ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಪರಮೇಶ್ವರ್
ಬೆಂಗಳೂರು, ಜುಲೈ 02: ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ ಎಂದು ಆ ಪಕ್ಷದ ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ, ಅವರನ್ನು ಅವಶ್ಯಕತೆ ಬಿದ್ದಾಗ ಕರೆಸಿಕೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಅವರದ್ದೇ ಆದ ರಣನೀತಿ ಇದೆ, ಈ ಎರಡು ರಾಜೀನಾಮೆ ಹಿಂದೆ ಬಿಜೆಪಿಯ ಕೈವಾಡವಿದೆ, ಸಿಎಂ ಅವರು ವಿದೇಶಕ್ಕೆ ಹೋದಾಗಲೇ ಈ ಘಟನೆ ಆಗಿರುವುದು ಕಾಕತಾಳೀಯ ಎಂದು ಅವರು ಹೇಳಿದರು.
ರಮೇಶ್ ಜಾರಕಿಹೊಳಿ ಹೆಗಲ ಮೇಲೆ ಬಿಜೆಪಿ ಬಂದೂಕು, ಮೈತ್ರಿಗೆ ಗುರಿ
ರಿವರ್ಸ್ ಆಪರೇಷನ್ ಮಾಡುವುದಾಗಿ ಈಗಾಗಲೇ ಕಾಂಗ್ರೆಸ್ ಪಕ್ಷವು ಬಿಜೆಪಿಗೆ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೆ ಪರಮೇಶ್ವರ್ ಅವರು ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎನ್ನುತ್ತಿರುವುದು ಅನುಮಾನ ಮೂಡಿಸಿದೆ.
ಮುಂದುವರೆದು ಮಾತನಾಡಿರುವ ಪರಮೇಶ್ವರ್, ಸಚಿವ ಸ್ಥಾನ ಸಿಗದೇ ಅತೃಪ್ತವಾಗಿರುವ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ಬಿಟ್ಟುಕೊಡಲು ಹಿರಿಯ ಸಚಿವರು ಸಿದ್ಧವಿದ್ದಾರೆ ಎಂದು ಮಹತ್ವದ ಹೇಳಿಕೆಯನ್ನು ಡಿಸಿಎಂ ಪರಮೇಶ್ವರ್ ನೀಡಿದ್ದಾರೆ.
'ಕೆಲವು ಹಿರಿಯರು ಸಚಿವ ಸ್ಥಾನ ತೊರೆಯಲು ಸಿದ್ಧರಿದ್ದಾರೆ'
ಕೆಲವು ಹಿರಿಯ ಸಚಿವರು ತಮ್ಮ ಸ್ಥಾನ ತ್ಯಜಿಸಲು ಸಿದ್ಧರಿದ್ದಾರೆ, ಆದರೆ ಹೈಕಮಾಂಡ್ನಿಂದ ಆದೇಶ ಬಂದರೆ ಮಾತ್ರ ಬದಲಾವಣೆ ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.
ನಾಲ್ವರು ಶಾಸಕರ ಕಳೆದುಕೊಂಡಿರುವ ಕಾಂಗ್ರೆಸ್
ಈಗಾಗಲೇ ಉಮೇಶ್ ಜಾಧವ್, ರೋಶನ್ ಬೇಗ್ ಸೇರಿ ನಾಲ್ವರು ಶಾಸಕರನ್ನು ಕಳೆದುಕೊಂಡಿರುವ ಕಾಂಗ್ರೆಸ್ ಇನ್ನಷ್ಟು ಶಾಸಕರನ್ನು ಕಳೆದುಕೊಳ್ಳುವ ಆತಂಕದಲ್ಲಿದೆ ಹಾಗಾಗಿ ಅತೃಪ್ತರಿಗೆ ಸಚಿವ ಸ್ಥಾನ ನೀಡಲು ಸಜ್ಜಾಗಿದೆ.
ರಮೇಶ್ ಜಾರಕಿಹೊಳಿ ದೆಹಲಿಗೆ, ರಾಜ್ಯ ರಾಜಕಾರಣ ಕ್ಲೈಮ್ಯಾಕ್ಸ್ಗೆ?
ಇಬ್ಬರೂ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದರು: ಪರಮೇಶ್ವರ್
ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಗೆ ಸ್ಪಷ್ಟ ಕಾರಣ ತಿಳಿದಿಲ್ಲ, ಈ ಇಬ್ಬರೂ ಬಿಜೆಪಿಯ ಸಂಪರ್ಕದಲ್ಲಿ ಇದ್ದರು, ಈ ಎರಡು ರಾಜೀನಾಮೆ ಹಿಂದೆ ಬಿಜೆಪಿಯ ಕೈವಾಡ ಇರುವುದು ಸ್ಪಷ್ಟ ಎಂದು ಪರಮೇಶ್ವರ್ ಹೇಳಿದ್ದಾರೆ.
'ಸಂಪುಟ ಉಪಸಮಿತಿಯೊಂದಿಗೆ ಮಾತನಾಡಬೇಕಿತ್ತು'
ಆನಂದ್ ಸಿಂಗ್ ಅವರಿಗೆ ಜಿಂದಾಲ್ ವಿಷಯವಾಗಿ ಭಿನ್ನಾಭಿಪ್ರಾಯ ಇದ್ದಿದ್ದರೆ ಅವರು ಶಾಸಕಾಂಗ ಸಭೆಯಲ್ಲಿ ಚರ್ಚಿಸಬಹುದಾಗಿತ್ತು, ಸಂಪುಟ ಉಪಸಮಿತಿಯೊಂದಿಗೆ ಚರ್ಚೆ ಮಾಡಬೇಕಿತ್ತು, ಜಿಂದಾಲ್ಗೆ ಭೂಮಿ ಪರಬಾರೆ ಪ್ರಸ್ತಾಪ ಯಾರ ಸಮಯದಲ್ಲಿ ಆಯಿತು ಎಂಬ ಬಗ್ಗೆ ಅಧ್ಯಯಯನ ಮಾಡಬೇಕಿತ್ತು ಎಂದು ಪರಮೇಶ್ವರ್ ಅವರು ಹೇಳಿದರು.