ಉಪ ಚುನಾವಣೆಯಲ್ಲಿ ಒಂಟೆತ್ತುಗಳಾದ ಎಚ್ಡಿಕೆ, ಡಿಕೆಶಿ!
ಬೆಂಗಳೂರು, ಅ. 16: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಈಗ ಜೋಡೆತ್ತುಗಳಲ್ಲ. ಅವರು ಈಗ ಬೇರೆ ಬೇರೆಯಾಗಿ ಒಂಟೆತ್ತುಗಳಾಗಿದ್ದಾರೆ. ಒಂದನ್ನು ನೋಡಿ ಇನ್ನೊಂದು ಎತ್ತು ಓಡಿಸಿಕೊಂಡು ಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿರುವ ಅವರು, ಎರಡು ಎತ್ತುಗಳು ಊರು ಊರುಗಳನ್ನು ತಿರುಗುತ್ತಿವೆ. ನಾವು ಎರಡೂ ಕ್ಷೇತ್ರಗಳಲ್ಲಿ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡುತ್ತಾರೆ, ಹೀಗಾಗಿ ಎಲ್ಲವೂ ಹಳದಿಯಾಗಿಯೇ ಅವರಿಗೆ ಕಾಣುತ್ತದೆ. ಕಾಂಗ್ರೆಸ್ ಪಕ್ಷವು ಹಲವು ದಶಕಗಳ ಕಾಲ ರಾಜ್ಯದಲ್ಲಿ ಅಧಿಕಾರ ನಡೆಸಿದೆ. ಆದರೆ ಸಿದ್ದರಾಮಯ್ಯ ಎಲ್ಲವನ್ನೂ ರಾಜಕಾರಣದ ದೃಷ್ಟಿಯಿಂದಲೇ ನೋಡುತ್ತಿದ್ದಾರೆ. ಐಟಿ ದಾಳಿಯಾದರೆ ರಾಜಕಾರಣ ಎನ್ನುತ್ತಾರೆ. ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸಮಯದಲ್ಲಿ ಬಹಳಷ್ಟು ಘಟಾನುಘಟಿ ರಾಜಕಾರಣಿಗಳ ಮೇಲೆ ಸಿಬಿಐ ದಾಳಿ ನಡೆದಿದೆ. ಅದೆಲ್ಲಾ ರಾಜಕಾರಣನಾ? ಆ ದಾಳಿಗಳನ್ನು ಕಾಂಗ್ರೆಸ್ ಪಕ್ಷದವರೇ ಮಾಡಿಸಿದ್ದಾ? ದೇಶದ ಕಾನೂನಿಗೆ ಎಲ್ಲರೂ ಗೌರವ ಕೊಡಬೇಕು ಇದು ನಮ್ಮೆಲ್ಲರ ಜವಾಬ್ದಾರಿ ಎಂದು ಕಟೀಲ್ ಮಾತನಾಡಿದ್ದಾರೆ.
ಕುಸುಮಾ ವಿರುದ್ಧ ಎಫ್ಐಆರ್ ವಿಚಾರ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ಐಆರ್ ವಿಚಾರಕ್ಕೆ ಸಂಬಂದಿಸಿದಂತೆ ಮಾತನಾಡಿರುವ ಕಟೀಲ್ ಅವರು, ಚುನಾವಣಾ ಆಯೋಗ ಕೆಲವೊಂದು ನೀತಿ ನಿಯಮಗಳನ್ನು ಮಾಡಿದೆ. ಅವುಗಳನ್ನು ಯಾರೂ ಉಲ್ಲಂಘನೆ ಮಾಡಬಾರದು. ಕಾಂಗ್ರೆಸ್ ಪಕ್ಷವೂ ಹಲವು ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರ ನಡೆಸಿದೆ. ಎಲ್ಲವನ್ನೂ ರಾಜಕಾರಣದ ದೃಷ್ಟಿಯಿಂದ ಸಿದ್ದರಾಮಯ್ಯ ನೋಡುತ್ತಿದ್ದಾರೆ ಎಂದು ಆರೋಪಿಸಿರು.
Recommended Video
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಧ್ವೇಷದ ರಾಜಕಾರಣ ಮಾಡಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಸರ್ಕಾರ ಲೂಟಿ ಸರ್ಕಾರ ಎಂಬುದು ಜಗಜ್ಜಾಹೀರಾಗಿದೆ, ಇದನ್ನ ಸ್ವತಃ ಸಾರ್ವಜನಿಕರೇ ಹೇಳುತ್ತಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಂದಿಗೂ ಅಧಿಕಾರವಿಲ್ಲದೆ ಇದ್ದವರಲ್ಲ. ಅವರಲ್ಲಿ ಅಧಿಕಾರ ಇಲ್ಲದಿದ್ದಾಗ ಹೀಗೆ ವೃಥಾ ಆರೋಪದ ಮಾತುಗಳನ್ನು ಆಡುತ್ತಲೇ ಇರುತ್ತಾರೆ ಎಂದು ನಳೀನ್ ಕುಮಾರ್ ಕಟೀಲ್ ಅವರು ಹೇಳಿಕೆ ಕೊಟ್ಟಿದ್ದಾರೆ.