ಕೊರೊನಾ ಕರ್ಫ್ಯೂಗೆ ಬಿಜೆಪಿ ಸದಸ್ಯರಿಂದಲೇ ಅಪಸ್ವರ; ಜ.15ರಂದು ಮತ್ತೊಮ್ಮೆ ಸಭೆ
ಬೆಂಗಳೂರು, ಜನವರಿ 6: ಸಾರ್ವಜನಿಕ ವಲಯ ಮತ್ತು ಸ್ವಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾದ ಕಾರಣ ಕೋವಿಡ್ ನಿಯಂತ್ರಿಸಲು ರಾಜ್ಯ ಸರ್ಕಾರ ರಾಜ್ಯಾದ್ಯಂತ ತೆಗೆದುಕೊಂಡಿರುವ ಕಠಿಣ ನಿಯಮಗಳನ್ನು ಪುನರ್ ಪರಿಶೀಲಿಸಲು ಮುಂದಾಗಿದೆ.
ಜ.15ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳಲ್ಲಿ ನಿಯಮಗಳನ್ನು ಸಡಿಲಗೊಳಿಸುವ ಬಗ್ಗೆ ತೀರ್ಮಾನಿಸಲಿದ್ದಾರೆ.
ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ನಿಯಮಗಳನ್ನು ರಾಜ್ಯಾದ್ಯಂತ ಜಾರಿ ಮಾಡಿರುವುದಕ್ಕೆ ಸಂಪುಟದ ಅನೇಕ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ 15ರಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಸಿಎಂ ಚರ್ಚೆ ನಡೆಸಿದ ಬಳಿಕ ಪಾಸಿಟಿವಿಟ್ ದರ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಹಾಲಿ ಇರುವ ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಬೆಂಗಳೂರು ಹೊರತುಪಡಿಸಿ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ರಾಜಧಾನಿಯಲ್ಲೇ ಶೇ.80ರಷ್ಟು ದೈನಂದಿನ ಪ್ರಕರಣಗಳು ದಾಖಲಾಗುತ್ತಿವೆ. ಬೇರೆ ಜಿಲ್ಲೆಗಳಿಗೂ ಈ ಮಾರ್ಗಸೂಚಿಯನ್ನು ಅಳವಡಿಸುವುದು ಬೇಡ ಎಂದು ಹೇಳಿದ್ದಾರೆ.
ಜ.15ರಂದು ಮತ್ತೊಮ್ಮೆ ಕೋವಿಡ್ ಸಭೆ ಕರೆಯಲಾಗುವುದು. ಅಲ್ಲಿಯವರೆಗೆ ಎಷ್ಟು ಪ್ರಕರಣಗಳು ಬರುತ್ತವೆ ಎಂದು ನೋಡಿಕೊಂಡು ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಒಂದು ಮತ್ತು ಎರಡನೇ ಅಲೆಯಲ್ಲಿ ನಮಗೆ ಸಾಕಷ್ಟು ಪಾಠ ಕಲಿಯಲಾಗಿತ್ತು. ಬೆಂಗಳೂರು ಕೇಂದ್ರೀಕರಿಸಿ ನಾವು ಮಾರ್ಗಸೂಚಿ ರೂಪಿಸಿದರೆ ಕೆಲವರು ತಮ್ಮ ತಮ್ಮ ಊರುಗಳಿಗೆ ತೆರಳಿದರು. ಪರಿಣಾಮ ಗ್ರಾಮೀಣ ಭಾಗದಲ್ಲೂ ಇದು ಹಬ್ಬಿತು. ಸರ್ಕಾರ ಜೀವ ಮತ್ತು ಜೀವನವನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿ ರೂಪಿಸಿದೆ ಎಂದು ಸಮರ್ಥಿಸಿಕೊಂಡರು.
ಸ್ವಪಕ್ಷೀಯರಿಂದಲೇ
ವಿರೋಧ
ರಾಜ್ಯದಲ್ಲಿ
ಹೆಚ್ಚುತ್ತಿರುವ
ಕೋವಿಡ್
ಸೋಂಕು
ಮತ್ತು
ಓಮಿಕ್ರಾನ್
ತಡೆಗಟ್ಟಲು
ಸರ್ಕಾರ
ಜಾರಿಗೆ
ತಂದಿರುವ
ಕಠಿಣ
ನಿಯಮ
ಮತ್ತು
ವಾರಾಂತ್ಯ
ಕರ್ಫ್ಯೂಗೆ
ಆಡಳಿತಾರೂಢ
ಬಿಜೆಪಿಯಲ್ಲೇ
ವಿರೋಧ
ವ್ಯಕ್ತವಾಗಿದೆ.
ಸರ್ಕಾರದ ಕ್ರಮಕ್ಕೆ ಸಚಿವರು ಹಾಗೂ ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಈಗ ತಾನೇ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿದ್ದು, ಪುನಃ ಮತ್ತೆ ಇಂತಹ ನಿಯಮಗಳನ್ನು ಜಾರಿಗೆ ತರುವ ಅವಶ್ಯಕತೆ ಇತ್ತೆ ಎಂದು ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಹಲವು ಸಚಿವರು, ಶಾಸಕರ ಕ್ಷೇತ್ರಗಳಲ್ಲಿ ವ್ಯಾಪಾರಿ ವರ್ಗದವರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ವೀಕೆಂಡ್ ಕರ್ಫ್ಯೂ, ಶೇ.50ರಷ್ಟು ನಿಯಮ ಏಕಪಕ್ಷೀಯ ನಿರ್ಧಾರ ಎಂಬ ಅಸಮಾಧಾನ ಕೇಳಿಬರುತ್ತಿದೆ.
ಕರ್ನಾಟಕದಲ್ಲಿ ಕಂಡು ಬರುತ್ತಿರುವ ಒಟ್ಟು ಕೋವಿಡ್ ಹಾಗೂ ಓಮಿಕ್ರಾನ್ ಪ್ರಕರಣಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲೇ ಪ್ರತಿ ದಿನ ಶೇ.80ರಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಈ ನಗರಕ್ಕೆ ಮಾತ್ರ ಕಠಿಣ ನಿಯಮಗಳನ್ನು ಜಾರಿ ಮಾಡಬೇಕಾದ ಅಗತ್ಯವಿದೆ. ಇದನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುವ ಅಗತ್ಯವಾದರೂ ಏನಿತ್ತು ಎಂದು ಹೆಸರು ಹೇಳಲಿಚ್ಚಿಸದ ಅನೇಕರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಕಡಿಮೆ ಇದೆ. ಜಿಲ್ಲೆಗಳಲ್ಲಿ ಆತಂಕ, ಭಯದ ವಾತಾವರಣವಿಲ್ಲ. ಕೋವಿಡ್ ಕಡಿಮೆ ಇರುವ ಕಡೆ ವೀಕೆಂಡ್ ಕರ್ಫ್ಯೂ ಬೇಕಾಗಿರಲಿಲ್ಲ. ವೀಕೆಂಡ್ ಕರ್ಫ್ಯೂನಿಂದಾಗಿ ಜನಜೀವನ, ವ್ಯಾಪಾರ ವಹಿವಾಟಿಗೆ ತೊಡಕು ಉಂಟಾಗಿದೆ ಎಂಬುದು ಅನೇಕರ ಅಸಮಾಧಾನವಾಗಿದೆ.
ಇಂತಹ ಸಂದರ್ಭದಲ್ಲಿ ಬರಸಿಡಿಲಿನಂತೆ ವೀಕೆಂಡ್ ಕರ್ಫ್ಯೂ ಮಾಡಿರುವ ಬಗ್ಗೆ ಜನಸಾಮಾನ್ಯರು, ವ್ಯಾಪಾರಿ ವರ್ಗದವರಿಂದ ತಮ್ಮ, ತಮ್ಮ ಕ್ಷೇತ್ರದ ಸಚಿವರು, ಶಾಸಕರಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸಾಧ್ಯವಾದಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಲಿ. ಇದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಜಿಲ್ಲಾ ಕೇಂದ್ರಗಳಲ್ಲಿ ಕಡಿಮೆ ಸೋಂಕು ದಾಖಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಅಷ್ಟಾಗಿ ಪರಿಣಾಮ ಬೀರಿಲ್ಲ. ಎಲ್ಲಾ ವರ್ಗದವರೂ ಅಸಮಾಧಾನಗೊಂಡರೆ ಅವರನ್ನು ನಿಭಾಯಿಸುವುದು ಹೇಗೆಂದು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ.
ಸಚಿವರು ಮತ್ತು ಶಾಸಕರು ಹೊಸ ಮಾರ್ಗಸೂಚಿಯಲ್ಲಿ ವಿನಾಯಿತಿ ಕೊಡಿ ಎಂದು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸುತ್ತಿದ್ದು, ಸಚಿವರ ಜತೆ ಸಂಪುಟದಲ್ಲಿ ಚರ್ಚಿಸಿ ಕಠಿಣ ನಿಯಮಗಳನ್ನು ಜಾರಿ ಮಾಡುವುದಾಗಿ ಹೇಳಿದ್ದರು. ಆದರೆ, ಏಕಾಏಕಿ ಈ ನಿಯಮಗಳನ್ನು ಜಾರಿ ಮಾಡಿರುವುದರಿಂದ ನಾವು ಕ್ಷೇತ್ರಗಳಲ್ಲಿ ಸಾರ್ವಜನಿಕರಿಂದ ಹಿಡಿ ಶಾಪ ಹಾಕಿಸಿಕೊಳ್ಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಂಪುಟ ಸಭೆಗೂ ಮುನ್ನವೇ ಇಂತಹ ನಿಯಮಗಳನ್ನು ಜಾರಿ ಮಾಡಬೇಕಾದ ಅಗತ್ಯವಿರಲಿಲ್ಲ. ಬೆಂಗಳೂರಿಗೆ ಹೊರ ರಾಜ್ಯ ಮತ್ತು ವಿದೇಶಗಳಿಂದ ಬರುವವರಿಗೆ ಕಡಿವಾಣ ಹಾಕುವುದು, ವಿದೇಶದಿಂದ ಬಂದವರಿಗೆ ಎರಡು ವಾರ ಹೋಮ್ ಕ್ವಾರಂಟೈನ್ ಕಡ್ಡಾಯ ಮಾಡುವುದು, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ಬಿಗಿಯಾದ ತಪಾಸಣೆ ನಡೆಸುವ ನಿಯಮಗಳನ್ನು ಜಾರಿ ಮಾಡಲಿ. ಆದರೆ, ರಾಜ್ಯಾದ್ಯಂತ ಕಠಿಣ ನಿಯಮಗಳನ್ನು ಹೇರಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಸಚಿವ
ಕೆ.ಎಸ್.
ಈಶ್ವರಪ್ಪ
ಬೇಸರ
ಈ
ನಡುವೆ
ಗ್ರಾಮೀಣಾಭಿವೃದ್ಧಿ
ಸಚಿವ
ಕೆ.ಎಸ್.
ಈಶ್ವರಪ್ಪ
ಬೆಂಗಳೂರಿನಲ್ಲಿ
ಕೊರೊನಾ
ಹೆಚ್ಚು
ಇರುವುದು
ನಿಜ.
ರಾಜ್ಯದ
ಎಲ್ಲ
ಕಡೆಯೂ
ಇದು
ಇಲ್ಲ.
ಕೆಲವೆಡೆ
2-3-4-5
ಈ
ರೀತಿ
ಇದೆ.
ಹೆಚ್ಚು
ಅಂದರೆ
10
ರವರೆಗೆ
ಈ
ಪ್ರಕರಣಗಳಿವೆ.
ಬೆಂಗಳೂರಿನಲ್ಲಿ
ಕೋವಿಡ್
ನಿಯಂತ್ರಣ
ಮಾಡುವುದು
ಎಲ್ಲರ
ಕರ್ತವ್ಯವಾಗಿದೆ
ಎಂದು
ಸಚಿವ
ಕೆ.ಎಸ್.
ಈಶ್ವರಪ್ಪ
ತಿಳಿಸಿದರು.
ಆದರೆ, ರಾಜಧಾನಿಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿರುವುದರಿಂದ ಇಡೀ ರಾಜ್ಯಕ್ಕೆ ನಿಯಮ ತರುವುದು ಸರಿಯೇ ಎಂದು ಅನೇಕರು ನನಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆಟೋ ಚಾಲಕರು, ಕೂಲಿ ಕಾರ್ಮಿಕರು, ಟೈಲರ್, ವ್ಯಾಪಾರಿಗಳು ಜೀವನಕ್ಕೆ ಎಲ್ಲಿ ಹೋಗಬೇಕು? ಎಲ್ಲರಿಗೂ ತೊಂದರೆ ಆಗುತ್ತದೆ. ಇಡೀ ರಾಜ್ಯದ ಜನರ ಅಭಿಪ್ರಾಯವನ್ನು ಸಚಿವ ಸಂಪುಟದ ಹಾಗೂ ಮುಖ್ಯಮಂತ್ರಿಗಳ ಮುಂದೆ ಚರ್ಚಿಸುವುದಾಗಿ ಸಚಿವ ಈಶ್ವರಪ್ಪ ಸಚಿವ ಸಂಪುಟ ಸಭೆಗೂ ಮುನ್ನ ಹೇಳಿದ್ದರು.
Recommended Video