ನೂತನ ಸಂಪುಟ ರಚನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಮಹತ್ವದ ಹೇಳಿಕೆ
ಬೆಂಗಳೂರು, ಜುಲೈ 28: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ಸ್ವೀಕರಿಸಿದರು. ಈಗ ರಾಜ್ಯದ ಜನರ ಗಮನ ಏನಿದ್ದರೂ ಸಚಿವ ಸಂಪುಟ ರಚನೆ ಕಡೆಗೆ ಇದೆ ಎನ್ನಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ ಸಂಜೆ ದೆಹಲಿಗೆ ಹೋಗಲಿದ್ದಾರೆ ಎನ್ನಲಾಗುತ್ತಿದ್ದು, ಹೈಕಮಾಂಡ್ ಜೊತೆ ಚರ್ಚಿಸಿ ಸಚಿವ ಸಂಪುಟದಲ್ಲಿ ಯಾರು ಇರಬೇಕು ಎಂಬುದರ ಬಗ್ಗೆ ಅಂತಿಮ ಪಟ್ಟಿ ತಯಾರಿಸಿಕೊಂಡು ಬರಲಿದ್ದಾರೆ.
ಬಸವರಾಜ ಬೊಮ್ಮಾಯಿ ಪ್ರಮಾಣ ಸ್ವೀಕರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, "ಎಲ್ಲ ವಲಸಿಗರು ಈಗ ನಮ್ಮ ಪಕ್ಷದವರು. ಯಾರಿಗೂ ಅನ್ಯಾಯ ಅಗದಂತೆ ಪಕ್ಷ ನಿರ್ಧಾರ ಮಾಡುತ್ತದೆ,'' ಎಂದು ಹೇಳಿದರು.
"ಯಾರು ಸಚಿವರಾಗಬೇಕು ಎನ್ನುವುದನ್ನು ಸಿಎಂ ಅವರೇ ನಿರ್ಧಾರ ಮಾಡುತ್ತಾರೆ. ಸಾಮಾಜಿಕ ನ್ಯಾಯ, ಭೌಗೋಳಿಕ ಎಲ್ಲವನ್ನು ನೋಡಿ ಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ,'' ಎಂಬ ಮುನ್ಸೂಚನೆ ನೀಡಿದರು.
Recommended Video
ಇನ್ನೊಬ್ಬ ಮಾಜಿ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ, "ಬಸವರಾಜ ಬೊಮ್ಮಾಯಿಗೆ ಅಭಿನಂದನೆಗಳು, ಅವರ ರಾಜಕೀಯ ಅನುಭವ ಹಾಗೂ ಒಳ್ಳೆತನದಿಂದ ರಾಜ್ಯದ ಅಭಿವೃದ್ಧಿಗೆ ಸಹಾಯಕಾರಿಯಾಗಲಿದೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಗೊಂದಲವಿಲ್ಲದೇ ಹೊಸ ನಾಯಕತ್ವ ಆಯ್ಕೆಯಾಗಿದೆ. ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಎಲ್ಲಾ ಕ್ಷೇತ್ರದಲ್ಲೂ ಅನುಭವವಿದೆ. ಸಚಿವ ಸಂಪುಟ ಪಟ್ಟಿ ಸಿಎಂ ಪರಮೋಚ್ಚ ಅಧಿಕಾರವಾಗಿದ್ದು, ಅವರೇ ನೋಡಿಕೊಳ್ಳಲಿದ್ದಾರೆ,'' ಎಂದು ಪ್ರತಿಕ್ರಿಯೆ ನೀಡಿದರು.