ನಾಟಕ ಮುಗಿಸಿ ವಿದೇಶಕ್ಕೆ ಹೋದ ಕುಮಾರಸ್ವಾಮಿ: ಆರ್. ಅಶೋಕ್ ಟೀಕೆ
ಬೆಂಗಳೂರು, ಜೂನ್ 29: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿದೇಶ ಪ್ರವಾಸಕ್ಕೆ ಹೋಗಲು ಬಯಸಿದ್ದರು. ಆದರೆ ಬರಗಾಲದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳದೆ ವಿದೇಶ ಪ್ರವಾಸ ಮಾಡಿದರೆ ಜನರು ಬೈಯುತ್ತಾರೆ. ಹೀಗಾಗಿ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಅವರು ಗ್ರಾಮ ವಾಸ್ತವ್ಯದ ನಾಟಕ ಮುಗಿಸಿ ಹೋದರು ಎಂದು ಬಿಜೆಪಿ ಶಾಸಕ ಆರ್. ಅಶೋಕ್ ಟೀಕಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಗ್ರಾಮ ವಾಸ್ತವ್ಯಕ್ಕೆ ಇದು ಸರಿಯಾದ ಸಮಯವಲ್ಲ. ರಾಜ್ಯದ ಆಡಳಿತ ನಡೆಸುವವರು ರಾಜ್ಯವನ್ನು ಬಿಟ್ಟು ವಾರಗಟ್ಟಲೆ ವಿದೇಶಕ್ಕೆ ತೆರಳಿ ಮೋಜು ಮಸ್ತಿಯಲ್ಲಿ ತೊಡಗಿದರೆ ಟೀಕೆಗಳು ಎದುರಾಗುತ್ತವೆ. ಹೀಗಾಗಿ ಕುಮಾರಸ್ವಾಮಿ, ಜನರ ಕಣ್ಣೊರೆಸುವ ತಂತ್ರ ಮಾಡಿ ಗ್ರಾಮವಾಸ್ತವ್ಯ ನಡೆಸಿದರು ಎಂದು ಆರೋಪಿಸಿದರು.
ಇದು ಗ್ರಾಮ ವಾಸ್ತವ್ಯ ಮಾಡುವ ಸಮಯವಲ್ಲ: ಯಡಿಯೂರಪ್ಪ
ಕುಮಾರಸ್ವಾಮಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ತಮ್ಮನ್ನು ಮುಖ್ಯಮಂತ್ರಿ ಮಾಡಿದ್ದು ಜನರಲ್ಲ, ದೇವರು ಎನ್ನುತ್ತಾರೆ. ದೇವರಿಗೆ ಪೂಜೆ ಸಲ್ಲಿಸುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಈಗ ಜನರೂ ಅವರ ಕೈಬಿಟ್ಟಿದ್ದಾರೆ, ದೇವರೂ ಕೈಬಿಟ್ಟಿದ್ದಾನೆ. ಕುಮಾರಸ್ವಾಮಿ ಏಕಾಂಗಿಯಾಗಿದ್ದಾರೆ ಎಂದು ಟೀಕಿಸಿದರು.
ನಿದ್ದೆ ಮಾಡುವವರಿಗೆ ವೋಟ್ ಮಾಡಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಹೋದ ಕಡೆಯೆಲ್ಲ ನಿದ್ದೆ ಮಾಡುವವರು ಯಾರು? ಎಂದು ಪ್ರಶ್ನಿಸಿದರು.
ಅಮೆರಿಕದಲ್ಲಿ ದೇವಸ್ಥಾನ ಶಂಕುಸ್ಥಾಪನೆಗೆ ಹೊರಟ ಕುಮಾರಸ್ವಾಮಿ
ಮೋದಿಗೆ ಮತ ಹಾಕುತ್ತೀರಾ, ಸಮಸ್ಯೆಗೆ ಪರಿಹಾರ ನಮ್ಮ ಬಳಿ ಕೇಳುತ್ತೀರಾ ಎಂದು ಕುಮಾರಸ್ವಾಮಿ ಜನರ ಮೇಲೆ ಹರಿಹಾಯುತ್ತಾರೆ. ಕೇಂದ್ರ ಸರ್ಕಾರವು ಮೈಸೂರಿನಲ್ಲಿ ರಸ್ತೆ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂ. ಅನುದಾನ ನೀಡಿದೆ. ಹಾಸನ ರಸ್ತೆ ಅಭಿವೃದ್ಧಿಗೂ 200 ಕೋಟಿ ನೀಡಿದೆ. ಕೇಂದ್ರ ಸರ್ಕಾರ ಅನುದಾನ ನೀಡಿದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ಈ ರಸ್ತೆಗಳಲ್ಲಿ ಓಡಾಡುವುದನ್ನು ಬಿಡುತ್ತಾರೆಯೇ? ಎಂದು ಲೇವಡಿ ಮಾಡಿದರು.
ಕುಮಾರಸ್ವಾಮಿಯವರೇ, ನೀವು ನಿಮ್ಮ ಅಪ್ಪನ ಮನೆಯಿಂದ ದುಡ್ಡು ತಂದು ಕೆಲಸ ಮಾಡಿ ಎಂದು ನಾವೇನೂ ಕೇಳುವುದಿಲ್ಲ. ನಾವು ಕಟ್ಟಿರುವ ತೆರಿಗೆ ಹಣ ಇದೆಯಲ್ಲ ಅದರಲ್ಲಿ ಕೆಲಸ ಮಾಡಿ. ಮಾನ ಮರ್ಯಾದೆ ಇದ್ದರೆ ಈ ರೀತಿ ಮಾತನಾಡುವುದನ್ನು ಬಿಡಿ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ನಾಮ ಹಾಕುವವರನ್ನು ಕಂಡರೆ ಭಯ ಎನ್ನುತ್ತಾರೆ. ಏಕೆ ನಾಮ ಹಾಕಬೇಕು ಎಂದು ಜನರನ್ನು ಕೇಳುತ್ತಿದ್ದರು. ಕೊನೆಗೆ ಜನರೇ ಅವರಿಗೆ ನಾಮ ಹಾಕಿದ್ದಾರೆ. ಜೆಡಿಎಸ್ ಸಹವಾಸ ಹೆಂಡತಿ ಮಕ್ಕಳ ಉಪವಾಸ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಆದರೂ ನಾಯಕರು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದರು.