ಅವಸರವೇನಿಲ್ಲ, ಹೈಕಮಾಂಡ್ ಸೂಚನೆಯಂತೇ ನಡೆಯುತ್ತಿದ್ದೇವೆ: ಸೋಮಣ್ಣ
ಬೆಂಗಳೂರುಮ ಜುಲೈ 26: 'ಯಡಿಯೂರಪ್ಪ ಅವರು ರಾಜ್ಯದ ಪ್ರಶ್ನಾತೀತ ನಾಯಕರು. ಅವರು ನಿನ್ನೆಯೇ ಅಧಿಕಾರ ಸ್ವೀಕಾರ ಮಾಡಬೇಕಿತ್ತು. ರಾಜ್ಯದ ಹಣಕಾಸು ವಿಧೇಯಕಕ್ಕೆ ಅನುಮೋದನೆ ಸಿಗಬೇಕಿದೆ. ಈ ತಿಂಗಳ 31ರ ಒಳಗೆ ಅನುಮೋದನೆ ಆಗಬೇಕು. ಇಲ್ಲದಿದ್ದರೆ ಒಂದು ರೂಪಾಯಿ ಕೂಡ ಖರ್ಚು ಮಾಡಲು ಸಾಧ್ಯವಿಲ್ಲ. ರಾಜ್ಯದ ಹಿತದೃಷ್ಟಿಯಿಂದ, ಅನುಕೂಲವಾಗಲಿ ಎಂದು ಬಿಜೆಪಿ ನೇತಾರರು ಅಧಿಕಾರ ಸ್ವೀಕಾರ ಮಾಡಲು ಸೂಚನೆ ನೀಡಿದ್ದಾರೆ. ತರಾತುರಿ ಏನಿಲ್ಲ' ಎಂದು ಬಿಜೆಪಿ ಮುಖಂಡ ವಿ. ಸೋಮಣ್ಣ ಹೇಳಿದರು.
ಖಾಸಗಿ ಸುದ್ದಿವಾಹಿನಿಯೊಂದರ ಜತೆ ಮಾತನಾಡಿದ ವಿ. ಸೋಮಣ್ಣ, ಹೈಕಮಾಂಡ್ ಸೂಚನೆ ಮೇರೆಗೇ ಯಡಿಯೂರಪ್ಪ ಅವರು ಸರ್ಕಾರ ರಚನೆಗೆ ಮುಂದಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಂಜೆ ಆರು ಗಂಟೆಗೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ
'ಹೈಕಮಾಂಡ್ ಹೇಳದೆ ಏನೂ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ಬಿಜೆಪಿ ಶಿಸ್ತಿನ ಪಕ್ಷ. ಇಲ್ಲಿ ನಾಯಕರ ಆದೇಶಗಳನ್ನು ಪಾಲಿಸುತ್ತೇವೆ. ಯಡಿಯೂರಪ್ಪ ಅವರಿಗೆ ಕೇಂದ್ರದಿಂದ ಮಾಹಿತಿ ಬಂದ ಬಳಿಕವೇ ಮುಂದೆ ಹೋಗಿದ್ದಾರೆ' ಎಂದು ತಿಳಿಸಿದರು.
ಯಡಿಯೂರಪ್ಪ ಅವರ ಮುಂದೆ ಸವಾಲು ಇದೆ ನಿಜ. ಆದರೆ, ಯಡಿಯೂರಪ್ಪ ಅವರಿಗೆ ಇದನ್ನೆಲ್ಲ ನಿಭಾಯಿಸುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಅವರ ಒಳ್ಳೆತನ ಅವರನ್ನು ಕಾಪಾಡುತ್ತದೆ. ರಾಜ್ಯದ ಅಭಿವೃದ್ಧಿಗೆ ಅವರ ಅಗತ್ಯವಿದೆ ಎಂದು ದೇವರು ಆಶೀರ್ವಾದ ಮಾಡಿದ್ದಾನೆ ಎಂದು ಹೇಳಿದರು.
3 ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಎಷ್ಟು ದಿನ ಆಡಳಿತ ನಡೆಸಿದ್ದರು?
ನಿನ್ನೆ ಸುದ್ದಿಗೋಷ್ಠಿಯಲ್ಲಿ ಸ್ಪೀಕರ್ ಸಾಹೇಬರು ಬಳಸಿರುವ ಭಾಷೆ, ಹೇಳಿರುವ ಬಹುತೇಕ ವಿಚಾರಗಳು ರಾಜಕೀಯ ಪ್ರೇರಿತವಾಗಿವೆ. ಅವರು ಕಾಂಗ್ರೆಸ್ನ ಮೂರು ಜನರನ್ನು ಕಚೇರಿಯಲ್ಲಿ ಕೂರಿಸಿಕೊಳ್ಳುತ್ತಾರೆ. ಆದರೆ, ನಾವು ಭೇಟಿಯಾಗಲು ಹೋದರೆ ಅನುಮತಿ ನೀಡಲಿಲ್ಲ ಎಂದು ಆರೋಪಿಸಿದರು.
ಸ್ಪೀಕರ್ ಅವರನ್ನು 35 ವರ್ಷಕ್ಕೂ ಮೇಲ್ಪಟ್ಟು ಸಮಯದಿಂದ ಹತ್ತಿರದಿಂದ ನೋಡಿದ್ದೇನೆ. ಅವರು ಸ್ಪೀಕರ್ ಆಗಿದ್ದಾಗ ಈ ಹಿಂದೆ ಸಚಿವನಾಗಿದ್ದೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಯಾಕೋ ಗೊತ್ತಿಲ್ಲ ಅವರ ಭಾವನೆ, ಧೋರಣೆ ಯಾಕೋ ಬದಲಾಗಿದೆ. ಇಂದು ಅವರು ಒತ್ತಡದಲ್ಲಿ ಇದ್ದಾರೆ ಎಂದು ಗೊತ್ತಾಗುತ್ತದೆ ಎಂದರು.
ಶಾಸಕರ ಅನರ್ಹತೆಯ ನಿರ್ಧಾರವು ಅವರಿಂದ ಆಗಬಾರದಿತ್ತು. ಸ್ವಪ್ರೇರಣೆಯಿಮದ ರಾಜೀನಾಮೆ ಕೊಟ್ಟಾಗ ತಪ್ಪೇನಿರುತ್ತದೆ? ನಾನೂ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದವನು. ಯಾವ ವಿಚಾರವನ್ನೋ ಇನ್ನು ಯಾವುದಕ್ಕೋ ತಳುಕು ಹಾಕುವುದು ಸರಿಯಲ್ಲ. ನಾವು ನಾವಾಗಿ ಇರಬೇಕು. ಇನ್ನೊಬ್ಬರ ವಿಚಾರವಾಗಬಾರದು. ಅವರು ನಾವು ಕಂಡ ರಮೇಶ್ ಕುಮಾರ್ ಆಗಿರಬೇಕಿತ್ತು ಎಂದು ಹೇಳಿದರು.
ಸ್ಪೀಕರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುವುದು ಅಷ್ಟೊಂದು ಇತ್ತಾ? ನನ್ನ ಇಚ್ಛೆಯಿಂದ ರಾಜಿನಾಮೆ ಕೊಡುತ್ತೇನೆ, ಯಾರ ಒತ್ತಡವೂ ಇಲ್ಲ ಎಂದರೆ ಅದನ್ನು ವಿರೋಧಿಸಲು ಯಾರಿಗೆ ಅಧಿಕಾರವಿದೆ? ಅದನ್ನು ಜನರು ತೀರ್ಮಾನ ಮಾಡಬೇಕು. ಚುನಾವಣೆಯಲ್ಲಿ ಅವರು ತೀರ್ಮಾನಿಸುತ್ತಾರೆ, ನಾವು ನೀವಲ್ಲ ಎಂದರು.