'ಮುಖ್ಯಮಂತ್ರಿ'ಯಾಗಿ ಪ್ರಮಾಣವಚನ: ಮಾಧುಸ್ವಾಮಿ ಯಡವಟ್ಟು
Recommended Video
ಬೆಂಗಳೂರು, ಆಗಸ್ಟ್ 20: ಸಮ್ಮಿಶ್ರ ಸರ್ಕಾರದ ಸಂಧ್ಯಾಕಾಲದಲ್ಲಿ ವಿಧಾನಸಭೆಯಲ್ಲಿ ತೀವ್ರ ಚರ್ಚೆ ನಡೆದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ನ ಅನುಭವಿ ನಾಯಕರು ಕಾನೂನಿನ ಪುಸ್ತಕದ ಮೂಲೆ ಮೂಲೆಯಿಂದ ಅಂಶಗಳನ್ನು ಕೆದಕಿ ತಂದು ಪುಂಖಾನುಪುಂಖವಾಗಿ ಹೇಳುತ್ತಿದ್ದರೆ, ವಿರೋಧಪಕ್ಷದ ಸ್ಥಾನದಲ್ಲಿ ಕುಳಿತಿದ್ದ ಬಿಜೆಪಿ ನಾಯಕರು ಮಾತಿಲ್ಲದಂತೆ ಕುಳಿತಿದ್ದರು. ಆಗ ಉಳಿದ 104 ಶಾಸಕರ ಪರವಾಗಿ ಬ್ಯಾಟ್ ಬೀಸಿದವರು ತುಮಕೂರಿನ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿಎಸ್ ಮಾಧುಸ್ವಾಮಿ.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಇಡೀ ವಿರೋಧಪಕ್ಷದ ಶಕ್ತಿಯಂತೆ ಮಾಧುಸ್ವಾಮಿ ಮಾತನಾಡಿದ್ದರು. ಕಾನೂನಿನ ಜ್ಞಾನವುಳ್ಳ ಮಾಧುಸ್ವಾಮಿ ಮಾತಿನ ವೈಖರಿಗೆ ಆಡಳಿತಪಕ್ಷದವರೂ ತಲೆದೂಗಿದ್ದರು. ಉತ್ತಮ ಸಂಸದೀಯಪಟುವಾಗಿ ಗುರುತಿಸಿಕೊಂಡ ಮಾಧುಸ್ವಾಮಿ ಅವರು ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎನ್ನುವುದು ಮೊದಲೇ ಖಾತ್ರಿಯಾಗಿತ್ತು.
ಯಡಿಯೂರಪ್ಪ ಸಂಪುಟದಲ್ಲಿ ಯಾವ ಜಾತಿಯ ಶಾಸಕರಿಗೆ ಸ್ಥಾನ?
ನಿರೀಕ್ಷೆಯಂತೆಯೇ ಮಾಧುಸ್ವಾಮಿ ಅವರು ಮಂಗಳವಾರ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಯಡಿಯೂರಪ್ಪ ಅವರ ಸಂಪುಟ ಸೇರಿದ್ದಾರೆ. ಅವರಿಗೆ ಮಹತ್ವದ ಖಾತೆಯೂ ಸಿಗುವ ಸಾಧ್ಯತೆ ಇದೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ!
ಆದರೆ, ಮೊದಲ ಬಾರಿಗೆ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸುವ ಉತ್ಸಾಹದಲ್ಲಿ ಅವರು ಯಡವಟ್ಟು ಮಾಡಿಕೊಂಡರು. ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸುವ ವೇಳೆ ಅವರು 'ನಾನು... ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ' ಎಂದು ಹೇಳುವ ಬದಲು, 'ನಾನು ಮುಖ್ಯಮಂತ್ರಿಯಾಗಿ...' ಎಂದು ಉಚ್ಚರಿಸಿ ಪೇಚಿಗೆ ಸಿಲುಕಿದರು.
ತಪ್ಪು ಸರಿಪಡಿಸಿಕೊಂಡ ಮಾಧುಸ್ವಾಮಿ
ಕೂಡಲೇ ಎಚ್ಚೆತ್ತು ತಪ್ಪನ್ನು ತಿದ್ದಿಕೊಂಡ ಮಾಧುಸ್ವಾಮಿ ಅವರು 'ಮಂತ್ರಿಯಾಗಿ' ಎಂದು ಸರಿಪಡಿಸಿಕೊಂಡು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲಿದ್ದವರು ಮತ್ತು ಸಭಿಕರಲ್ಲಿ ನಗು ಉಕ್ಕಿತು. ಮಾಧುಸ್ವಾಮಿ ಕೂಡ ನಗುತ್ತಲೇ ತಮ್ಮ ಪ್ರಮಾಣವಚನ ಪ್ರಕ್ರಿಯೆ ಮುಗಿಸಿದರು. ಬಳಿಕ ಪ್ರಮಾಣವಚನ ಪತ್ರಕ್ಕೆ ಸಹಿ ಹಾಕಿದರು.
ಕೈ ತಪ್ಪಿದ ಸಚಿವ ಸ್ಥಾನ : ಯಾರು, ಏನು ಹೇಳಿದರು?
ಬಿಜೆಪಿ ಪಾಲಿನ ಗುರಾಣಿ
ಚಿಕ್ಕನಾಯಕನಹಳ್ಳಿಯ ಶಾಸಕ ಮಾಧುಸ್ವಾಮಿ ಅವರು ಲಿಂಗಾಯತ ಕೋಟಾದಡಿ ಸಚಿವ ಸ್ಥಾನಪಡೆದಿದ್ದಾರೆ. ವಿಧಾನಸಭೆ ಕಲಾಪದ ಚರ್ಚೆಯ ವೇಳೆ ಎದುರಾಳಿಗಳನ್ನು ಎದುರಿಸುವ ತಮ್ಮ ಸಾಮರ್ಥ್ಯ ತೋರಿಸಿರುವ ಅವರು, ಬಿಜೆಪಿಯ ಹೊಸ ಸರ್ಕಾರದ ಪಾಲಿಗೂ ಗುರಾಣಿಯಾಗಲಿದ್ದಾರೆ. ಯಡಿಯೂರಪ್ಪ ಅವರನ್ನು ಮತ್ತು ಪಕ್ಷವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ಮುಂಚೂಣಿಯಲ್ಲಿದ್ದರು. ಯಡಿಯೂರಪ್ಪ ಅವರೊಂದಿಗೆ ಕೆಜೆಪಿಗೂ ಹೋಗಿ ಬಂದಿದ್ದರು. ಹೀಗಾಗಿ ಅವರು ಸಚಿವರ ಪಟ್ಟಿಯಲ್ಲಿ ಸುಲಭವಾಗಿ ಸ್ಥಾನಪಡೆದುಕೊಂಡಿದ್ದಾರೆ.
ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ
'ನಾನು ಹಳ್ಳಿಯಿಂದ ಬಂದವನು. ಹೀಗಾಗಿ ರೈತರಿಗೆ ಸಂಬಂಧಿಸಿದ ಖಾತೆ ಕೊಟ್ಟರೆ ಅನುಭವ ಬಳಸಿಕೊಂಡು ಸ್ವಲ್ಪ ಚೆನ್ನಾಗಿ ಕೆಲಸ ಮಾಡುತ್ತೇನೆ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಆದರೆ, ಖಾತೆ ಹಂಚಿಕೆ ಮಾಡುವವರು ನಾಯಕರು. ಅವರಿಗೆ ಯಾವ ಅಭಿಪ್ರಾಯ ಇದೆಯೋ ಗೊತ್ತಿಲ್ಲ. ಯಾವ ಖಾತೆ ಕೊಟ್ಟರೂ ಅದನ್ನು ನಿಭಾಯಿಸುವುದು ನಮ್ಮ ಕರ್ತವ್ಯ' ಎಂದು ಹೇಳಿದರು.