"ರಾಜಕಾರಣ ಬೇರೆ ಮನುಷತ್ವವೇ ಬೇರೆ: ಖಾತೆ ಬಗ್ಗೆ ಕೇಳಬೇಡಿ" ಎಂದ ಕೌರವ!
ಬೆಂಗಳೂರು, ಡಿಸೆಂಬರ್.13: ರಾಜಕಾರಣವೇ ಬೇರೆ, ಸ್ನೇಹ, ಪ್ರೀತಿ, ವಿಶ್ವಾಸವೇ ಬೇರೆ. ಚುನಾವಣೆ ಅಖಾಡಕ್ಕೆ ಸೆಡ್ಡು ಹೊಡುವ ನಾಯಕರು ನಂತರದಲ್ಲಿ ಉತ್ತಮ ಸ್ನೇಹಿತರೂ ಆಗಬಹುದು ಎಂಬುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಸಾಕ್ಷಿಯಾಗಿತ್ತು. ಇದರ ಬೆನ್ನಲ್ಲೇ ಇಂದೂ ಕೂಡಾ ನಾಯಕರ ದಂಡು ವೇಗಾಸ್ ಆಸ್ಪತ್ರೆಯತ್ತ ಧಾವಿಸಿ ಬರುತ್ತಿದೆ.
ಹೃದಯ ಸಂಬಂಧ ಶಸ್ತ್ರ ಚಿಕಿತ್ಸೆ ಆಂಜಿಯೋಪ್ಲಾಸ್ಟಿಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಮಲ್ಲೇಶ್ವರಂನ ವೇಗಾಸ್ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ನಿನ್ನೆಯಷ್ಟೇ ಬಿಎಸ್ ವೈ, ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಬಿಜೆಪಿ ನಾಯಕರು ಸಿದ್ದರಾಮಯ್ಯರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.
ಅರೆ, ರಾಜಕಾರಣ ಅಲ್ಲ ಸ್ವಾಮಿ, ಇದು 'ಹೃದಯ'ಗಳ ವಿಷಯ!
ಶುಕ್ರವಾರ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಕೂಡಾ ತಮ್ಮ ನೆಚ್ಚಿನ ಗುರುಗಳ ಆರೋಗ್ಯ ವಿಚಾರಿಸಲು ವೇಗಾಸ್ ಆಸ್ಪತ್ರೆಗೆ ಭೇಟಿ ನೀಡಿದರು. ಮಾಜಿ ನಾಯಕರಿಗೆ ಶಸ್ತ್ರ ಚಿಕಿತ್ಸೆ ಆಗಿರುವ ಬಗ್ಗೆ ಗೊತ್ತಾಯಿತು. ಅದಕ್ಕಾಗಿ ಅವರನ್ನು ಮಾತಾಡಿಸಲು ಆಗಮಿಸಿದ್ದೇನೆ. ಅವರು ಈಗಲೂ ಗಟ್ಟಿಮುಟ್ಟಿಯಾಗಿದ್ದಾರೆ ಎಂದು ಶಾಸಕ ಬಿ.ಸಿ.ಪಾಟೀಲ್ ಹೇಳಿದರು.
"ರಾಜಕಾರಣವೇ ಬೇರೆ, ಪ್ರೀತಿ-ವಿಶ್ವಾಸವೇ ಬೇರೆ"
ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ಭೇಟಿ ಬಳಿಕ ಮಾತನಾಡಿದ ಶಾಸಕ ಬಿ.ಸಿ.ಪಾಟೀಲ್, ನಮ್ಮ ಮಾಜಿ ನಾಯಕರ ಆರೋಗ್ಯ ವಿಚಾರಿಸಿ ಶುಭ ಕೋರಿದ್ದೇನೆ. ಅವರು ಈಗಲೂ ಬಹಳ ಗಟ್ಟಿಮುಟ್ಟಿಯಾಗಿದ್ದಾರೆ ಎಂದು ಹೇಳಿದರು. ಅಲ್ಲದೇ ಮನೆ ಬದಲಾದಾಕ್ಷಣಕ್ಕೆ ಮಾನವೀಯತೆ ಬದಲಾಗುವುದಿಲ್ಲ. ರಾಜಕೀಯವೇ ಬೇರೆ, ಮನುಷ್ಯತ್ವ, ಪ್ರೀತಿ, ವಿಶ್ವಾಸವೇ ಬೇರೆ ಎಂದು ಹೇಳಿದರು.
ಸದ್ಯಕ್ಕೆ ಸಂಪುಟ ವಿಸ್ತರಣೆಗಿಲ್ಲ ಮೂಹೂರ್ತ
ಈ ವಾರವಾಗುತ್ತೆ, ಮುಂದಿನವಾರ ಆಗುತ್ತದೆ. ಸಂಕ್ರಾಂತ್ರಿ ಸಮಯದಲ್ಲಿ ಸಂಪುಟ ವಿಸ್ತರಣೆ ಆಗುತ್ತದೆ ಎಂದೆಲ್ಲ ಸುದ್ದಿ ಹರಿದಾಡುತ್ತಿದೆ. ಆದರೆ, ಸದ್ಯದ ಮಟ್ಟಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಯಾವುದೇ ಮುಹೂರ್ತ ಫಿಕ್ಸ್ ಆಗಿಲ್ಲ. ಸಂಪುಟ ವಿಸ್ತರಣೆ ಅದ್ಯಾವಾಗ ಆಗುತ್ತದೆಯೋ ಏನೋ ನನಗೂ ಗೊತ್ತಿಲ್ಲ ಎಂದು ಸ್ವತಃ ಬಿ.ಸಿ.ಪಾಟೀಲ್ ಹೇಳಿದರು.
ಜಾರ್ಖಾಂಡ್ ಚುನಾವಣೆ ಮೇಲೆ ಲಕ್ಷ್ಯ
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಈಗ ಜಾರ್ಖಾಂಡ್ ವಿಧಾನಸಭಾ ಚುನಾವಣೆಯಲ್ಲಿ ಬ್ಯುಸಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಬಗ್ಗೆ ಇಂಥದ್ದೇ ದಿನಾಂಕ ಎಂಬ ಸ್ಪಷ್ಟ ಮಾಹಿತಿ ಇಲ್ಲ. ಅಮಿತ್ ಶಾ ಭೇಟಿ ಬಳಿಕ ಸಂಪುಟ ವಿಸ್ತರಣೆ ನಡೆಸಲಾಗುತ್ತದೆ ಎಂದು ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ನನಗೆ ಯಾವ ಖಾತೆ ಕೊಡುತ್ತಾರೋ ಗೊತ್ತಿಲ್ಲ
ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವುದಂತೂ ಪಕ್ಕಾ ಆಗಿದೆ. ಆದರೆ, ನಿಮಗೆ ಯಾವ ಖಾತೆ ಸಿಗಬಹುದು ಎಂದು ಪ್ರಶ್ನಿಸಿದಾಗ ಅದನ್ನಾದ್ರೂ ಸ್ವಲ್ಪ ಗುಟ್ಟಾಗಿಡಲು ಬಿಡಿ ಎಂದು ಹೇಳಿದರು. ಯಾವ ಖಾತೆ ನೀಡುತ್ತಾರೆ ಎಂಬ ಬಗ್ಗೆ ತಮಗೂ ಕೂಡಾ ಮಾಹಿತಿಯಿಲ್ಲ. ನಾನು ಇಂಥದ್ದೆ ಖಾತೆ ನೀಡಿ ಎಂದು ಡಿಮ್ಯಾಂಡ್ ಕೂಡಾ ಮಾಡಿಲ್ಲ ಎಂದು ಹೇಳಿದರು.