ರಾಜ್ಯ ಬಿಜೆಪಿಯಲ್ಲಿ ಮತ್ತೆ ಸಂಚಲನ ಸೃಷ್ಟಿಸಿದ ಟಿಪ್ಪು ಸುಲ್ತಾನ್!
ಬೆಂಗಳೂರು, ಆ. 27: ಟಿಪ್ಪು ವಿಚಾರ ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ಮುನ್ನೆಲೆಗೆ ಬಂದಿದೆ. ಟಿಪ್ಪು ಜಯಂತಿಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿಕೊಂಡು ಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಟಿಪ್ಪು ಜಯಂತಿ ರದ್ದು ಮಾಡುವುದಾಗಿ ಪ್ರಣಾಳಿಕೆಯಲ್ಲಿ ಬಿಜೆಪಿ ಹೇಳಿಕೊಂಡಿತ್ತು. ಅಧಿಕಾರಕ್ಕೆ ಬಂದ ಮೇಲೆ ಭರವಸೆ ಕೊಟ್ಟಂತೆ ರಾಜ್ಯ ಬಿಜೆಪಿ ನಡೆದುಕೊಂಡಿದೆ.
Recommended Video
ಆದರೂ ಟಿಪ್ಪು ವಿಚಾರವಾಗಿ ರಾಜ್ಯ ಬಿಜೆಪಿಗೆ ಆಗಾಗ ಹಿನ್ನೆಡೆಯಾಗಿರುವುದು ಸುಳ್ಳಲ್ಲ. ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ವಿಧಾನಸೌಧ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಾಷಣ ಮಾಡಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರನ್ನು ಹೊಗಳಿದ್ದರು. ಅದು ಟಿಪ್ಪುವನ್ನು ತೀವ್ರವಾಗಿ ವಿರೋಧಿಸಿಕೊಂಡು ಬಂದಿದ್ದ ರಾಜ್ಯ ಬಿಜೆಪಿಗೆ ತೀವ್ರ ಇರುಸು ಮುರುಸನ್ನುಂಟು ಮಾಡಿತ್ತು. ಇದೀಗ ಬಿಜೆಪಿ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಕೊಟ್ಟಿರುವ ಮತ್ತೊಂದು ಹೇಳಿಕೆ ಬಿಜೆಪಿಯಲ್ಲಿ ಮತ್ತೊಮ್ಮೆ ಸಂಚಲವನ್ನುಂಟು ಮಾಡಿದೆ.
ಟಿಪ್ಪು ಈ ಮಣ್ಣಿನ ಮಗ
ವಿಧಾನಸೌಧದಲ್ಲಿ ಮಾತನಾಡಿದ್ದ ಮಾಜಿ ಸಚಿವ, ಬಿಜೆಪಿ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು, ಬೆಳಗಾವಿ ಸುವರ್ಣ ಸೌಧದಲ್ಲಿ ಸಂಗ್ಗೊಳ್ಳಿ ರಾಯಣ್ಣ ಪ್ರತಿಮೆಗೆ ಸ್ಥಾಪನೆ ಬಗ್ಗೆ ಪ್ರತಿಕ್ರಿಯೆ ಕೊಡುವಾಗ, ಸಂಗ್ಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಕಮಾಂಡರ್. ಅದೇ ರೀತಿ ಟಿಪ್ಪು ಸುಲ್ತಾನ್ ಕೂಡ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ ಎಂದಿದ್ದರು. ನಿಮ್ಮ ಪಕ್ಷದವರು ಟಿಪ್ಪು ವಿರೋಧಿಗಳು. ನೀವು ಹೊಗಳುತ್ತಿದ್ದೀರಿ ಎಂದು ಮಾಧ್ಯಮದವರ ಮರು ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ವಿಶ್ವನಾಥ್ ಅವರು, ಹಾಗೆಲ್ಲಾ ಹೇಳಬಾರದು. ಟಿಪ್ಪು ಈ ನೆಲದ ಮಗ. ವೀರ ಹೋರಾಟಗಾರ.
ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ದೊಡ್ಡದು, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಎಚ್.ವಿಶ್ವನಾಥ್
ಪಠ್ಯದಲ್ಲಿ ಟಿಪ್ಪು ಪಾಠವನ್ನು ಕೈ ಬಿಟ್ಟಿಲ್ಲ. ಐದನೇ ತರಗತಿಯಿಂದ ಏಳನೆ ತರಗತಿಗೆ ಹಾಕಿದ್ದಾರೆ. ಗಾಂಧೀಜಿ ಅವರಿಂದ ಟಿಪ್ಪು ತನಕ ವಿದ್ಯಾರ್ಥಿಗಳು ಎಲ್ಲವನ್ನೂ ಓದಬೇಕು. ಆಗಲೇ ಎಲ್ಲರ ರಕ್ತ ಒಂದೇ ರೀತಿ ಆಗುವುದು ಎಂದು ಹೆಚ್ ವಿಶ್ವನಾಥ್ ಹೇಳಿಕೆ ಕೊಟ್ಟಿದ್ದರು. ಇದೀಗ ಬಿಜೆಪಿ ವಲಯದಲ್ಲಿ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ವಿವರಣೆ ಕೇಳುತ್ತೇವೆ
ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ವಿವರಣೆ ಕೇಳುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿರುವ ಅವರು, ವಿಶ್ವನಾಥ್ ಅವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅವರ ಹೇಳಿಕೆ ವೈಯಕ್ತಿಕವಾದದ್ದು, ಬಿಜೆಪಿಗೆ ಸಂಬಂಧ ಇಲ್ಲ.
ಟಿಪ್ಪು ವಿಚಾರದಲ್ಲಿ ಬಿಜೆಪಿ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದಿದೆ. ಈಗಲೂ ಅದಕ್ಕೆ ಬದ್ಧವಾಗಿದ್ದೇವೆ. ಅವರ ಹೇಳಿಕೆಗೆ ಪೂರಕವಾದ ವಿವರಣೆ ನಾವು ಕೇಳುತ್ತೇವೆ ಎಂದಿದ್ದಾರೆ. ಹೀಗಾಗಿ ಟಿಪ್ಪು ವಿಚಾರವಾಗಿ ಬಿಜೆಪಿಯಲ್ಲಿಯೇ ಚರ್ಚೆ ಶುರುವಾಗಿದೆ.
ಅವಶ್ಯಕತೆ ಇರಲಿಲ್ಲ
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕೂಡ ಎಚ್. ವಿಶ್ವನಾಥ್ ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ. ಟಿಪ್ಪು ವಿಚಾರ, ಮುಗಿದ ವಿಚಾರ. ಈ ನೆಲದಲ್ಲಿ ಅನೇಕರು ಹುಟ್ಟಿದ್ದಾರೆ. ಅನೇಕರು ಸತ್ತಿದ್ದಾರೆ. ಎಚ್. ವಿಶ್ವನಾಥ್ ಅವರು ಈಗಷ್ಟೇ ಬಿಜೆಪಿಗೆ ಬಂದಿದ್ದಾರೆ. ಅವರು ಈ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ. ನಾನು ವಿಶ್ವನಾಥ್ ಅವರ ಜೊತೆಗೆ ಮಾತನಾಡುತ್ತೇನೆ ಎಂದಿದ್ದಾರೆ.
ವಿಶ್ವನಾಥ್ ಹೇಳಿದ್ದು ಸತ್ಯ
ಟಿಪ್ಪು ಸುಲ್ತಾನ್ ಕುರಿತಂತೆ ವಿಶ್ವನಾಥ್ ಹೇಳಿಕೆ ವಿರೋಧ ಪಕ್ಷಗಳಿಗೆ ಆಹಾರವಾಗಿದೆ. ಈ ಬಗ್ಗೆ ಸಂಸದ ಡಿ.ಕೆ. ಸುರೇಶ್ ಅವರು ಮಾತನಾಡಿ, ವಿಶ್ವನಾಥ್ ಅವರು ಹೇಳಿರೋದು ಸತ್ಯ. ಸಿಎಂ ಯಡಿಯೂರಪ್ಪ ಅವರು ಹೇಳಿದ್ದೂ ಸತ್ಯ. ಚುನಾವಣೆ ದೃಷ್ಟಿ ಇಟ್ಟುಕೊಂಡು ಇತಿಹಾಸ ಬದಲಾಯಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ವಿಶ್ವನಾಥ್ ಅವರು ಹೇಳಿರುವ ಮಾತನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಸಿಎಂ ಯಡಿಯೂರಪ್ಪ ಹಿಂದೆ ಟಿಪ್ಪು ಜಯಂತಿ ಮಾಡಿದ್ದೂ ಗೊತ್ತಿದೆ. ರಾಷ್ಟ್ರಪತಿಗಳು ಟಿಪ್ಪು ಹೊಗಳಿದ್ದನ್ನು ಅಲ್ಲಗಳೆಯೋದಕ್ಕೂ ಆಗುವುದಿಲ್ಲ.
ಇತಿಹಾಸ ತಿರುಚುವ, ಕುಮ್ಮಕ್ಕು ಕೊಡುವುದು ನಡೆದಿದೆ. ಜನರ ಭಾವನೆ ಬೇರೆಡೆ ಸೆಳೆಯುವ ಪ್ರಯತ್ನ ನಡೆದಿದೆ. ಟಿಪ್ಪು ಈ ದೇಶಕ್ಕೆ ರಾಜ್ಯಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಆಚರಣೆಗಳೂ ಕೂಡ ಮುಂದುವರೆಯಬೇಕು ಎಂದು ಬೆಂಗಳೂರಿನಲ್ಲಿ ಸಂಸದ ಡಿ.ಕೆ. ಸುರೇಶ್ ಅವರು ಹೇಳಿಕೆ ಕೊಟ್ಟಿದ್ದಾರೆ.