ಡಿಕೆ ಶಿವಕುಮಾರ್ ಕಾಲಿಗೆ ನಮಸ್ಕರಿಸಿದ ಸಂಸದ ಪ್ರತಾಪ್ ಸಿಂಹ
Recommended Video
ಬೆಂಗಳೂರು, ಮೇ 1: ಮಾಜಿ ಕೇಂದ್ರ ಸಚಿವ, ಹಿರಿಯ ರಾಜಕಾರಣ ಎಸ್ ಎಂ ಕೃಷ್ಣ ಅವರ ಜನ್ಮದಿನದ ಪ್ರಯುಕ್ತ ಅವರ ನಿವಾಸಕ್ಕೆ ತೆರಳಿದ್ದ ಸಚಿವ ಡಿ.ಕೆ. ಶಿವಕುಮಾರ್ ಅವರ ಕಾಲಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ನಮಸ್ಕರಿಸಿದ್ದಾರೆ.
ಬದ್ಧ ರಾಜಕೀಯ ಎದುರಾಳಿಗಳಾದ ಡಿಕೆ ಶಿವಕುಮಾರ್ ಮತ್ತು ಪ್ರತಾಪ್ ಸಿಂಹ ಈ ರೀತಿ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ.
ಜೆಡಿಎಸ್ ಮಾತ್ರವಲ್ಲ, ಕಾಂಗ್ರೆಸ್ ಮತಗಳು ಕೂಡ ನನಗೆ: ಪ್ರತಾಪ್ ಸಿಂಹ
ಬುಧವಾರ ಎಸ್ ಎಂ ಕೃಷ್ಣ ಅವರ ಹುಟ್ಟುಹಬ್ಬದ ಸಲುವಾಗಿ ಅವರಿಗೆ ಶುಭಾಶಯ ತಿಳಿಸಲು ಸದಾಶಿವನಗರದಲ್ಲಿರುವ ಕೃಷ್ಣ ಅವರ ಮನೆಗೆ ಡಿ.ಕೆ. ಶಿವಕುಮಾರ್ ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಸಂಸದ ಪ್ರತಾಪ್ ಸಿಂಹ ಬಗ್ಗಿ ಕಾಲಿಗೆ ನಮಸ್ಕರಿಸಿದರು. ಇದಕ್ಕೆ ಪ್ರತಿಯಾಗಿ ಮುಗುಳ್ನಕ್ಕ ಡಿ.ಕೆ. ಶಿವಕುಮಾರ್, ಅಲ್ಲಿಂದ ಕೃಷ್ಣ ಅವರ ಮನೆ ಪ್ರವೇಶಿಸಿದರು.
ಕೃಷ್ಣ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, 'ಎಸ್.ಎಂ. ಕೃಷ್ಣ ನನ್ನ ತಂದೆ ಸಮಾನರು. ಅವರೊಂದಿಗೆ ರಹಸ್ಯ ಮಾತುಕತೆಯೇನೂ ನಡೆಸಿಲ್ಲ. ನನ್ನ ಬದುಕು ತೆರೆದ ಪುಸ್ತಕವಿದ್ದಂತೆ. ಏನೇ ಮಾತನಾಡುವುದಿದ್ದರೂ ಬಹಿರಂಗವಾಗಿಯೇ ಮಾತನಾಡುತ್ತೇನೆ. ನಾನು ಯಾರಿಗೂ ಹೆದರುವ ಅವಶ್ಯಕತೆಯಿಲ್ಲ' ಎಂದರು.
ಸತೀಶ್ ಜಾರಕಿಹೊಳಿ ಸಾಹುಕಾರರು, ನಾವು ಪ್ರಜೆಗಳು: ಡಿಕೆ ಶಿವಕುಮಾರ್
ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಜಿಟಿ ದೇವೇಗೌಡ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಅವರು, 'ನಾನು ಈಗ ಕಾಂಗ್ರೆಸ್ ವಕ್ತಾರನಲ್ಲ. ಕೇವಲ ಸಚಿವನಷ್ಟೇ. ನನ್ನ ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ ಪ್ರತಿಕ್ರಿಯೆ ನೀಡುತ್ತೇನೆ. ಬೇರೆಯವರ ವಿಷಯಗಳಿಗೆಲ್ಲ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಮೈತ್ರಿ ಧರ್ಮ ಪಾಲಿಸಬೇಕು. ನಾವಂತೂ ಪಾಲಿಸಿದ್ದೇವೆ. ಅವರೂ ಪಾಲಿಸಿದ್ದಾರೆ' ಎಂದು ಹೇಳಿದರು.