ಬಿಬಿಎಂಪಿ: ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಗೆ ಮರು ನಾಮಕರಣ ನಿರ್ಣಯ ರದ್ದು!
ಬೆಂಗಳೂರು, ಜ. 02: ಬೆಂಗಳೂರಿನ ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಗೆ ಮರು ನಾಮಕರಣ ಪ್ರಕ್ರಿಯೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಡೆಹಿಡಿದಿದೆ. ಮುಸ್ಲಿಂ ಸಮುದಾಯ ಬಹುಸಂಖ್ಯಾತರಿರುವ 11 ಬೀದಿಗಳಿಗೆ ಮುಸ್ಲಿಂ ಸಮುದಾಯದ ನಾಯಕರ ಹೆಸರನ್ನಿಟ್ಟು ಮರು ನಾಮಕರಣ ಮಾಡಲು ಬಿಬಿಎಂಪಿ ಮುಂದಾಗಿತ್ತು. ಆದರೆ ಅದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ನಿರ್ಧಾರಕ್ಕೆ ಬಂದಿದೆ.
ಮುಸ್ಲಿಂ ನಾಯಕರ ಹೆಸರನ್ನಿಟ್ಟು ಮರುನಾಮಕರಣ ಮಾಡುವ ಬಿಬಿಎಂಪಿ ನಿರ್ಧಾರಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಆಕ್ಷೇಪ ವ್ಯಕ್ತಪಡಿಸಿ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದರು. ಬೆಂಗಳೂರಿನ ಪಾದರಾಯನಪುರ ಪ್ರದೇಶದ ಬೀದಿ ಹಾಗೂ ರಸ್ತೆಗಳಿಗೆ ಮರು ನಾಮಕರಣ ಮಾಡುವುದನ್ನು ತೇಜಸ್ವಿಸೂರ್ಯ ವಿರೋಧಿಸಿದ್ದರು. ಅವರಿಗೆ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಬೆಂಬಲ ವ್ಯಕ್ತಪಡಿಸಿದ್ದರು. ಜೊತೆಗೆ ಬೆಂಗಳೂರಿನ ಮತ್ತೊಬ್ಬ ಬಿಜೆಪಿ ಸಂಸದ ಪಿ.ಸಿ. ಮೋಹನ್ ಅವರೂ ಪತ್ರ ಬರೆದಿದ್ದರು.
ಕಳೆದ 2021ರ ಸೆಪ್ಟೆಂಬರ್ 10 ರಂದು, ಬಿಬಿಎಂಪಿ ಕರ್ನಾಟಕ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿತ್ತು. ಮುಸ್ಲಿಂ ಸಮುದಾಯಕ್ಕೆ ಸೇರಿದ ಪೈಲ್ವಾನ್ಗಳು, ಹಾಜಿಗಳು ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಇತರ ವ್ಯಕ್ತಿಗಳ ಹೆಸರುಗಳನ್ನು ಪಾದರಾಯನಪುರದ 11 ಬೀದಿ, ರಸ್ತೆಗಳಿಗೆ ಮರು ನಾಮಕರಣಗೊಳಿಸುವ ಪ್ರಸ್ತಾಪವನ್ನಿಟ್ಟಿತ್ತು. ಕಳೆದ ಆಗಸ್ಟ್ ತಿಂಗಳಿನಲ್ಲಿ ಕೊರೊನಾ ವಾರಿಯರ್ಸ್ ಹಲ್ಲೆ ನಡೆದು, ಬಳಿಕ ಗಲಭೆ ಸೃಷ್ಟಿಯಾದ್ದು, ಇದೇ ಪಾದರಾಯನಪುರ ಪ್ರದೇಶದಲ್ಲಿ.
ನಿರ್ಣಯ ವಿರೋಧಿಸಿ ಪತ್ರ
ಪಾಲಿಕೆಯ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಂಸದ ತೇಜಸ್ವಿ ಸೂರ್ಯ ಅವರು, ಈ ಬಗ್ಗೆ ಡಿಸೆಂಬರ್ 31ರಂದು ಬಿಬಿಎಂಪಿಗೆ ಪತ್ರ ಬರೆದಿದ್ದರು. ಪಾಲಿಕೆಯ ಈ ನಿರ್ಧಾರ, ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ ಅವರ ಎರಡು ರಾಷ್ಟ್ರಗಳ ಸಿದ್ಧಾಂತದ ಕೋಮು ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ತೀವ್ರವಾಗಿ ಆಕ್ಷೇಪಿಸಿದ್ದರು. ಜೊತೆಗೆ ಮುಸ್ಲಿಮೇತರ ಸಾಧಕರಿಗೆ ಕೊರತೆಯಿಲ್ಲ. ಹೀಗಾಗಿ ಮರು ನಾಮಕರಣ ವಿಚಾರ ಸಾರ್ವಜನಿಕ ಚರ್ಚೆಯ ಬಳಿಕ ಅಂತಿಮವಾಗಬೇಕು ಎಂದು ಸಂಸದ ಸೂರ್ಯ ಅವರು ಆಯುಕ್ತ ಮಂಜುನಾಥ್ ಪ್ರಸಾದ್ ಅವರಲ್ಲಿ ಆಗ್ರಹಿಸಿದ್ದರು.
ಅನಂತ್ ಕುಮಾರ್ ವಿರೋಧ
ರಸ್ತೆ ಹಾಗೂ ಬೀದಿಗಳಿಗೆ ಮುಸ್ಲಿಮ್ ನಾಯಕರ ಹೆಸರುಗಳನ್ನು ನಾಮಕರಣ ಮಾಡುವ ಬಿಬಿಎಂಪಿ ನಿರ್ಧಾರವನ್ನು ತಾವು ತೀವ್ರವಾಗಿ ವಿರೋಧಿಸುವುದಾಗಿ ಉತ್ತರ ಕನ್ನಡ ಸಂಸದ, ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಬಿಬಿಎಂಪಿ ಆಯುಕ್ತರಿಗೆ ಬರೆದಿದ್ದ ಮತ್ತೊಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ರಾಜ್ಯದ ಇತರ ಭಾಗಗಳಲ್ಲಿನ ಸ್ಥಳೀಯ ಸಂಸ್ಥೆಗಳು ಇದೇ ಕ್ರಮವನ್ನು ಅನುಸರಿಸಿದರೆ, ಅದು ಕೋಮು ಸೌಹಾರ್ದತೆಗೆ ಅಡ್ಡಿಯಾಗುತ್ತದೆ ಎಂದು ಅನಂತ್ ಕುಮಾರ್ ಹೆಗಡೆ ಅವರು ಎಚ್ಚರಿಸಿದ್ದರು.
ಬಿಬಿಎಂಪಿ ಕೌನ್ಸಿಲ್ ನಿರ್ಧಾರ
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಧಿಕಾರಧಿಯಲ್ಲಿ ಮರು ನಾಮಕರಣ ಮಾಡುವ ತೀರ್ಮಾನವನ್ನು ಬಿಬಿಎಂಪಿ ಕೌನ್ಸಿಲ್ ತೆಗೆದುಕೊಂಡಿತ್ತು. ಬಿಬಿಎಂಪಿಯ ಆಡಳಿತ ಚುಕ್ಕಾಣಿ ಹಿಡಿದಿದ್ದ ಮೈತ್ರಿಕೂಟದ ಅಧಿಕಾರಾವಧಿ ಮುಗಿಯುವ ಮೊದಲು ಅವರು ಹಲವಾರು ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು. ಅವುಗಳಲ್ಲಿ 11 ರಸ್ತೆಗಳ ಮರುನಾಮಕರಣವೂ ಸೇರುತ್ತು. ಬಿಬಿಎಂಪಿ ನಡಾವಳಿಯ ಪ್ರಕಾರ, ಕೌನ್ಸಿಲ್ ತೆಗೆದುಕೊಳ್ಳುವ ನಿರ್ಣಯ ಅಂಗೀಕರಿಸಿದ ಬಳಿಕ ಸಾರ್ವಜನಿಕ ಅಧಿಸೂಚನೆಯನ್ನು ಹೊರಡಿಸಬೇಕು.
ಬಿಬಿಎಂಪಿ ಆಯುಕ್ತರ ಶಿಫಾರಸು
ಸಾರ್ವಜನಿಕ ಅಧಿಸೂಚನೆ ಹೊರಡಿಸಿದ ಬಳಿಕ ಸಂಸದರಾದ ತೇಜಸ್ವಿ ಸೂರ್ಯ, ಅನಂತ್ ಕುಮಾರ್ ಹೆಗಡೆ ಹಾಗೂ ಪಿ.ಸಿ. ಮೋಹನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಬಿಎಂಪಿ ಕೌನ್ಸಿಲ್ ಅಂಗೀಕರಿಸುವ ನಿರ್ಣಯವನ್ನು ರದ್ದುಗೊಳಿಸಲು ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಲ್ಲಿ ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಇದೀಗ ಸಂಸದರ ವಿರೋಧದ ಹಿನ್ನೆಲೆಯಲ್ಲಿ ಮರುನಾಮಕರಣ ಪ್ರಕ್ರಿಯೆಯನ್ನು ರದ್ದುಗೊಳಿಸಲು ಬಿಬಿಎಂಪಿ ಆಯುಕ್ತ ಪ್ರಸಾದ್ ಅವರು ಶಿಫಾರಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ.