ನೊಟೀಸ್ ನೀಡಿದ್ದ ಬಿಜೆಪಿ ಶಿಸ್ತು ಸಮಿತಿಗೆ ಯಾತ್ನಾಳ್ ಖಡಕ್ ಉತ್ತರ
ಬೆಂಗಳೂರು, ಅಕ್ಟೋಬರ್ 19: ಸ್ವಪಕ್ಷದವರ ವಿರುದ್ಧ ಮತ್ತು ಮೋದಿ ವಿರುದ್ಧವೇ ಮಾತನಾಡಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ನೋಟೀಸ್ ಪಡೆದಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಡಕ್ ಉತ್ತರನ್ನೇ ತಿರುಗಿ ಕೊಟ್ಟಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ನೆರೆ ಪರಿಸ್ಥಿತಿಗೆ ಪ್ರಧಾನಿ ಮೋದಿ ಸ್ಪಂದಿಸಲಿಲ್ಲವೆಂದು ಕುಪಿತಗೊಂಡಿದ್ದ ಬಿಜೆಪಿ ಶಾಸಕ ಯತ್ನಾಳ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜೊತೆಗೆ ಸಿಟಿ.ರವಿ. ಹೊಸ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಸೇರಿ ಹಲವರು ವಿರುದ್ಧ ಬಹಿರಂಗವಾಗಿಯೇ ಸಿಟ್ಟು ಹೊರಹಾಕಿದ್ದರು. ಇದಕ್ಕಾಗಿ ಬಿಜೆಪಿ ಶಿಸ್ತು ಸಮಿತಿ ನೊಟೀಸ್ ನೀಡಿ ಉತ್ತರ ನೀಡುವಂತೆ ಕೋರಿತ್ತು.
ನೋಟೀಸ್ ಗೆ ಉತ್ತರ ಕೊಡದ ಯತ್ನಾಳ್ ಗೆ ನಳಿನ್ ಚಾಟಿ
ಬಿಜೆಪಿ ಶಿಸ್ತು ಸಮಿತಿ ನೊಟೀಸ್ಗೆ ಉತ್ತರ ನೀಡಿರುವ ಯತ್ನಾಳ್, ಕ್ಷಮಾಪಣೆ ಕೇಳಿಲ್ಲ, ಬದಲಿಗೆ 'ನನ್ನ ಕ್ಷೇತ್ರದ ಜನರ ಕಷ್ಟಕ್ಕೆ ನೊಂದು ಮಾತನಾಡಿದ್ದೇನೆ' ಎಂದು ಹೇಳಿದ್ದಾರೆ.
'ನಾನು ಪಕ್ಷದ ಶಿಸ್ತಿನ ಸಿಪಾಯಿ. ಕೇಂದ್ರದಲ್ಲಿ ಸಂಸದನಾಗಿ, ಶಾಸಕನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ನನಗೆ ನನ್ನ ಭಾಗದ ಜನರ ಸ್ಥಿತಿ ನೋಡಿ ನೊಂದು ಮಾತನಾಡಿದ್ದೇನೆ ಹೊರತು ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಿಲ್ಲ' ಎಂದು ಯಾತ್ನಾಳ್ ಉತ್ತರದಲ್ಲಿ ಹೇಳಿದ್ದಾರೆ.
'ಏನೂ ಹೇಳಿಕೆ ನೀಡದಂತೆ ಯತ್ನಾಳ್ ಗೆ ಸೂಚನೆ ನೀಡಿದ್ದೇನೆ'
'ಪಕ್ಷವನ್ನು ತಾಯಿಯ ಸಮಾನವೆಂದು ತಿಳಿದುಕೊಂಡಿದ್ದೇನೆ, ಪಕ್ಷಕ್ಕಾಗಿ ದುಡಿದಿದ್ದೇನೆ. ನನ್ನ ಕ್ಷೇತ್ರದ ಜನ ಮನೆ-ಮಠ ಕಳೆದುಕೊಂಡು ನೋವಿನಲ್ಲಿದ್ದರು. ಇದನ್ನು ನೋಡಿ ನೋವು ತಡೆಯಲಾರದೆ ಸಹಜವಾಗಿ ಮಾತನಾಡಿದ್ದೇನೆ, ಪಕ್ಷಕ್ಕೆ ಮುಜುಗರ ತರುವ ಉದ್ದೇಶವಿರಲಿಲ್ಲ' ಎಂದು ಅವರು ಹೇಳಿದ್ದಾರೆ.
'ಯಡಿಯೂರಪ್ಪರನ್ನು ಇಳಿಸಲು ಬಿಜೆಪಿ ಸಂಸದರಿಂದಲೇ ಕುತಂತ್ರ'
ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದವನ್ನು ವ್ಯಕ್ತಪಡಿಸುತ್ತೇನೆ ಎಂದಿರುವ ಅವರು, ಮಾಧ್ಯಮಗಳಲ್ಲಿನ ವರದಿ ಹಾಗೂ ನನ್ನ ಕ್ಷೇತ್ರದಲ್ಲಿನ ಜನರ ಸ್ಥಿತಿಗತಿ ನೋಡಿ ಈ ಹೇಳಿಕೆ ನೀಡಿದ್ದೇನೆ. ನಾನು ಎಲ್ಲಿಯೂ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವರು, ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಯಾರಿಗೂ ಕೂಡ ಮುಜುಗರ ತರುವ ಕೆಲಸ ಮಾಡಿಲ್ಲ. ನನ್ನ ಇತಿಮಿತಿಯೊಳಗೆ ಮಾತನಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.