ಮೂರು ವರ್ಷಗಳಲ್ಲಿ ರಾಜ್ಯ ಮೂರು ಸಿಎಂಗಳನ್ನು ಕಂಡಿದೆ: ಕಟೀಲ್
ಬೆಂಗಳೂರು. ಫೆ. 25: ಮೂರು ವರ್ಷಗಳಲ್ಲಿ ರಾಜ್ಯ ಮೂರು ಮುಖ್ಯಮಂತ್ರಿಗಳನ್ನು ಕಂಡಿದೆ. ಒಬ್ಬರು ರಾಜ್ಯದ ಜನರ ಕಣ್ಣೀರು ಹಾಕಿಸಿದವರು. ಅದು ಸಿದ್ದರಾಮಯ್ಯ, ಇನ್ನೊಬ್ಬರು ಮನೆ ಮನೆಗೆ ಹೋಗಿ ಕಣ್ಣೀರು ಹಾಕಿದವರು ಅದು ಕುಮಾರಸ್ವಾಮಿ. ಆದರೆ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನರ ಕಣ್ಣೀರು ಒರೆಸುತ್ತಿರುವ ಸಿಎಂ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ಕೊಟ್ಟಿದ್ದಾರೆ. ಅನಗತ್ಯವಾಗಿ ಟಿಪ್ಪು ಜಯಂತಿ ಮಾಡಿಸಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣವಾಗಿ ಮನೆ ಮನೆಯಲ್ಲಿ ಜನ ಕಣ್ಣೀರು ಹಾಕುವಂತೆ ಮಾಡಿದವರು ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಆರೋಪಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷರಾಗಿ ಎನ್.ಆರ್. ರಮೇಶ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಕಟೀಲ್ ಮಾತನಾಡಿದ್ದಾರೆ. 130 ವರ್ಷಗಳ ಇತಿಹಾಸ ಕಾಂಗ್ರೆಸ್ ದೆಹಲಿ ಚುನಾವಣೆಯಲ್ಲಿ ಠೇವಣಿ ಉಳಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಬಿಜೆಪಿಯನ್ನು ಪುರಸ್ಕರಿಸಿದ್ದಾರೆ ಎಂದಿದ್ದಾರೆ. ಬಸವನಗುಡಿಯ ಮರಾಠಾ ಹಾಸ್ಟಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿಯ ನಾಯಕರು ಭಾಗವಹಿಸಿದ್ದರು.
ಪ್ರಧಾನಿ ಮೋದಿಯಿಂದ ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ: ಕಟೀಲ್
ಡಿಕೆಶಿ ತಿಹಾರ್ ಜೈಲಿನಲ್ಲಿ ಓದಿದ್ದು ಭಾರತದ ಇತಿಹಾಸವಾ, ಪಾಕಿಸ್ತಾನದ ಇತಿಹಾಸವಾ?
ಪಾಕ್ ಪರವಾಗಿ ಘೋಷಣೆ ಮಾಡಿದ ವಿದ್ಯಾರ್ಥಿನಿ ಪರವಾಗಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡುತ್ತಾರೆ. ಡಿ.ಕೆ. ಶಿವಕುಮಾರ್ ನೀವು ತಿಹಾರ್ ಜೈಲಿನಲ್ಲಿ ಓದಿದ್ದು ಭಾರತದ ಇತಿಹಾಸವಾ ಅಥವಾ ಪಾಕಿಸ್ತಾನದ ಇತಿಹಾಸವಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಶ್ನೆ ಮಾಡಿದ್ದಾರೆ.
ಒಂದು ಕಾಲದಲ್ಲಿ ತಿಹಾರ್ ಜೈಲಿನಲ್ಲಿ ಕಸಬ್, ಅಫ್ಜಲ್ ಗುರು, ಛೋಟಾ ಶಕೀಲ್ ಎಂದು ಹಾಜರಾತಿ ಕೂಗುತ್ತಿದ್ದರು.ಇಂದು ಅದೇ ಜೈಲಿನಲ್ಲಿ ಚಿದಂಬರಂ, ರಾಜಾ, ಡಿ.ಕೆ. ಶಿವಕುಮಾರ್ ಎಂದು ಹಾಜರಾತಿ ಕೂಗುತ್ತಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.
ಕಾಶ್ಮೀರ ಸೇರಿದಂತೆ ಭಾರತದ ಎಲ್ಲ ಕಡೆ ರಾಷ್ಟ್ರಧ್ವಜ ಹಿಡಿಯುತ್ತಿದ್ದಾರೆ
ಜಮ್ಮು ಕಾಶ್ಮೀರದಲ್ಲಿ, ಹುಬ್ಬಳ್ಳಿ ಈದ್ಗಾ ಮೈದಾನಗಳಲ್ಲಿ ಭಾರತದ ರಾಷ್ಡ್ರಧ್ವಜಾರೋಹಣಕ್ಕೆ ಬಿಡುತ್ತಿರಲಿಲ್ಲ. ಆದರೆ ಇಂದು ಕಾಶ್ಮೀರದಲ್ಲಿ ಹಾಗೂ ಭಾರತದ ಎಲ್ಲ ಕಡೆ ಭಾರತದ ರಾಷ್ಟ್ರಧ್ವಜ ಹಿಡಿಯುವಂತೆ ಮಾಡಿದವರು ಪ್ರಧಾನಿ ನರೇಂದ್ರ ಮೋದಿ ಎಂದಿದ್ದಾರೆ.
ಇನ್ನು ಮೂರು ವರ್ಷದಲ್ಲಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಆಗುತ್ತದೆ. ರಾಮನ ಪಾದದ ಮೇಲಾಣೆ ಮಂದಿರವನ್ನು ಕಟ್ಟೆ ಕಟ್ಟುತ್ತೇವೆ ಎಂದು ಆಣೆ ಮಾಡಿದ್ದ ನಾವು ಶಪಥ ಈಡೇರಿಸುತ್ತಿದ್ದೇವೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರನ್ನು ಬಿಜೆಪಿಯ ಭದ್ರಕೋಟೆ ಮಾಡಿರುವುದು ಕಾರ್ಯಕರ್ತರು
ಇನ್ನು ಸಮಾರಂಭದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಬೆಂಗಳೂರು ಬಿಜೆಪಿ ಬೆಳವಣಿಗೆಗೆ ಪ್ರಮುಖ ಕಾರಣಕರ್ತರು ದಿ. ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹಾಗೂ ದಿ. ಮಾಜಿ ಶಾಸಕ ವಿಜಯಕುಮಾರ್ ಎಂದಿದ್ದಾರೆ. ಅವರಿಬ್ಬರನ್ನು ನಾವು ಕಳೆದುಕೊಂಡಿದ್ದೇವೆ. ಬೆಂಗಳೂರಿನ ಬಿಜೆಪಿ ಕಾರ್ಯಕರ್ತರು ಕಷ್ಟ ಸುಖ ಎರಡರಲ್ಲೂ ಪಕ್ಷದ ಕೈ ಹಿಡಿದಿದ್ದಾರೆ. ಬೆಂಗಳೂರನ್ನು ಬಿಜೆಪಿಯ ಭದ್ರಕೋಟೆ ಮಾಡಿರುವುದು ನಮ್ಮ ಕಾರ್ಯಕರ್ತರ ಸಾಧನೆ ಎಂದು ಸಚಿವ ಅಶೋಕ್ ಅಭಿಪ್ರಾಯ ಪಟ್ಟಿದ್ದಾರೆ.
ಕರುನಾಡ ಮುಖ್ಯಮಂತ್ರಿಗಳ ಕಣ್ಣೀರು ಕಹಾನಿ ಹೇಳಿದ ನಳಿನ್ ಕುಮಾರ್ ಕಟೀಲ್
ಬೆಂಗಳೂರು ಬಿಜೆಪಿ ಮೂರು ಭಾಗದಲ್ಲಿ ಹಂಚಿಕೆ
ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಬಿಜೆಪಿ ಬೆಂಗಳೂರು ಮಹಾನಗರ ಬಿಜೆಪಿ ಘಟಕವನ್ನು ಎರಡರಿಂದ ಮೂರು ವಿಭಾಗಗಳಲ್ಲಿ ವಿಂಗಡಿಸಿದೆ. ಈ ವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಎಂದು ಇಬ್ಬರು ಬಿಜೆಪಿ ಜಿಲ್ಲಾಧ್ಯಕ್ಷರಿದ್ದರು. ಈ ಬಾರಿ ಅದನ್ನು ಮೂರು ಭಾಗ ಮಾಡಿ ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಎಂದು ವಿಭಜಿಸಲಾಗಿದೆ. ಬೆಂಗಳೂರು ಮಹಾನಗರದಲ್ಲಿ ಬಿಜೆಪಿ ಬೆಳೆಸಲು ರಾಜ್ಯ ಬಿಜೆಪಿ ಘಟಕ ಮೂರು ಜಿಲ್ಲಾಧ್ಯಕ್ಷರುಗಳನ್ನು ನೇಮಕ ಮಾಡಿದೆ.