂಗ್ರೆಸ್ ಬೀಡು ಬಿಟ್ಟಿದ್ದಾರೆ. ಆದರೂ ಅವರು ಅಭಿವೃದ್ಧಿ ಮಾಡಿಲ್ಲ. ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ವ್ಯಕ್ತಿಗತವಾಗಿ ಸ್ವಜನ ಪಕ್ಷಪಾತ, ಕುಟುಂಬ ರಾಜಕೀಯಕ್ಕೆ ಸೀಮಿತವಾಗಿದೆ ಎಂದರು.
ಜನ ವಿರೋಧಿಯಾಗಿ ಜೆಡಿಎಸ್, ಕಾಂಗ್ರೆಸ್ ಕೆಲಸ ಮಾಡಿದ್ದಾರೆ. ಹಾಗಾಗಿ ಜನ ಇವರನ್ನು ಒಪ್ಪುವುದಿಲ್ಲ. ಪ್ರಗತಿಪರವಾಗಿರುವ ಪಕ್ಷ ಮತ್ತು ಸುಧಾರಣೆ ಮತ್ತು ಬೆಳವಣಿಗೆ ಇರುವ ಬಿಜೆಪಿಯ ಕೈಹಿಡಿಯಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಚನ್ನಪಟ್ಟಣಕ್ಕೆ ನಾನೇ ಮುಖ್ಯಮಂತ್ರಿ ಎನ್ನುವ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ ಅಶ್ವಥ್ ನಾರಾಯಣ, ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ಅವರ ಕರ್ತವ್ಯವನ್ನು ಅವರು ಮಾಡಲಿದ್ದಾರೆ. ಅವರು ಯಾವುದೋ ಭಾವನೆಯಲ್ಲಿ ಹೇಳಿರಬಹುದು. ಪರಿಪೂರ್ಣವಾಗಿ ಆ ಭಾಗವನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿದರು.
ಯಾವುದೇ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ. ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಕೂಡ ಇರುವುದಿಲ್ಲ. ಕ್ಷೇತ್ರದ ಶಾಸಕರಾಗಿ ಅವರು ಕೆಲಸವನ್ನು ಮಾಡುತ್ತಿದ್ದಾರೆ. ಉತ್ಸಾಹದಲ್ಲಿ ಅವರು ಹೀಗೆ ಹೇಳಿಕೆ ಕೊಟ್ಟಿರಬಹುದು, ಅದಕ್ಕೆ ಹೆಚ್ಚೇನೂ ಹೇಳುವುದಿಲ್ಲ ಎಂದು ಡಿಸಿಎಂ ತಿರುಗೇಟು ನೀಡಿದರು.