"ಈ ಸಾವು-ನೋವಿಗೆ ಕೊರೊನಾ ದೂರಬೇಕೇ ಹೊರತು, ಮೋದಿಯನ್ನಲ್ಲ''
ಬೆಂಗಳೂರು, ಮೇ 13: ಸಾವು, ಸಾಂಕ್ರಾಮಿಕ ರೋಗಗಳನ್ನು ಮುಂದಿಟ್ಟುಕೊಂಡು ಕೆಲವರು ವಿಕೃತಾನಂದ ಪಡುತ್ತಿದ್ದಾರೆ. ರೋಗದ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ವಿದೇಶಗಳ ಜನಸಂಖ್ಯೆ ಹಾಗೂ ಮರಣ ಪ್ರಮಾಣ, ಭಾರತದ ಜನಸಂಖ್ಯೆ ಮತ್ತು ಮರಣ ಪ್ರಮಾಣ ಎಲ್ಲವನ್ನು ಹೋಲಿಕೆ ಮಾಡಿ ನೋಡಲಿ. ಇಟಲಿಯಲ್ಲಿ ನರೇಂದ್ರ ಮೋದಿ ಪ್ರಧಾನಿಯಲ್ಲ. ಈಗ ನಾವು ಈ ಸಾವು-ನೋವಿಗೆ ಚೀನಾ ವೈರಸ್ ಅನ್ನು ದೂರಬೇಕೇ ಹೊರತು, ಪ್ರಧಾನಿ ನರೇಂದ್ರ ಮೋದಿಯವರನ್ನಲ್ಲ ಎಂದರು.
ಬಾಧಿಸುತ್ತಿರುವ ಈ ಕೊರೊನಾ ಸೋಂಕು ಪ್ರಮಾಣ ಹೆಚ್ಚುತ್ತಿರುವ ಕಾರಣ ನಮ್ಮ ಸಿದ್ಧತೆ ಸಾಕಾಗಿಲ್ಲ ಎನ್ನುವುದನ್ನು ನಾನೂ ಒಪ್ಪುತ್ತೇನೆ. ಆರಂಭದಲ್ಲಿ ಕೆಲವು ಗೊಂದಲ ಇದ್ದಿದ್ದು ನಿಜ. ಆದರೆ ಈಗ ಎಲ್ಲರಿಗೂ ಜವಾಬ್ದಾರಿ ನೀಡಲಾಗಿದೆ. ಅವರು ಸಮರ್ಥವಾಗಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮನುಷ್ಯತ್ವ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇವೆ, ತಕ್ಷಣ ಎಲ್ಲವನ್ನು ಉತ್ಪಾದನೆ ಮಾಡಲು ಆಗುತ್ತಿಲ್ಲ ಎಂದು ಕೊರೊನಾ ಲಸಿಕೆ ಕೊರತೆಯ ಬಗ್ಗೆ ಬೆಂಗಳೂರಿನಲ್ಲಿ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದರು.
ಸಿಎಂ ಯಡಿಯೂರಪ್ಪ ಅವರು ಯಾವಾಗಲೂ ನಮ್ಮ ನಾಯಕರೇ, ಯಡಿಯೂರಪ್ಪ ಅವರನ್ನು ಖಳನಾಯಕ ಅಂತ ನಾವು ಯಾವತ್ತೂ ಭಾವಿಸಿಲ್ಲ. ವಿರೋಧ ಪಕ್ಷದ ನಾಯಕರು ನಮ್ಮ ನಾಯಕರನ್ನು ನಾಯಕ ಎಂದು ಒಪ್ಪಿದ್ದಾರೆ ಅವರ ಅಭಿಪ್ರಾಯ ಬದಲಾಗದೆ ಇರಲಿ ಎಂದರು.
Recommended Video
ವಿರೋಧ ಪಕ್ಷದ ನಾಯಕರಿಗೆ ಸಿಎಂ ಯಡಿಯೂರಪ್ಪ ಕೆಲವು ಸಂದರ್ಭದಲ್ಲಿ ನಾಯಕನಾಗಿ, ಕೆಲವು ಸಂದರ್ಭದಲ್ಲಿ ಖಳನಾಯಕರಾಗಿ ಕಾಣುತ್ತಾರೆ ಅವರ ಅಭಿಪ್ರಾಯ ಹಾಗೆ ಇರಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅಭಿಪ್ರಾಯಪಟ್ಟರು.