ಡಿ.ಕೆ.ಶಿವಕುಮಾರ್ ಭೇಟಿಯಾದ ಬಿಜೆಪಿ ಅತೃಪ್ತ ರೇಣುಕಾಚಾರ್ಯ
ಬೆಂಗಳೂರು, ಫೆಬ್ರವರಿ 12: ಸಚಿವ ಸ್ಥಾನ ಸಿಗದೇ ಪಕ್ಷದ ವಿರುದ್ಧ ಕುದಿಯುತ್ತಿರುವ ಬಿಜೆಪಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ.
ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ರೇಣುಕಾಚಾರ್ಯ, ವಿಪಕ್ಷದ ಪ್ರಮುಖ ನಾಯಕನನ್ನು ಭೇಟಿ ಆಗಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ.
ರೇಣುಕಾಚಾರ್ಯ ಅವರು ಇನ್ನೂ ಕೆಲವು ಮುಖಂಡರೊಡನೆ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಹಲವು ಸಮಯ ಈ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ. ಇಬ್ಬರ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, 'ನಮ್ಮ ಊರಿನಲ್ಲಿ ಕಾರ್ಯಕ್ರಮವಿದ್ದು ಕಾರ್ಯಕ್ರಮಕ್ಕೆ ಆಹ್ವಾನ ನೀಡಲೆಂದು ಡಿ.ಕೆ.ಶಿವಕುಮಾರ್ ಮನೆಗೆ ಬಂದಿದ್ದೆವು' ಎಂದು ಹೇಳಿದ್ದಾರೆ.
ನಾನು-ಡಿ.ಕೆ.ಶಿ ಉತ್ತಮ ಸ್ನೇಹಿತರು: ರೇಣುಕಾಚಾರ್ಯ
'ನಮ್ಮಿಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧವಿದೆ. ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಹಿರಿಯರು, ನಾನು ಕಿರಿಯ, ನಾನಿನ್ನೂ ಸಾಧನೆ ಮಾಡಿಲ್ಲ, ನನ್ನನ್ನು ಡಿ.ಕೆ.ಶಿವಕುಮಾರ್ ಅವರಿಗೆ ಹೋಲಿಸಬೇಡಿ' ಎಂದು ಕೇಳಿದರು.
ನಮ್ಮ ಪಕ್ಷದವರನ್ನು ನಾನೇಕೆ ಸೋಲಿಸಲಿ: ರೇಣುಕಾಚಾರ್ಯ
ಲಕ್ಷ್ಮಣ ಸವದಿ ಅವರನ್ನು ಪರಿಷತ್ ಚುನಾವಣೆಯಲ್ಲಿ ಸೋಲಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 'ನಾನು ಅಂತ ನೀಚ ಕೆಲಸ ಮಾಡುವುದಿಲ್ಲ, ನಮ್ಮದೇ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಹೀನ ಕಾರ್ಯಕ್ಕೆ ನಾನು ಇಳಿಯುವುದಿಲ್ಲ' ಎಂದರು.
ಖಾತೆ ಹಂಚಿಕೆ ಸಿಎಂ ಅವರ ಪರಮಾಧಿಕಾರ: ರೇಣುಕಾಚಾರ್ಯ
ಖಾತೆ ಬದಲಾವಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, 'ಖಾತೆ ಹಂಚಿಕೆ ಮತ್ತು ಬದಲಾವಣೆ ಸಿಎಂ ಅವರ ಪರಮಾಧಿಕಾರ. ಅವರು ಯಾವಾಗ ಬೇಕಾದರೂ ಖಾತೆ ಬದಲಾವಣೆ ಮಾಡಬಹುದು, ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ' ಎಂದರು.
ಸಚಿವ ಸ್ಥಾನ ಆಕಾಂಕ್ಷಿ ಆಗಿದ್ದ ರೇಣುಕಾಚಾರ್ಯ
ರೇಣುಕಾಚಾರ್ಯ ಅವರು ಸಚಿವ ಸ್ಥಾನ ಆಕಾಂಕ್ಷಿ ಆಗಿದ್ದರು. ಆದರೆ ಅವರಿಗೆ ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಿ ಸಮಾಧಾನ ಪಡಿಸುವ ಯತ್ನ ಮಾಡಲಾಗಿತ್ತು. ರೇಣುಕಾಚಾರ್ಯ ಅವರಿಗೆ ಎರಡನೇ ಹಂತದ ಸಂಪುಟ ವಿಸ್ತರಣೆ ಸಮಯದಲ್ಲೂ ಅವಕಾಶ ಸಿಗಲಿಲ್ಲ.