ಡಿಕೆಎಸ್ ಸಹೋದರರಿಗೆ ಸೋಲುಣಿಸಲು ಬಿಜೆಪಿ ತಂತ್ರ: ಯಶಸ್ವಿಯಾಗುವುದೇ?
Recommended Video
ಬೆಂಗಳೂರು, ಮಾರ್ಚ್ 12: ಗುಜರಾತ್ ವಿಧಾನಪರಿಷತ್ ಚುನಾವಣೆಯಿಂದ ಹಿಡಿದು ಇತ್ತೀಚಿನ ಲೋಕಸಭೆ ಉಪಚುನಾವಣೆ ವರೆಗೂ ಬಿಜೆಪಿಯನ್ನು ಕಾಡುತ್ತಲೇ ಬಂದಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸೋಲಿನ ರುಚಿ ತೋರಿಸಲು ಬಿಜೆಪಿ ಭಾರಿ ಯತ್ನಗಳನ್ನು ನಡೆಸುತ್ತಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧಿಸುತ್ತಾರೆ. ಅದು ಬಹುತೇಕ ಅಂತಿಮವೂ ಆಗಿದೆ. ಕಳೆದ ಬಾರಿಯೂ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಅವರು ಜಯ ಗಳಿಸಿದ್ದರು.
ಬೆಂಗಳೂರು ದಕ್ಷಿಣ: ಕಾಂಗ್ರೆಸ್ಸಿನಿಂದ ತೇಲಿಬಂದ ಅಚ್ಚರಿಯ ಎರಡು ಹೆಸರು
ಆದರೆ ಈ ಬಾರಿ ಅವರಿಗೆ ಹೇಗಾದರೂ ಮಾಡಿ ಸೋಲುಣಿಸಿ ಡಿ.ಕೆ.ಶಿವಕುಮಾರ್ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಬೇಕು ಎಂದು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ಅದು ಅಷ್ಟು ಸುಲಭವಿಲ್ಲ.
ಕಳೆದ ಬಾರಿ ರಾಮನಗರ ಉಪಚುನಾಣೆಯಲ್ಲಿ ಇದೇ ಡಿ.ಕೆ.ಸುರೇಶ್ ಅವರು ಬಿಜೆಪಿಯ ಶಾಸಕ ಅಭ್ಯರ್ಥಿಯನ್ನೇ ಹೈಜಾಕ್ ಮಾಡಿದ್ದರು. ಹಾಗಾಗಿ ಈ ಚುನಾವಣೆಯಲ್ಲಿ ಅವರಿಗೆ ಪ್ರತ್ಯುತ್ತರ ನೀಡುವ ಉತ್ಸಾಹದಲ್ಲಿ ಬಿಜೆಪಿ ಇದೆ. ಆದರೆ ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಬಾರಿ ಸಹ ಬಿಜೆಪಿ ಗೆದ್ದಿಲ್ಲ, ಇಲ್ಲಿ ಡಿ.ಕೆ.ಸುರೇಶ್ಗೆ ಸೋಲುಣಿಸುವುದು ಸುಲಭದ ಕಾರ್ಯವಲ್ಲ.
ಎಂ.ರುದ್ರೇಶ್ ಅವರನ್ನು ಕಣಕ್ಕಿಳಿಸುವ ಯೋಚನೆ
ಡಿ.ಕೆ.ಸುರೇಶ್ ಅವರಿಗೆ ಎದುರಾಳಿಯಾಗಿ ರಾಮನಗರ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್ ಅವರನ್ನು ಕಣಕ್ಕೆ ಇಳಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ರುದ್ರೇಶ್ ಅವರು ರಾಮನಗರದಲ್ಲಿ ಬಿಜೆಪಿಯನ್ನು ಸಂಘಟಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಅವರು ಸ್ವಲ್ಪ ಖ್ಯಾತಿಯನ್ನೂ ಗಳಿಸಿದ್ದಾರೆ. ಅಲ್ಲದೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇರುವ ಲಿಂಗಾಯತರ ಮತಗಳು ರುದ್ರೇಶ್ ಅವರ ಪರ ಬೀಳುತ್ತವೆ ಎಂಬ ಲೆಕ್ಕಾಚಾರ ಸಹ ಬಿಜೆಪಿ ಹಾಕುತ್ತಿದೆ. ಆದರೆ ಬೆಂಗಳೂರು ಗ್ರಾಮಾಂತರಕ್ಕೆ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.
ಮಾಜಿ ಸಂಸದೆ ತೇಜಸ್ವಿನಿ ಗೌಡ ಟಿಕೆಟ್ ಆಕಾಂಕ್ಷಿ
ಮಾಜಿ ಸಂಸದೆ ತೇಜಸ್ವಿನಿ ಗೌಡ ಅವರು ಸಹ ಟಿಕೆಟ್ ಆಕಾಂಕ್ಷಿಯಾಗಿದ್ದು, ಡಿ.ಕೆ.ಸುರೇಶ್ ಅವರ ಎದುರಾಳಿಯಾಗಿ ಸ್ಪರ್ಧಿಸಲು ಇವರು ಸಹ ಉತ್ಸುಕರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರೇ ತೇಜಸ್ವಿನಿ ಗೌಡ ಅವರನ್ನು ರಾಜಕೀಯಕ್ಕೆ ಕರೆತಂದಿದ್ದರು. ಆದರೆ ಆ ನಂತರ ಅವರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು.
ಬಿಜೆಪಿಯ 6 ಹಾಲಿ ಸಂಸದರಿಗೆ ಟಿಕೆಟ್ ನೀಡಲು ವಿರೋಧ
ತೇಜಸ್ವಿನಿ ಗೌಡ ಟಿಕೆಟ್ ಆಕಾಂಕ್ಷಿ
ತೇಜಸ್ವಿನಿ ಅವರು ಒಕ್ಕಲಿಗ ಸಮುದಾಯದವರಾಗಿದ್ದು, ಈ ಮುಂಚೆ ಇದೇ ಕ್ಷೇತ್ರದಿಂದ ಗೆದ್ದಿರುವ ಅನುಭವ ಅವರಿಗಿದೆ. ಅಲ್ಲದೆ ಮಹಿಳಾ ಅಭ್ಯರ್ಥಿ ಆಗಿರುವ ಕಾರಣ ಮಹಿಳಾ ಮತದಾರರನ್ನು ಸೆಳೆಯುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರವಿದೆ.
ಒಕ್ಕಲಿಗ ಸಮುದಾಯದ ಯೋಗೀಶ್ವರ್
ಚೆನ್ನಪಟ್ಟಣದಲ್ಲಿ ಕುಮಾರಸ್ವಾಮಿ ವಿರುದ್ಧ ಸೋಲನ್ನು ಅನುಭವಿಸಿರುವ ಸಿ.ಪಿ.ಯೋಗೀಶ್ವರ್ ಅವರೂ ಸಹ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಒಕ್ಕಲಿಗ ಸಮುದಾಯದವರಾಗಿರುವ ಯೋಗೀಶ್ವರ್ ಅವರಿಗೆ ಚನ್ನಪಟ್ಟಣದಲ್ಲಿ ಪ್ರತ್ಯೇಕ ಮತಬ್ಯಾಂಕ್ ಇದೆ.
ಲೋಕಸಭೆ ಚುನಾವಣೆ 2019: ಬೆಂಗಳೂರು ಗ್ರಾಮಾಂತರ ಕ್ಷೇತ್ರ ಪರಿಚಯ
ಕಳೆದ ಚುನಾವಣೆಯಲ್ಲಿ ಸೋತಿದ್ದ ಯೋಗೀಶ್ವರ್
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯೋಗೇಶ್ವರ್ ಅವರು ಸೋಲನುಭವಿಸಿರುವ ಕಾರಣ ಅನುಕಂಪದ ಮತಗಳೂ ಸಹ ಯೋಗೀಶ್ವರ್ ಪರವಾಗಿ ಬೀಳಬಹುದು ಎಂಬ ಲೆಕ್ಕಾಚಾರ ಸಹ ಬಿಜೆಪಿಯಲ್ಲಿ ನಡೆಯುತ್ತಿದೆ.
ಡಿ.ಕೆ.ಸುರೇಶ್ ಗೆಲ್ಲುವ ಅಭ್ಯರ್ಥಿ
ಆದರೆ ಡಿ.ಕೆ.ಸುರೇಶ್ ಅವರೇ ಇಲ್ಲಿ ಗೆಲ್ಲುವ ಅಭ್ಯರ್ಥಿ ಎಂದು ಹೇಳಲಾಗಿತ್ತಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಶಕ್ತವಾಗಿಲ್ಲ, ಅಲ್ಲದೆ ಈ ಬಾರಿ ಮೈತ್ರಿ ಬೇರೆ ಮಾಡಿಕೊಂಡಿರುವ ಕಾರಣ ಸುರೇಶ್ ಅವರು ಯಾವುದೇ ಸಮಸ್ಯೆಗಳೇ ಇಲ್ಲದೆ ಸುಲಭವಾಗಿ ಚುನಾವಣೆ ಗೆಲ್ಲಲಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.