ನೆರೆ ಪರಿಹಾರ ನೀಡದ ಮೋದಿ ವಿರುದ್ಧ ಬಿಜೆಪಿ ಶಾಸಕ ವಾಗ್ದಾಳಿ
ಬೆಂಗಳೂರು, ಅಕ್ಟೋಬರ್ 01: ಯಡಿಯೂರಪ್ಪ ಅವರ ಬಗ್ಗೆ ತಪ್ಪು ಸಂದೇಶ ಬರಲೆಂದೇ ರಾಜ್ಯಕ್ಕೆ ನೆರೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಹಾರದಲ್ಲಿ ಬಂದಿರುವ ಪ್ರವಾಹಕ್ಕೆ ಕೂಡಲೇ ಸ್ಪಂದಿಸಿರುವ ಮೋದಿ, ಅಲ್ಲಿನ ಜನರಿಗೆ ಸಾಂತ್ವಾನ ಹೇಳುತ್ತಾರೆ. ಆದರೆ ಕರ್ನಾಟಕದಲ್ಲಿ ಪ್ರವಾಹದಿಂದ ಸಂತ್ರಸ್ತರಾಗಿರುವವರಿಗಾಗಿ ಒಂದು ರೂಪಾಯಿ ಬಿಡಿಗಾಸು ಕೊಟ್ಟಿಲ್ಲ' ಎಂದು ತಮ್ಮದೇ ಪಕ್ಷದ ಪ್ರಧಾನಿಗಳ ಮೇಲೆ ಟೀಕೆ ಮಾಡಿದರು.
ಯಡಿಯೂರಪ್ಪನವರನ್ನು ಗುರಿಯಾಗಿಟ್ಟುಕೊಂಡೇ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿದೆ ಎಂದ ಅವರು, ಯಡಿಯೂರಪ್ಪ ನವರನ್ನು ಯಾವ ಕಾರಣಕ್ಕಾಗಿ ಟಾರ್ಗೆಟ್ ಮಾಡಲಾಗಿದೆ ಎಂಬುದು ತಿಳಿಯುತ್ತಿಲ್ಲ. ಕರ್ನಾಟಕದಿಂದ 25 ಸಂಸದರನ್ನು ಆಯ್ಕೆ ಮಾಡಲಾಗಿದೆ, ಇಡೀ ದಕ್ಷಿಣ ಭಾರತಕ್ಕೆ ಹೋಲಿಸಿದರೆ ಅತಿ ಹೆಚ್ಚು ಸಂಸದರು ಗೆದ್ದಿರುವುದು ಕರ್ನಾಟಕದಿಂದಲೇ ಎಂದು ಅವರು ಹೇಳಿದರು.
'ಪರಿಸ್ಥಿತಿ ಹೀಗೆ ಮುಂದುವರೆದರೆ ಜನರು ಪಾಠ ಕಲಿಸುತ್ತಾರೆ'
ಪರಿಸ್ಥಿತಿ ಹೀಗೇ ಮುಂದುವರೆದರೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು. ಜನ ಮನಸ್ಸು ಮಾಡಿದರೆ ಎಂತೆಂಥವರನ್ನೋ ಮನೆಗೆ ಕಳುಹಿಸಿದ್ದಾರೆ. ಅಂತಹದ್ದರಲ್ಲಿ ಇವರಲ್ಲ ಯಾವ ಲೆಕ್ಕ. ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಪಕ್ಷವನ್ನು ಸಂಘಟಿಸಿದ್ದು ನಾವು. ಪ್ರತಿಯೊಬ್ಬರಿಗೂ ಉತ್ತರ ಕೊಡಬೇಕಾದ್ದು ನಾವೇ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು ಬಸನಗೌಡ ಪಾಟೀಲ್ ಯತ್ನಾಳ್.
ಸಂಸದರು ಪ್ರಧಾನಿ ಮೇಲೆ ಒತ್ತಡ ಹೇರಬೇಕು: ಯಾತ್ನಾಳ್
ಬಿಹಾರದ ಜನತೆಗೆ ಟ್ವೀಟ್ ಮಾಡಿ ಸಾಂತ್ವಾನ ಹೇಳಿದರೆ, ನಮ್ಮ ಜನಕ್ಕೆ ನಾವು ಏನು ಉತ್ತರ ನೀಡಬೇಕು. ನಮ್ಮ ಸಂಸದರು ಸುಮ್ಮನಿರುವುದು ಸಹ ನೋವಿನ ಸಂಗತಿ ಎಂದ ಅವರು, ಸಂಸದರು ಪ್ರಧಾನಿ ಮೇಲೆ ಒತ್ತಡ ಹೇರಿ ಅನುದಾನ ಬಿಡುಗಡೆ ಮಾಡಿಸಬೇಕಿತ್ತು ಎಂದರು.
ಕೆ.ಎಸ್.ಈಶ್ವರಪ್ಪ, ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ
ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಬಸನಗೌಡ ಪಾಟೀಲ್ ಯತ್ನಾಳ್, 'ಕೆಲವರು ಇಂಗ್ಲೀಷ್ ಬಂದ ಕೂಡಲೇ ಅಂತರರಾಷ್ಟ್ರೀಯ ಮಟ್ಟದ ನಾಯಕರು ಎಂದು ಕೊಂಡು ಬಿಟ್ಟಿದ್ದಾರೆ' ಎಂದರು.
ಈಶ್ವರಪ್ಪ ವಿರುದ್ಧವೂ ವಾಗ್ದಾಳಿ
ಈಶ್ವರಪ್ಪ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, 'ಗೂಟದ ಕಾರು ಬಂದ ನಂತರ ಕೆಲವರು ಸಿಎಂ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ ಎಂದ ಅವರು, ಎಸಿ ರೂಮಿನಲ್ಲಿ ಕೂತು ಪಕ್ಷ ಕಟ್ಟಿದ್ದೀವಿ ಎಂದುಕೊಂಡಿದ್ದಾರೆ. ಸಿಎಂ ವಿರುದ್ಧ ಲಘುವಾಗಿ ಮಾತನಾಡುವವರು ರಾಜೀನಾಮೆ ನೀಡಲಿ, ಪಕ್ಷ ಕಟ್ಟಿದವರು ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದರು.