ಅಹವಾಲು ನೀಡಲು ಬಂದ ಮಹಿಳೆಗೆ ಶಾಸಕ ಲಿಂಬಾವಳಿ ಅವಾಜ್ ವಿಡಿಯೋ ವೈರಲ್!
ಬೆಂಗಳೂರು, ಸೆಪ್ಟೆಂಬರ್ 03: ಅಹವಾಲು ಹೇಳಿ ಕೊಳ್ಳಲು ಬಂದ ಮಹಿಳೆ ರುತ್ ಸಗಾಯಿ ಮೇರಿ ಅಮೀಲಾ ಎಂಬುವವರಿಗೆ ಶಾಸಕ ಅರವಿಂದ ಲಿಂಬಾವಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅರವಿಂದ ಲಿಂಬಾವಳಿ ನಡವಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸದ್ಯ ಅರವಿಂದ ಲಿಂಬಾವಳಿ ಮತ್ತು ಮಹಿಳೆಯ ನಡುವಿನ ನಿಂದನೆಯ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗುತ್ತಿದೆ.
ಕಳೆದ ಸೋಮವಾರ ಸುರಿದ ಮಳೆಯಿಂದಾಗಿ ಮಹದೇವಪುರದ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಪ್ರವಾಹ ಉಂಟಾಗಿ ಸಮಸ್ಯೆ ಎಂದುರಾಗಿತ್ತು. ಇದರಿಂದಾಗಿ ಗುರುವಾರ ಮಧ್ಯಾಹ್ನ ನಲ್ಲೂರಹಳ್ಳಿಯ ವೈಟ್ಫೀಲ್ಡ್ ಕೋಡಿ ಸರ್ಕಲ್ ಬಳಿಯ ರಾಜಕಾಲುವೆ ಒತ್ತುವರಿ ಆಗಿರುವ ಸ್ಥಳಕ್ಕೆ ಶಾಸಕ ಅರವಿಂದ ಲಿಂಬಾವಳಿ ಅಧಿಕಾರಿ ಜೊತೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮಳೆ ನೀರು ಹೋಗಲು ತೊಂದರೆಯಾಗಿದ್ದರಿಂದಾಗಿ ರಾಜಕಾಲುವೆಗೆ ಹೊಂದಿಕೊಂಡಂತೆ ಇರುವ ವಾಣಿಜ್ಯ ಕಟ್ಟಡದ ಕೆಲ ಭಾಗವನ್ನು ಜೆಸಿಬಿಯಿಂದ ತೆರವುಗೊಳಿಸುವ ವೇಳೆ ಸ್ಪಷ್ಟನೆ ನೀಡಲು ಮುಂದಾದ ರುತ್ ಸಗಾಯಿ ಮೇರಿ ಅಮೀಲಾ ಎಂಬ ಮಹಿಳೆ, ದಾಖಲೆ ಪತ್ರಗಳನ್ನು ತೋರಿಸಿ ಶಾಸಕರ ಬಳಿ ಅಳಲು ತೋಡಿಕೊಳ್ಳಲು ಮುಂದಾದರು. ಮಹಿಳೆ ಕೈಯಿಂದ ದಾಖಲೆ ಕಿತ್ತುಕೊಳ್ಳಲು ಶಾಸಕರು ಯತ್ನಿಸಿದರು. ಪತ್ರಗಳನ್ನು ಕೊಡಲು ನಿರಾಕರಿಸಿದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡು ಏಕ ವಚನದಲ್ಲಿ ನಿಂದಿಸಿದರು.
ನೀವು ನಮಗೂ ಎಂಎಲ್ಎ ಎಂದ ಮಹಿಳೆ
ಶಾಸಕರು ರಾಜಕಾಲುವೆ ಪರಿಶೀಲನೆಯನ್ನು ನಡೆಸುವ ವೇಳೆಯಲ್ಲಿ ಅಹವಾಲು ತಂದ ಮಹಿಳೆಯನ್ನು ನೋಡುತ್ತಿದ್ದಂತೆ ಶಾಸಕರು ಗರಂ ಆಗಿದ್ದಾರೆ. 'ಒತ್ತುವರಿ ಮಾಡಿಕೊಂಡು ನನಗೆ ನ್ಯಾಯ ಕೇಳಲು ಬರುತ್ತಿಯಾ, ಮಾನ ಮರ್ಯಾದೆ ಇಲ್ವ ನಿನಗೆ, ನನಗೂ ಬೇರೆ ಭಾಷೆ ಬರುತ್ತೆ. ಇವಳಿಗೆ ಮರ್ಯಾದೆ ಬೇರೆ ಕೇಡು, ಒದ್ದು ಒಳಗೆ ಹಾಕಿ' ಎಂದು ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದ್ದಕ್ಕೆ ಮಹಿಳೆಯು ಉತ್ತರಿಸಿದ್ದು 'ಮರ್ಯಾದೆಯಿಂದ ಮಾತನಾಡಿ. ಹೆಣ್ಣುಮಕ್ಕಳು ಅನ್ನುವ ಗೌರವ ಇರಲಿ. ನೀವು ನನಗೂ ಎಂಎಲ್ಎ. ಎಲ್ಲರಿಗೂ ಶಾಸಕರೇ' ಎಂದು ಮಹಿಳೆ ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಕಾಂಗ್ರೆಸ್ ಪ್ರತಿಭಟನೆಯಿಂದ ಮಹಿಳೆ ಬಿಡುಗಡೆ
ಅರವಿಂದ ಲಿಂಬಾವಳಿ ಸೂಚನೆಯ ಮೇರೆಗೆ ಲೇಡಿ ಪಿಸಿ ಮಹಿಳೆಯನ್ನು ಸ್ಥಳದಿಂದ ವೈಟ್ಫೀಲ್ಡ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರು, ಮಹಿಳೆಯನ್ನು ಸಂಜೆ ತನಕ ಅಲ್ಲೇ ಕೂರಿಸಿದ್ದರು. ರಾತ್ರಿ 7.30ರ ವೇಳೆಗೆ ಕಾಂಗ್ರೆಸ್ ಕಾರ್ಯಕರ್ತರು ಠಾಣೆ ಮುಂದೆ ಪ್ರತಿಭಟನೆಗೆ ಮುಂದಾದರು. ಬಳಿಕ ಪೊಲೀಸರು ಮಹಿಳೆಯ ಹೇಳಿಕೆ ದಾಖಲಿಸಿಕೊಂಡು ಮನೆಗೆ ಕಳುಹಿಸಿದರು.
ಶಾಸಕರಿಂದ ನಮಗೆ ಸುಮ್ಮನೆ ತೊಂದರೆ
'ನಾವು ರಾಜಕಾಲುವೆ ಒತ್ತುವರಿ ಮಾಡದೆ ಕಟ್ಟಡ ನಿರ್ಮಿಸಿದ್ದೇವೆ. ಕಾನೂನು ಪ್ರಕಾರ ಯೋಜನಾ ನಕ್ಷೆಗೆ ಬಿಬಿಎಂಪಿಯಿಂದ ಅನುಮೋದನೆ ಪಡೆದಿದ್ದೇವೆ. ನಕ್ಷೆ ಸೇರಿ ಇತರ ದಾಖಲೆ ತೋರಿಸಿ ಅಹವಾಲು ಹೇಳಿಕೊಳ್ಳಲು ಮುಂದಾದಾಗ ಶಾಸಕರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಮ್ಮ ಕಟ್ಟಡದ ಭಾಗದಲ್ಲಿ ಶೌಚಾಲಯ, ವಿದ್ಯುತ್ ಪರಿವರ್ತಕ ಇರುವುದರಿಂದ ಕಟ್ಟಡ ಒಡೆಯಬೇಡಿ, ಸಮಯ ಕೊಡಿ ಎಂದು ಮನವಿ ಮಾಡಿಕೊಂಡೆ ಎಂದು ಮಹಿಳೆ ತನ್ನ ಅಳಲನ್ನು ತೊಡಿಕೊಂಡಿದ್ದಾರೆ.
ಶಾಸಕರ ದಬ್ಬಾಳಿಕೆ ಮಿತಿ ಮೀರಿದೆ
ನಾವು ಇದೇ ಭಾಗದಲ್ಲಿ 54 ವರ್ಷಗಳಿಂದ ವಾಸವಾಗಿದ್ದೇವೆ. ನಾನು ವಾಸ್ತವ ಸ್ಥಿತಿ ಹೇಳಿಕೊಳ್ಳಲು ಹೋಗಿದ್ದೆ ಆದರೂ ಶಾಸಕರು ಏಕ ವಚನದಲ್ಲೇ ನಿಂದಿಸಿ ಹಲ್ಲೆ ಮಾಡಲು ಮುಂದಾದರು. ನನ್ನ ಕೈಯಿಂದ ದಾಖಲೆ ಕಸಿದುಕೊಂಡು ನೆಲಕ್ಕೆ ಎಸೆದರು. ಪೊಲೀಸರು ದೂರು ದಾಖಲಿಸಿಕೊಳ್ಳದೆ ಮನೆಗೆ ಕಳುಹಿಸಿದ್ದಾರೆ. ಶಾಸಕರ ದಬ್ಬಾಳಿಕೆ ಮಿತಿ ಮೀರಿದೆ' ಎಂದು ರುತ್ ಸಗಾಯಿ ಮೇರಿ ಅಮೀಲಾ ಆರೋಪಿಸಿದ್ದಾರೆ.