ರಾಷ್ಟ್ರಕವಿಗೆ ಅವಮಾನ ಮಾಡಿದ್ದು ಬಿಜೆಪಿನಾ? ಕಾಂಗ್ರೆಸ್ಸಾ?
ಬೆಂಗಳೂರು, ಮೇ 24: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಭಗತ್ ಸಿಂಗ್, ನಾರಾಯಣಗುರು, ಪೆರಿಯಾರ್, ಟಿಪ್ಪು ಸುಲ್ತಾನ್ ಕೈಬಿಡಲಾಗಿದೆ ಎಂದು ಶುರುವಾದ ವಿವಾದಕ್ಕೆ ಈಗ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ ಎನ್ನುವ ಹೊಸ ವಿವಾದವೂ ಜೊತೆಯಾಗಿದೆ.
ನಾಲ್ಕನೇ ತರಗತಿಯ ಪರಿಷ್ಕೃತ ಪಠ್ಯದಲ್ಲಿ ಕುವೆಂಪು ಅವರಿಗೆ ಚಿಕ್ಕಂದಿನಿಂದಲೂ ಕಥೆ, ಕವನ, ಪುಸ್ತಕ ಓದುವ, ಬರೆಯುವ ಹವ್ಯಾಸ ಇತ್ತು. ಅನೇಕರ ಪ್ರೋತ್ಸಾಹದಿಂದ ಅವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ಮುದ್ರಿಸಲಾಗಿದೆ ಎನ್ನುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ವಿವಾದದ ಕಿಡಿ ಹೊತ್ತಿಸಿತ್ತು.
ಶಿಕ್ಷಣದಲ್ಲಿ ಕೇಸರೀಕಣ: ಮೇ 31 ರಂದು ಬೃಹತ್ ಪ್ರತಿಭಟನೆಗೆ ಕರೆ
ಇತ್ತೀಚೆಗಷ್ಟೆ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಟ್ವಿಟರ್ ಅಭಿಯಾನ ಮಾಡಲಾಗಿತ್ತು. ಹಲವರು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸಮಿತಿಯಲ್ಲಿ ಬ್ರಾಹ್ಮಣರೇ ತುಂಬಿದ್ದು ಬ್ರಾಹ್ಮಣ ಲೇಖಕರ ಪಠ್ಯಗಳಿಗೆ ಆದ್ಯತೆ ನೀಡಲಾಗಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಕವಿಗಳು, ಲೇಖಕರ ಪಠ್ಯಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದ್ದರು.
ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ
ಇನ್ನು ಈ ಫೋಟೊವೊಂದನ್ನು ಟ್ವೀಟ್ನಲ್ಲಿ ಹಂಚಿಕೊಂಡಿದ್ದ ಕರ್ನಾಟಕ ಕಾಂಗ್ರೆಸ್ "ಕುವೆಂಪು ಈ ನಾಡಿಗೆ, ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಸ್ಪೂರ್ತಿಯ ಸೆಲೆಯಾದವರು. ಲೇಖಕರ ಪರಿಚಯದಲ್ಲಿ ಸಂಘ ಸಿದ್ದಾಂತ ಪ್ರತಿಪಾದಕರನ್ನು ವಿಜೃಂಭಿಸಿ, ರಾಷ್ಟ್ರಕವಿಯನ್ನು ಕೇವಲವಾಗಿ ಬಿಂಬಿಸಿದ ಬಿಜೆಪಿ ತನ್ನ ಆಂತರ್ಯದಲ್ಲಿನ ಕುವೆಂಪು ದ್ವೇಷವನ್ನು ಅನಾವರಣಗೊಳಿಸಿದೆ. ಆರ್ ಎಸ್ಎಸ್ ಮುಖವಾಣಿ ಪತ್ರಿಕೆಗಳಂತವನ್ನು ಪಠ್ಯಪುಸ್ತಕವೆಂದು ಒಪ್ಪಲಾಗದು" ಎಂದು ಹೇಳಿತ್ತು.
ನಾಡಗೀತೆಯನ್ನು ತಿರುಚಿ ಬರೆದಿದ್ದ ಆರೋಪದ ಮೇಲೆ ರೋಹಿತ್ ಚಕ್ರತೀರ್ಥ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಿಡಿ ಕಾರಿದ್ದರು. "ನಾಡಗೀತೆಯನ್ನು ಅವಹೇಳನ ಮಾಡಿದ, ರಾಷ್ಟ್ರಕವಿಯನ್ನು ಗೇಲಿ ಮಾಡಿದ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ ಬಿಜೆಪಿ ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ಮೊದಲು ಈತನನ್ನು ಕಿತ್ತುಹಾಕಬೇಕು" ಎಂದು ಒತ್ತಾಯಿಸಿದ್ದಾರೆ.
ಪಿಯುಸಿ: ಇತಿಹಾಸ ಪಠ್ಯ ಪರಿಷ್ಕರಣೆ ಕೇಸರಿ ತಜ್ಞ 'ಚಕ್ರತೀರ್ಥ' ಸಮಿತಿ ಹೆಗಲಿಗೆ
ಸುಳ್ಳನ್ನು ಎಷ್ಟು ಸಲ ಹೇಳಿದರು ಸತ್ಯವಾಗದು
ವಿವಾದವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, "ರಾಷ್ಟ್ರಕವಿ ಕುವೆಂಪು ಅವರ ಕುರಿತು ಪಾಠ ಇರುವ 4ನೇ ತರಗತಿ 'ಪರಿಸರ ಅಧ್ಯಯನ' ಪುಸ್ತಕದ ಪರಿಷ್ಕರಣೆ ಆಗಿಲ್ಲ. ರಾಜ್ಯ ಬಿಜೆಪಿ ಸರ್ಕಾರದ ಜನಪರ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್ ಪಕ್ಷದ ಮುಖಂಡರು ದಿನಕ್ಕೊಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ, ಸುಳ್ಳನ್ನು ಎಷ್ಟು ಸಲ ಹೇಳಿದರು ಸತ್ಯವಾಗದು" ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ನಿಂದಲೇ ಅವಮಾನ ಎಂದ ಬಿಜೆಪಿ
ಕಾಂಗ್ರೆಸ್ ಟ್ವೀಟ್ಗೆ ಉತ್ತರ ಕೊಟ್ಟಿರುವ ಬಿಜೆಪಿ ಈಗ ವೈರಲ್ ಆಗಿರುವ ಕುವೆಂಪು ಬಗೆಗಿನ ಸಾಲುಗಳು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪರಿಷ್ಕರಣೆಗೊಂದ ಪರಿಸರ ಅಧ್ಯಯನ ಪುಸ್ತಕದ 'ಕೆಲವು ಪ್ರಸಿದ್ಧ ವ್ಯಕ್ತಿಗಳು' ಎಂಬ ಪಠ್ಯದಲ್ಲಿ ಮುದ್ರಣವಾದ ವ್ಯಕ್ತಿ ಪರಿಚಯದ ಸಾಲುಗಳು. ಹಾಗಾದರೆ ರಾಷ್ಟ್ರಕವಿಗೆ ಅವಮಾನ ಮಾಡಿದ್ದು ಯಾರು ಪ್ರಶ್ನಿಸಿದೆ.
"ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು" ಎಂದು ಕುವೆಂಪು ಕುರಿತು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬರಗೂರು ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಮುದ್ರಿಸಿತ್ತು. ಅದೇ ಶಬ್ದ, ಅವೇ ವಾಕ್ಯ, ಅವೇ ಸಾಲು ಈಗಲೂ ಇದೆ, ಸಿದ್ದರಾಮಯ್ಯ ಕಾಲದ ಆಗದ ಅವಮಾನ ಈಗ ಹೇಗೆ? ಎಂದು ಕಿಡಿ ಕಾರಿದೆ.
ಕಾಂಗ್ರೆಸ್ ನಾಟಕ ಬಯಲಾಗಿದೆ
ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದವರು ತಮ್ಮ ಕಾಲದಲ್ಲಿ ಮಾಡಿದ ತಪ್ಪನ್ನು ನಮ್ಮ ತಲೆಗೆ ಕಟ್ಟಲು ನೋಡುತ್ತಿದ್ದಾರೆ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಕುವೆಂಪು ಅವರನ್ನು ಅವಮಾನಿಸಿ ಬಿಜೆಪಿ ಮೇಲೆ ಹಾಕುತ್ತಿರುವದು ಹಾಸ್ಯಾಸ್ಪದ ಎಂದಿದೆ.
"ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಬೊಬ್ಬಿಡುತ್ತಿದೆ. ಕಾಂಗ್ರೆಸ್ ನೇಮಿಸಿದ ಬರಗೂರು ತಂಡ, ಕುವೆಂಪು ಅವರ ಎರಡು ಅತ್ಯುತ್ತಮ ಬರಹಗಳನ್ನು ಪಠ್ಯಗಳಿಂದ ಕೈಬಿಟ್ಟಿತ್ತು. ಹಾಗಾದರೆ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದು ಯಾರು?" ಎಂದು ಟ್ವೀಟ್ ಮಾಡಿದೆ.
ಅಂಬೇಡ್ಕರ್ ಪಠ್ಯವನ್ನು ಕಾಂಗ್ರೆಸ್ ಕೈಬಿಟ್ಟಿತ್ತು
"ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೇಮಿಸಿದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೀರಾಮಾಯಣದರ್ಶನಂ ಮಹಾಕಾವ್ಯವನ್ನು ಪಠ್ಯದಿಂದಲೇ ತೆಗೆದು ಹಾಕಿತ್ತು. ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಎನ್ನುವುದರಲ್ಲಿ ಅನುಮಾನವಿದೆಯೇ" ಎಂದು ಮತ್ತೊಂದು ಟ್ವೀಟ್ ಮಾಡಿದೆ.
ಕಾಂಗ್ರೆಸ್ ಸರ್ಕಾರ ರಾಷ್ಟ್ರಕವಿ ಕುವೆಂಪು ಬರೆದ 'ಅನಲೆ' ಎಂಬ ನಾಟಕ, 'ಅಜ್ಜಯ್ಯನ ಅಭ್ಯಂಜನ' ಎಂಬ ಸುಂದರ ಲಲಿತ ಪ್ರಬಂಧ ಕೈಕೊಟ್ಟಿತ್ತು. 'ಬಹುಮಾನ' ಎಂಬ ಅರ್ಥಪೂರ್ಣ ಕವಿತೆ ಹಾಗೂ 'ಬೊಮ್ಮನಹಳ್ಳಿಯ ಕಿಂದರಿಜೋಗಿ' ಎಂಬ ಶಿಶು ಸಾಹಿತ್ಯವನ್ನು ನಮ್ಮ ಸರ್ಕಾರದ ಸೇರಿಸಿದೆ ಎಂದು ಸಮರ್ಥನೆ ನೀಡಿದೆ.
ಕುವೆಂಪು ಅವರ ಜೊತೆಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಅವರಿಗೂ ಕಾಂಗ್ರೆಸ್ ಅವಮಾನ ಮಾಡಿದೆ. ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧಿ ಕುರಿತಾದ ಪಠ್ಯವನ್ನು ಕೈ ಬಿಟ್ಟಿದ್ದರು ಎಂದು ಆರೋಪಿಸಿದೆ.
(ಒನ್ಇಂಡಿಯಾ ಸುದ್ದಿ)
Recommended Video