ಕೋವಿಡ್ ವಾರ್ ರೂಂ ಫ್ರಾಡ್: ಹೆಣದ ಮೇಲಿನ ಹಣವನ್ನೂ ಬಿಡಲ್ವಲ್ರೋ!
ಧನಪಿಶಾಚಿಗಳಿಗೆ ಆಡುಭಾಷೆಯಲ್ಲಿ ಬೈಯುವ ಒಂದು ಮಾತಿದೆ, 'ಥೂ ಹೆಣದ ಮೇಲಿನ ಹಣವನ್ನೂ ಬಿಡಲ್ವಲ್ರೋ' ಎಂದು. ದುಡ್ಡು ಯಾವ ಮೂಲದಿಂದ ಬಂದರೂ ಪರವಾಗಿಲ್ಲ, ಸೌಧ ಕಟ್ಟಬೇಕು ಎನ್ನುವ ವರ್ಗದವರು ಇವರೆಲ್ಲಾ. ಕೋವಿಡ್ ಎನ್ನುವ ಈ ಆರೋಗ್ಯ ತುರ್ತು ಪರಿಸ್ಥಿತಿಯ ವೇಳೆಯೂ ಎಲ್ಲೆಲ್ಲೂ ಕರ್ಮಕಾಂಡಗಳದ್ದೇ ಸುದ್ದಿಗಳು.
ಕೊರೊನಾ, ಲಾಕ್ ಡೌನ್ ಎಂದು ಪ್ರಧಾನಿ ಹೋದ ವರ್ಷ ಘೋಷಣೆ ಮಾಡಿದ ಕೂಡಲೇ, ಅವ್ಯವಹಾರದ ವಾಸನೆ ಬಡಿಯಲಾರಂಭಿಸಿತು. ಕೊರೊನಾ ನಿರ್ವಹಣೆ, ಸಾಮಗ್ರಿ ಖರೀದಿಯಲ್ಲಿ ಸರಕಾರ ದೊಡ್ಡ ಮಟ್ಟಿಗೆ ರಾಜ್ಯದ ಜನತೆಗೆ ವಂಚಿಸಿತ್ತು ಎಂದು ವಿರೋಧ ಪಕ್ಷಗಳು ರಸ್ತೆಗಿಳಿದಿದ್ದವು. ಸರಕಾರ ಕೊಟ್ಟ ಲೆಕ್ಕ ಕೂಡಾ ಇದು ರಾಮನ ಲೆಕ್ಕ ಅಲ್ಲ ಎನ್ನುವುದು ಶತದಡ್ಡನಿಗೂ ಅರ್ಥವಾಗಿತ್ತು.
ಬೆಡ್ ಬ್ಲಾಕಿಂಗ್ ಅವ್ಯವಹಾರ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ
ಆದರೆ, ವಿರೋಧ ಪಕ್ಷಗಳು ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ವಿಫಲವಾದರು. ಅಲ್ಲಿಗೆ, ಕೊರೊನಾ ಮೊದಲನೇ ಅಲೆಯಲ್ಲಿ ನಡೆದಿತ್ತು ಎನ್ನಲಾಗುವ ಅವ್ಯವಹಾರದ ಸುದ್ದಿ ಕೂಡಾ ಮಠ ಸೇರಿಕೊಂಡಿತು. ಹಾಗಾಗಿ, ಕೆಲವೊಮ್ಮೆ ಜನಸಾಮಾನ್ಯರಿಗೆ ಅನಿಸುವುದುಂಟು, ಆಡಳಿತ ಮತ್ತು ವಿರೋಧ ಪಕ್ಷಗಳು ಎದುರು ಮಾತ್ರ ಒಂದು, ಹಿಂದೆ ಇನ್ನೊಂದು ಎಂದು..
ಈಗ, ಕೊರೊನಾ ಎರಡನೇ ಸರದಿ. ಬಹುಷಃ ರಾಜ್ಯದ ಇತಿಹಾಸದಲ್ಲಿ ಇಂತಹ ಕಷ್ಟವನ್ನು ನಾವು ನೋಡಿರಲಿಕ್ಕಿಲ್ಲ, ಎಲ್ಲೆಲ್ಲೂ ಕೊರೊನಾ ಆರ್ಭಟ. ಮುನ್ನೆಚ್ಚರಿಕೆ ನೀಡಿದ್ದರೂ ಅದನ್ನು ಕಡೆಗಣಿಸಿ, ಈಗ ಸರಕಾರ ಪರಿಸ್ಥಿತಿ ಕೈತಪ್ಪಿ ಹೋಗಿದೆ ಎನ್ನುವ ಅಸಾಹಯಕತೆಯನ್ನು ತೋರಿಸುತ್ತಿದೆ. ಇವರ ತಪ್ಪುಗಳಿಗೆ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ.
ಆಸ್ಪತ್ರೆಗಳಲ್ಲಿ ಬೆಡ್ ಲಾಕ್ ವಿಚಾರ, ಸಿಎಂ ಯಡಿಯೂರಪ್ಪ ಹೇಳಿದ್ದೇನು?
ಕೋವಿಡ್ ವಾರ್ ರೂಂನಲ್ಲಿ ಕುಣಿದಾಡುತ್ತಿರುವ ಹಣದ ತೈಲಿ
ಇವೆಲ್ಲದರ ನಡುವೆ, ಸ್ವಪಕ್ಷೀಯರೇ ಬಿಬಿಎಂಪಿ ನಿರ್ವಹಿಸುವ ವಾರ್ ರೂಂ ಅವ್ಯವಹಾರದ ಬಗ್ಗೆ ಕಿಡಿಕಾರಿರುವುದು, ಯಾವ ಮಟ್ಟದಲ್ಲಿ ದುಡ್ಡು ಹೊಡೀತಾ ಇದ್ದಾರೆ ಎನ್ನುವುದರ ಬಗ್ಗೆ ಒಂದು ಸ್ಯಾಂಪಲ್ ಅನ್ನು ಕೊಟ್ಟಿದ್ದಾರೆ. ತೇಜಸ್ವಿ ಸೂರ್ಯ, ಸತೀಶ್ ರೆಡ್ಡಿ, ರವಿ ಸುಬ್ರಮಣ್ಯ ಮತ್ತು ಉದಯ್ ಗರುಡಾಚಾರ್, ಕೋವಿಡ್ ವಾರ್ ರೂಂನಲ್ಲಿ ಹೇಗೆ ಹಣದ ತೈಲಿ ಕುಣಿದಾಡುತ್ತಿದೆ ಎನ್ನುವುದರ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.
ಸ್ವಪಕ್ಷದವರೇ ಆರೋಪಿಸುತ್ತಿರುವುದರಿಂದ ಮುಜುಗರಕ್ಕೆ ಒಳಗಾದ ಮುಖ್ಯಮಂತ್ರಿಗಳು
ಸ್ವಪಕ್ಷದವರೇ ಆರೋಪಿಸುತ್ತಿರುವುದರಿಂದ ಮುಜುಗರಕ್ಕೆ ಒಳಗಾದ ಮುಖ್ಯಮಂತ್ರಿಗಳು"ಬೆಡ್ ಲಾಕ್ ದಂಧೆ ನಡೆಸುತ್ತಿರುವವರ ವಿರುದ್ದ ಕ್ರಮ ತಗೋತೀವಿ, ಎಷ್ಟೇ ದೊಡ್ಡವರಿದ್ದರೂ ಕ್ರಮ ತಗೋತೀವಿ" ಎನ್ನುವ ಸ್ಟ್ಯಾಂಡರ್ಡ್ ಉತ್ತರವನ್ನು ಕೊಟ್ಟು ಮುಂದಕ್ಕೆ ಹೋಗಿದ್ದಾರೆ. ಅಲ್ಲಿಗೆ, ಇದು ಕೂಡಾ ಹತ್ತರ ಜೊತೆಗೆ ಹನ್ನೊಂದು ಎನ್ನುವ ಸಂಶಯ ಮೂಡುವಂತೆ ಮಾಡಿದ್ದಾರೆ.
ಬೆಂಗಳೂರು ವ್ಯಾಪ್ತಿಯ ಬಿಜೆಪಿ ಜನಪ್ರತಿನಿಧಿಗಳೇ ಇಂತಹ ಆರೋಪವನ್ನು ಮಾಡುತ್ತಾರೆ ಎಂದರೆ
ಬೆಂಗಳೂರು ವ್ಯಾಪ್ತಿಯ ಬಿಜೆಪಿ ಜನಪ್ರತಿನಿಧಿಗಳೇ ಇಂತಹ ಆರೋಪವನ್ನು ಮಾಡುತ್ತಾರೆ ಎಂದರೆ, ಇದರಲ್ಲಿ ಒಬ್ಬರು ಇಬ್ಬರು ಇರಲು ಸಾಧ್ಯವೇ? ಬರೀ ಬಿಬಿಎಂಪಿಯ ಕೆಲವು ಅಧಿಕಾರಿಗಳಿಂದ ಇಂತಹ ದಂಧೆ ನಡೆಸಲು ಸಾಧ್ಯವೇ? ಎರಡು ಕೈಸೇರಿದರೆ ತಾನೇ ಚಪ್ಪಾಳೆ. ಹಾಗಾಗಿ, ಒಂದು ವೇಳೆ ತೇಜಸ್ವಿ ಸೂರ್ಯ ಮಾಡಿರುವ ಆರೋಪ ನಿಜವಾಗಿದ್ದೇ ಆದಲ್ಲಿ, ಅಧಿಕಾರಿಗಳು, ಬೆಂಗಳೂರು ವ್ಯಾಪ್ತಿಯ ಹಳೇ ತಲೆಮಾರಿನ ಶಾಸಕರು, ಸಚಿವರುಗಳೂ ಶಾಮೀಲಾಗಿರಬಹುದಾ ಎನ್ನುವ ಪ್ರಶ್ನೆ ಕಾಡುವುದು ತಪ್ಪಾ?
ಬೆಡ್ ಬ್ಲಾಕಿಂಗ್ ವಿಚಾರದಲ್ಲಿ ಬಿಜೆಪಿ ಜನಪ್ರತಿನಿಧಿಗಳು ಮಾಡಿರುವ ಆರೋಪ ಜನಸಾಮಾನ್ಯರಿಗೆ ಗಂಭೀರವಾದದ್ದು
ಬೆಡ್ ಬ್ಲಾಕಿಂಗ್ ವಿಚಾರದಲ್ಲಿ ಬಿಜೆಪಿ ಜನಪ್ರತಿನಿಧಿಗಳು ಮಾಡಿರುವ ಆರೋಪ ಜನಸಾಮಾನ್ಯರಿಗೆ ಅತ್ಯಂತ ಗಂಭೀರವಾದದ್ದು, ರಾಜಕಾರಣಿಗಳಿಗೆ ಹೇಗೋ ಗೊತ್ತಿಲ್ಲ, ಬೆಂಗಳೂರು ದಕ್ಷಿಣ ಭಾಗ ಒಂದರಲ್ಲೇ ಸುಮಾರು ನಾಲ್ಕು ಸಾವಿರ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎನ್ನುವುದು ತೇಜಸ್ವಿ ಸೂರ್ಯ ಆರೋಪ. ಹಾಗಾದರೆ, ಬೆಂಗಳೂರಿನಲ್ಲಿ ಎಂಟು ಝೋನ್ ಗಳಿವೆ. ಒಂದೊಂದು ವ್ಯವಹಾರವೂ ಕುದುರುವುದು ಸಾವಿರ/ಲಕ್ಷದ ಲೆಕ್ಕದಲ್ಲೇ.
Recommended Video
ಹೆಣದ ಮೇಲಿನ ಹಣವನ್ನೂ ಬಿಡಲ್ವಲ್ರೋ, ಕೋವಿಡ್ ವಾರ್ ರೂಂ ಫ್ರಾಡ್
ಬೆಡ್ ಬ್ಲಾಕಿಂಗ್ ದಂಧೆ ನಡೆಸುತ್ತಿರುವವರು ಸರಕಾರದ ಪ್ರತಿನಿಧಿಗಳಲ್ಲ, ಖಾಸಗಿಯವರು ಎನ್ನುವುದು ತೇಜಸ್ವಿ ಸೂರ್ಯ ಮಾತು. ಸಣ್ಣ ಮಗುವಿಗಾದರೂ ಅರ್ಥವಾಗುವಂತದ್ದು, ಸರಕಾರದ ಒಂದು ಭಾಗವಾಗಿರುವ ಬಿಬಿಎಂಪಿಯಲ್ಲಿ ಖಾಸಗಿಯವರು ಹೇಗೆ ಇಷ್ಟು ರಾಜಾರೋಷವಾಗಿ ದರ್ಬಾರ್ ನಡೆಸಲು ಸಾಧ್ಯ? ಇಂತಹ ಎಷ್ಟೋ ಆರೋಪಗಳು ಬಂದಷ್ಟೇ ವೇಗದಲ್ಲಿ ಗಾಯಬ್ ಆಗಿ ಹೋಗಿರುತ್ತವೆ. ಜನಸಾಮಾನ್ಯರು ಎರಡು ದಿನ ಮಾತನಾಡುತ್ತಾರೆ ಸುಮ್ಮನಾಗುತ್ತಾರೆ. ಆದರೆ ಇಂತವರು ಮೆರೆಯುತ್ತಲೇ ಇರುತ್ತಾರೆ. ಕೆಲವೊಮ್ಮೆ ಅನಿಸುವುದುಂಟು, ಎಂತಹಾ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂದು..